ಗುಡ್ನ್ಯೂಸ್: MSME ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಕೇಂದ್ರ ನಿರ್ಧಾರ
ನವದೆಹಲಿ, ಸೆಪ್ಟೆಂಬರ್ 10: ಪ್ರಸ್ತುತ ಸುಮಾರು 11 ಕೋಟಿ ಜನರು ಉದ್ಯೋಗ ಹೊಂದಿರುವ ಸೂಕ್ಮ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರ್ಕಾರ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನೀತಿ ಆಯೋಗ್ ಅವರಿಂದ ಆತ್ಮನಿರ್ಭರ್ ಭಾರತ್ ಅರೈಸ್ ಅಟಲ್ ನ್ಯೂ ಇಂಡಿಯಾ ಚಾಲೆಂಜ್ಗಳನ್ನು ಪ್ರಾರಂಭಿಸಲು ಆಯೋಜಿಸಲಾದ ವರ್ಚುವಲ್ ಮೀಟ್ನಲ್ಲಿ ಮಾತನಾಡಿದ ಗಡ್ಕರಿ ''ಜಿಡಿಪಿಗೆ ಎಂಎಸ್ಎಂಇ ಕೊಡುಗೆಯನ್ನು ಸುಮಾರು ಶೇಕಡಾ 30 ರಿಂದ 50 ಕ್ಕೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಇದರ ಜೊತೆಗೆ ರಫ್ತುಗಳಲ್ಲಿ ಶೇಕಡಾ 49 ಪ್ರತಿಶತದಿಂದ 60 ಪ್ರತಿಶತದವರೆಗೆ ಏರಿಕೆಯ ಗುರಿ ಹೊಂದಿದೆ'' ಎಂದಿದ್ದಾರೆ.
ನೀತಿ ಆಯೋಗ್ನ ಆತ್ಮನಿರ್ಭರ ಭಾರತ್ ಅರೈಸ್ ಅಟಲ್ ನ್ಯೂ ಇಂಡಿಯಾ ಚಾಲೆಂಜ್ ಉಪಕ್ರಮವನ್ನು ಗಡ್ಕರಿ ಶ್ಲಾಘಿಸಿದರು ಮತ್ತು ಮೌಲ್ಯವರ್ಧನೆಯನ್ನು ಖಾತರಿಪಡಿಸುವ ವಿವಿಧ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹೊಸ ತಂತ್ರಜ್ಞಾನವನ್ನು ಬಳಸುವುದನ್ನು ಉತ್ತೇಜಿಸುವಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
115 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳನ್ನು ಬೆಳವಣಿಗೆಯ ಪಥದಲ್ಲಿ ತಂದಾಗ ದೇಶದ ಬೆಳವಣಿಗೆ ಮತ್ತಷ್ಟು ವೇಗವಾಗಲಿದೆ ಎಂದು ಸಚಿವರು ಒತ್ತಿ ಹೇಳಿದರು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಪ್ರದೇಶಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಪ್ರಧಾನಿ ಒತ್ತು ನೀಡಿದ್ದಾರೆ ಎಂದು ಅವರು ಗಮನಸೆಳೆದರು.
ಸಂಶೋಧನೆ, ನಾವೀನ್ಯತೆಗಳನ್ನು ವೇಗವರ್ಧಿಸಲು ಮತ್ತು ವಲಯದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಒದಗಿಸಲು ಸಚಿವಾಲಯಗಳು ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳೊಂದಿಗೆ ಪೂರ್ವಭಾವಿಯಾಗಿ ಸಹಕರಿಸುವುದು ಆತ್ಮನಿರ್ಭರ್ ಭಾರತ್ ARISE ಅಟಲ್ ನ್ಯೂ ಇಂಡಿಯಾ ಚಾಲೆಂಜಸ್ ಕಾರ್ಯಕ್ರಮದ ಉದ್ದೇಶವಾಗಿದೆ.