ಸಾರ್ವಜನಿಕ ಬ್ಯಾಂಕ್ ಗಳಿಗೆ ವೆಚ್ಚ ಕಡಿತದ ಸೂಚನೆ ಕಳಿಸಿದ ಕೇಂದ್ರ
ಯಾವ್ಯಾವ ಖರ್ಚನ್ನು ಮುಂದೂಡಬಹುದೋ ಅವುಗಳನ್ನು ಮುಂದಕ್ಕೆ ಹಾಕುವಂತೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಸರ್ಕಾರ ಸೂಚಿಸಿದೆ. ಪ್ರಸಕ್ತ ಹಣ ಕಾಸು ವರ್ಷಕ್ಕೆ ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಮುಂದಿನ ವರ್ಷ ಮಾರ್ಚ್ 31ರ ತನಕ ಅಥವಾ ಮುಂದಿನ ಆದೇಶದ ತನಕ ಅಮಾನತು ಮಾಡಲಾಗಿದೆ.
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣ ಉಳಿತಾಯ ಮಾಡಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ, ಇದೀಗ ಬ್ಯಾಂಕ್ ಗಳ ವೆಚ್ಚಗಳನ್ನು ಕಡಿಮೆ ಮಾಡಲು ಸೂಚಿಸಿದೆ. ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಮಂಜೂರಾದ ಯೋಜನೆಗಳು ಹಾಗೂ ಘೋಷಣೆ ಮಾಡಿದ ಯೋಜನೆಗಳಿಗೆ ಮಾತ್ರ ಸದ್ಯಕ್ಕೆ ಸರ್ಕಾರ ಪ್ರಾಶಸ್ತ್ಯ ನೀಡಲಿದೆ. ಹೊಸ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಜೂನ್ ಮೊದಲ ವಾರದಲ್ಲಿ ತಿಳಿಸಲಾಗಿದೆ.
ಸರ್ಕಾರದಿಂದಲೇ ಮಾರ್ಗದರ್ಶಿ ಸೂತ್ರಗಳು
ಇನ್ನು ಈಗಾಗಲೇ ಬಜೆಟ್ ನಲ್ಲಿ ಮಂಜೂರಾದ ಯೋಜನೆಗಳನ್ನು ಸಹ ಮಾರ್ಚ್ 31, 2021ರ ತನಕ ಅಮಾನತಿನಲ್ಲಿ ಇಡಲಾಗುತ್ತದೆ. ಈ ಮಧ್ಯೆ ಬುಧವಾರದಂದು ಬ್ಯಾಂಕ್ ಗಳಿ ಸಂಪೂರ್ಣ ಮಾರ್ಗದರ್ಶಿ ಸೂತ್ರಗಳನ್ನೇ ಕಳುಹಿಸಲಾಗಿದೆ. ಬ್ಯಾಂಕ್ ಗಳು ತಮ್ಮ ಮುಖ್ಯ ವ್ಯವಹಾರದ ಹೊರತಾಗಿ ಉಳಿದವುಗಳಿಗೆ ಖರ್ಚು ಮಾಡದಿರುವಂತೆ ತಿಳಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 1.30 ಕೋಟಿ ಕಾರು ಖರೀದಿ
ಹಿರಿಯ ಅಧಿಕಾರಿಗಳ ಪ್ರಯಾಣದ ಸಲುವಾಗಿ ಈಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 1.30 ಕೋಟಿ ರುಪಾಯಿ ಮೊತ್ತದ ಮೂರು ಔಡಿ ಕಾರು ಖರೀದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮಹತ್ವದ್ದಾಗಿದೆ. ಆಡಳಿತ ಕಚೇರಿ, ಅತಿಥಿ ಗೃಹ, ಬ್ಯಾಕ್ ಆಫೀಸ್ ಅಲಂಕಾರಕ್ಕೋ ಅಥವಾ ಕಾರ್ಯಚಟುವಟಿಕೆಗೆ ಹೊರತಾದ ವಸ್ತುಗಳ ಖರೀದಿಗೋ ಖರ್ಚು ಮಾಡದಿರುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ.
ಸ್ಥಳೀಯ ಅಧಿಕಾರಿಗಳ ಸಹಾಯ ಪಡೆಯಿರಿ
ಇನ್ನು ಪ್ರಯಾಣದ ಬದಲಿಗೆ ಡಿಜಿಟಲ್ ಕಮ್ಯುನಿಕೇಷನ್ ಮೂಲಕವೇ ಸಾಧ್ಯವಾದಷ್ಟು ಕೆಲಸಗಳನ್ನು ಮುಗಿಸಿಕೊಳ್ಳಲು ತಿಳಿಸಲಾಗಿದೆ. ಸ್ಥಳೀಯವಾಗಿ ಲಭ್ಯ ಇರುವ ಆಡಳಿತಾಧಿಕಾರಿಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು, ಕೆಲಸ ಮುಗಿಸುವಂತೆ ಕೂಡ ಸರ್ಕಾರವು ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಭತ್ಯೆ, ಬಾಡಿಗೆಯನ್ನು ಪರಿಷ್ಕರಿಸುವಂತೆ ಸಲಹೆ
ಬ್ಯಾಂಕ್ ಉದ್ಯೋಗಿಗಳಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆ, ವಾಹನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸುವಂತೆ ಸರ್ಕಾರದ ಮಾರ್ಗದರ್ಶಿ ಸೂತ್ರದಲ್ಲಿ ಸೂಚಿಸಲಾಗಿದೆ. ಈ ಪ್ರಸ್ತಾವಗಳನ್ನು ಆಯಾ ಬ್ಯಾಂಕ್ ಆಡಳಿತ ಮಂಡಳಿಯ ಮುಂದಿಟ್ಟು, ಸೂಕ್ತ ಸೂಚನೆಗಳನ್ನು ಆಂತರಿಕವಾಗಿ ನೀಡಲು ಸರ್ಕಾರ ತಿಳಿಸಿದೆ.