ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿರುವ ಪ್ರಕಾರ, 27 ರಾಜ್ಯಗಳ 9879.61 ಕೋಟಿ ರುಪಾಯಿ ಮೌಲ್ಯದ ಬಂಡವಾಳ ವೆಚ್ಚಕ್ಕೆ (ಕ್ಯಾಪಿಟಲ್ ಎಕ್ಸ್ ಪೆಂಡಿಚರ್) ಅನುಮತಿ ನೀಡಿದೆ. ಅದರಲ್ಲಿ 4,939.81 ಕೋಟಿ ರುಪಾಯಿಯನ್ನು ಮೊದಲ ಕಂತಾಗಿ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಸಚಿವಾಲಯದಿಂದ ಹೇಳಿಕೆ ನೀಡಿದ್ದು, ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ "ಬಂಡವಾಳ ವೆಚ್ಚಕ್ಕೆ ರಾಜ್ಯಗಳಿಗೆ ವಿಶೇಷ ನೆರವು" ಎಂದು ಅಕ್ಟೋಬರ್ 12ನೇ ತಾರೀಕಿನಂದು ಘೋಷಣೆ ಮಾಡಿದ ಮೇಲೆ ತಮಿಳುನಾಡು ಹೊರತುಪಡಿಸಿ ಎಲ್ಲ ರಾಜ್ಯಗಳು ಅನುಕೂಲವನ್ನು ಪಡೆದಿವೆ ಎಂದು ತಿಳಿಸಲಾಗಿದೆ.
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಈ ವರ್ಷ ರಾಜ್ಯ ಸರ್ಕಾರಗಳ ತೆರಿಗೆ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ಆರ್ಥಿಕವಾಗಿ ಸಂಕಷ್ಟದ ಸಮಯವನ್ನು ಎದುರಿಸುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರಗಳಿಂದ ಬಂಡವಾಳ ವೆಚ್ಚವನ್ನು ಹೆಚ್ಚು ಮಾಡಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ.

ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಪೂರೈಕೆ, ನೀರಾವರಿ, ವಿದ್ಯುತ್, ಸಾರಿಗೆ, ಶಿಕ್ಷಣ, ನಗರಾಭಿವೃದ್ಧಿ ಸೇರಿದಂತೆ ವಿವಿಧ ವಲಯಗಳಿಗೆ ಬಂಡವಾಳ ವೆಚ್ಚ ಯೋಜನೆಗಳನ್ನು ಮಂಜೂರು ಮಾಡಲಾಗುತ್ತಿದೆ. ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಸರ್ಕಾರದಿಂದ ರಾಜ್ಯಗಳಿಗೆ ಬಡ್ಡಿರಹಿತವಾಗಿ ಐವತ್ತು ವರ್ಷಗಳಿಗೆ ಹನ್ನೆರಡು ಸಾವಿರ ಕೋಟಿ ರುಪಾಯಿ ಒದಗಿಸುವ ವಿಶೇಷ ಸಾಲ ಯೋಜನೆ ಇದು.


Click it and Unblock the Notifications