ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಇರಲಿಲ್ಲ!
ದೆಹಲಿಯಲ್ಲಿ ಗುರುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ಆರ್ಥಿಕ ತಜ್ಞರು ಹಾಗೂ ವಿವಿಧ ವಲಯಗಳ ಪರಿಣಿತರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಯಿತು. ಆದರೆ ಈ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿರಲಿಲ್ಲ.
ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಲು ಇರುವ ಮಾರ್ಗಗಳ ಕುರಿತಾಗಿ ಮೋದಿ ಅವರು ಕಳೆದ ಕೆಲವು ದಿನಗಳಿಂದ ಉದ್ಯಮಿಗಳು ಆರ್ಥಿಕ ತಜ್ಞರೊಂದಿಗೆ ಸರಣಿ ಸಭೆ ನಡೆಸುತ್ತಿದ್ದು, ಗುರುವಾರ ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತಾಗಿಯೂ ಚರ್ಚಿಸಿದರು.
''ದೇಶದ ಆರ್ಥಿಕತೆ ತಳಹದಿ ಸುಭದ್ರವಾಗಿದ್ದು, ಭಾರತದ ಆರ್ಥಿಕತೆಗೆ ಪುಟಿದೇಳುವ ಸಾಮರ್ಥ್ಯವಿದೆ. ಪ್ರವಾಸ, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಕೃಷಿ ಆಧಾರಿತ ಉದ್ಯಮಗಳು ಆರ್ಥಿಕ ಚೇತರಿಕೆ ಮತ್ತು ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೊತೆಗೆ ಸಭೆಯಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವಂತಾಗಲು ವಿಶೇಷ ಪ್ರಯತ್ನಗಳನ್ನು ಮಾಡುವಂತೆ ಕರೆ ನೀಡಿದರು.
ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಂಪುಟ ಸಚಿವರು, ನೀತಿ ಆಯೋಗದ ಅಧಿಕಾರಿಗಳು, ಸರ್ಕಾರದ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೌರು ಹಾಜರಿದ್ದರು. ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಿದರ ಪರಿಣಾಮ ಅವರ ಅನುಪಸ್ಥಿತಿಯಲ್ಲಿ ಮೋದಿ ಸಭೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಇನ್ನು ಬಜೆಟ್ ಸಭೆಯಲ್ಲಿ ನಿರ್ಮಲಾ ಸೀತರಾಮನ್ ಗೌರು ಕುರಿತಾಗಿ ಎಡಪಕ್ಷಗಳು ಭಾರೀ ಟೀಕೆ ಮಾಡಿವೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದು ''ಮಹಿಳೆಯ ಕೆಲಸ ಮಾಡಲು ಎಷ್ಟು ಪುರುಷರು ಬೇಕು?'' ಎಂದು ಕಿಡಿಕಾರಿದೆ. ನೆಟ್ಟಿಗರು ಹಣಕಾಸು ಸಚಿವರ ಗೌರು ಹಾಜರಿ ಬಗ್ಗೆ ಸಾಕಷ್ಟು ಟ್ರೋಲ್ ಮಾಡಿದ್ದಾರೆ.