"ಆತ್ಮನಿರ್ಭರ್ ಭಾರತ್": EPFO ಖಾತೆದಾರರಿಗೆ ಮೋದಿ ಸರ್ಕಾರದಿಂದ ಬಿಗ್ ರಿಲೀಫ್
1991ರ ನಂತರದಲ್ಲಿ ಭಾರತ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಕೊರೊನಾ. ಈ ಕೊರೊನಾ ವ್ಯಾಪಿಸಿರುವ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಅದರಿಂದ ನೆಲ ಕಚ್ಚಿರುವ ದೇಶದ ಆರ್ಥಿಕತೆಗೆ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಅನ್ನು ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಅದಕ್ಕೆ "ಆತ್ಮನಿರ್ಭರ್ ಭಾರತ್" ಪ್ಯಾಕೇಜ್ ಎಂದು ಹೆಸರಿಡಲಾಗಿತ್ತು.
ಈ ಪಾಕೇಜ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರ ಜತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡ ಇದ್ದರು.
ಕ್ಷೇತ್ರವಾರು ಎಂಬಂತೆ ವಿಭಾಗ ಮಾಡಿಕೊಂಡು ಯೋಜನೆಗಳ ಘೋಷಣೆ ಮಾಡಲಾಗಿದೆ.
ಟಿಡಿಎಸ್ನಲ್ಲಿ 25 ಪರ್ಸೆಂಟ್ ಕಡಿತ : ನಿರ್ಮಲಾ ಸೀತಾರಾಮನ್
ಆ ಪೈಕಿ ಯಾವ ಕ್ಷೇತ್ರಕ್ಕೆ ಎಷ್ಟು ಯೋಜನೆ ಎಂಬ ವಿವರ ಹೀಗಿದೆ.
* ಎಂಎಸ್ ಎಂಇಗಳಿಗೆ 6
* EPFಗೆ ಸಂಬಂಧಿಸಿದಂತೆ 2
* ಎನ್ ಬಿಎಫ್ ಸಿ ಮತ್ತು ಎಂಎಫ್ ಐಗಳಿಗೆ 2
* ಡಿಸ್ಕಾಂಗಳಿಗೆ 1
* ಕಾಂಟ್ರ್ಯಾಕ್ಟರ್ಸ್ ಗಳಿಗೆ 1
* ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದಂತೆ ಒಂದು ಘೋಷಣೆ ಮಾಡುವುದಾಗಿ ಹೇಳಿದರು.
ಈ ಲೇಖನದಲ್ಲಿ EPFಗೆ ಸಂಬಂಧಿಸಿದ ಘೋಷಣೆಗಳ ಸಂಪೂರ್ಣ ವಿವರ ಹೀಗಿದೆ:
ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸರ್ಕಾರ ಪಾವತಿಸಿತ್ತು
ಏನೇ ಕೆಲಸಕ್ಕೆ ವಾಪಸ್ ಅಂತ ಆದರೂ ಒತ್ತಡ ಇದ್ದೇ ಇರುತ್ತದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ (PMGKY) ಅರ್ಹ ಸಂಸ್ಥೆಗಳ ಉದ್ಯೋಗಿಗಳ ಪಿಎಫ್ 12 ಪರ್ಸೆಂಟ್ ಮತ್ತು ಉದ್ಯೋಗದಾತರು ಭರಿಸಬೇಕಿದ್ದ 12 ಪರ್ಸೆಂಟ್ ಪಿಎಫ್ ಅನ್ನು ಇಪಿಎಫ್ ಖಾತೆಗಳಿಗೆ ಸರ್ಕಾರವೇ ಜಮೆ ಮಾಡಿತ್ತು. ಈ ಹಿಂದೆ 2020ರ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಿಗೆ ಪಾವತಿ ಮಾಡುವುದಾಗಿ ಘೋಷಿಸಲಾಗಿತ್ತು.
