ಕೊರೊನಾ ಆತಂಕ: ತುರ್ತಿಲ್ಲದಿದ್ದರೆ ಸಿಂಗಪೂರ್ ಗೆ ಹೋಗದಿರಿ ಎಂದ ಕೇಂದ್ರ
ತುರ್ತಾದ ಸನ್ನಿವೇಶ ಇಲ್ಲದಿದ್ದಲ್ಲಿ ಸಿಂಗಪೂರ್ ಗೆ ತೆರಳಬೇಡಿ ಎಂದು ಕೇಂದ್ರ ಸರ್ಕಾರವು ಶನಿವಾರ ಎಚ್ಚರಿಕೆ ನೀಡಿದೆ. ಕೊರೊನಾ ವೈರಾಣು ಭೀತಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ಕಠ್ಮಂಡು, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಬರುವ ಪ್ರಯಾಣಿಕರನ್ನೂ ಸೋಮವಾರದಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.
ಸದ್ಯಕ್ಕೆ ಚೀನಾ, ಹಾಂಕಾಂಗ್, ಥಾಯ್ಲೆಂಡ್, ದಕ್ಷಿಣ ಕೊರಿಯಾ, ಸಿಂಗಪೂರ್ ಮತ್ತು ಜಪಾನ್ ನಿಂದ ಬರುವ ಪ್ರಯಾಣಿಕರನ್ನು ದೇಶದ 21 ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ತುರ್ತು ಅಗತ್ಯಗಳು ಇಲದಿದ್ದಲ್ಲಿ ಸಿಂಗಪೂರ್ ಗೆ ತೆರಳದಿರುವಂತೆ ಎಚ್ಚರಿಕೆ ನೀಡಲಾಗಿದೆ. ಈ ತನಕ 21,805 ಪ್ರಯಾಣಿಕರನ್ನು ಸಾಮುದಾಯಿಕ ನಿಗಾದ ಅಡಿಯಲ್ಲಿ ತರಲಾಗಿದೆ. ಇದರ ಜತೆಗೆ 3,97,152 ವಿಮಾನ ಪ್ರಯಾಣಿಕರನ್ನು ಹಾಗೂ 9,695 ಪ್ರವಾಸಿಗರನ್ನು ಸಮುದ್ರ ಬಂದರುಗಳಲ್ಲಿ ಪರೀಕ್ಷೆ ಮಾಡಲಾಗಿದೆ ಎನ್ನಲಾಗಿದೆ.