ಮುಂದಿನ ಮೂರು ತಿಂಗಳು ಸರ್ಕಾರದಿಂದಲೇ ಪಾವತಿ
ಇದೀಗ ಇದೇ ರೀತಿ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಪಾವತಿಸಬೇಕಿದ್ದ ಪಿಎಫ್ ಮೊತ್ತವನ್ನು ಮುಂದಿನ ಮೂರು ತಿಂಗಳ ವೇತನಕ್ಕೆ ಕೂಡ ಸರ್ಕಾರದಿಂದಲೇ ನೀಡಲಾಗುತ್ತದೆ. ಅಂದರೆ 2020ರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ವೇತನದ ಸಂದರ್ಭದಲ್ಲೂ ಪಿಎಫ್ ಮೊತ್ತವನ್ನು ಸರ್ಕಾರವೇ ಖಾತೆಗಳಿಗೆ ಜಮೆ ಮಾಡುತ್ತದೆ. ಇದರಿಂದ 3.67 ಲಕ್ಷ ಸಂಸ್ಥೆಗಳಿಗೆ, 72.22 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಿ, 2500 ಕೋಟಿ ರುಪಾಯಿ ನಗದು ಪರಿಹಾರ ದೊರಕಿದಂತೆ ಆಗುತ್ತದೆ.
12 ಪರ್ಸೆಂಟ್ ಕೊಡುಗೆಯನ್ನು 10 ಪರ್ಸೆಂಟ್ ಗೆ ಇಳಿಕೆ
ವ್ಯಾಪಾರ- ವ್ಯವಹಾರದಲ್ಲಿ ಮುಂದಿನ ತ್ರೈಮಾಸಿಕದಲ್ಲಿ ಉತ್ಪಾದನೆ ಹೆಚ್ಚಾಗಬೇಕಿದೆ. ಉದ್ಯೋಗಿಗಳ ಕೈಗೆ ಬರುವ ವೇತನದ ಪ್ರಮಾಣ ಹೆಚ್ಚಾಗಬೇಕು. ಜತೆಗೆ ಕಾರ್ಮಿಕ ಭವಿಷ್ಯ ನಿಧಿ ಬಾಕಿ ಪಾವತಿಯಿಂದ ಉದ್ಯೋಗದಾತರು ಕೂಡ ನಿರಾಳ ಆಗಬೇಕು. ಆದ್ದರಿಂದ ಸದ್ಯಕ್ಕೆ ಇರುವ ಉದ್ಯೋಗಿ ಮತ್ತು ಉದ್ಯೋಗದಾತರ ತಲಾ 12 ಪರ್ಸೆಂಟ್ ಕೊಡುಗೆಯನ್ನು 10 ಪರ್ಸೆಂಟ್ ಗೆ ಇಳಿಸಲಾಗಿದೆ.
ಸಿಪಿಎಸ್ ಇ ಹಾಗೂ ಪಿಎಸ್ ಯುಗಳಿಗೆ ಅನ್ವಯಿಸಲ್ಲ
ಯಾವುದೆಲ್ಲ ಸಂಸ್ಥೆಗಳು ಇಪಿಎಫ್ ಒ ಅಡಿಯಲ್ಲಿ ಬರುತ್ತವೋ ಅಂಥಲ್ಲಿ ಮುಂದಿನ ಮೂರು ತಿಂಗಳು ಹೀಗೇ ಇರುತ್ತದೆ. ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 24 ಪರ್ಸೆಂಟ್ ಬೆಂಬಲ ದೊರೆಯುವುದಿಲ್ಲವೋ ಅಂಥವರಿಗೆ ಈ ಹತ್ತು ಪರ್ಸೆಂಟ್ ಅನ್ವಯಿಸುತ್ತದೆ. ಸಿಪಿಎಸ್ ಇ ಹಾಗೂ ಪಿಎಸ್ ಯುಗಳಲ್ಲಿ 12 ಪರ್ಸೆಂಟ್ ಕೊಡುಗೆ ಮುಂದುವರಿಯಲಿದೆ. ಇದರಿಂದ 6.5 ಲಕ್ಷ ಸಂಸ್ಥೆಗಳ 4.3 ಕೋಟಿ ಉದ್ಯೋಗಿಗಳಿಗೆ ಅನುಕೂಲ ಆಗುತ್ತದೆ. ಇನ್ನು ಮುಂದಿನ ಮೂರು ತಿಂಗಳಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಿಗಳು 6750 ಕೋಟಿ ರುಪಾಯಿ ನಗದು ದೊರೆಯುತ್ತದೆ.