ಜಿಎಸ್ಟಿ ಪರಿಹಾರ ನೀಡುತ್ತೇವೆ: ನಿರ್ಮಲಾ ಸೀತಾರಾಮನ್
ಜಿಎಸ್ಟಿ ಜಾರಿಗೊಳಿಸಿರುವುದರಿಂದ ರಾಜ್ಯಗಳಿಗೆ ಆಗುತ್ತಿರುವ ವರಮಾನ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ರೀತಿಯಾದ ಅನುಮಾನ ಬೇಡ. ಜಿಎಸ್ಟಿ ಜಾರಿಗೊಳಿಸುವುದರಿಂದ ರಾಜ್ಯಗಳಿಗಾಗುವ ವರಮಾನ ನಷ್ಟ ತುಂಬಿಕೊಡಲು ಕೇಂದ್ರ ಸರ್ಕಾರ ಮೊದಲ 5 ವರ್ಷಗಳಿಗೆ ಪರಿಹಾರ ನೀಡಲು ನಿರ್ಧರಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಜುಲೈ 1, 2017ರಿಂದ ರಾಜ್ಯಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಗೆ ಸೇರಿಕೊಂಡ ಬಳಿಕ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಗಳನ್ನು ಸಂಗ್ರಹಿಸುವ ಅಧಿಕಾರಕ್ಕೆ ಶರಣಾದವು. ಹೀಗಾಗಿ ಮೊದಲ 5 ವರ್ಷದಲ್ಲಿ ಆಗಿರುವ ಯಾವುದೇ ಆದಾಯ ನಷ್ಟವನ್ನು ರಾಜ್ಯಗಳಿಗೆ ಭರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಆದರೆ ಪರಿಹಾರ ಮೊತ್ತವು ಯಾವಾಗ ರಾಜ್ಯಗಳ ಕೈ ಸೇರಲಿದೆ ಎಂಬುದನ್ನು ತಿಳಿಸಿಲ್ಲ.
ಜಿಎಸ್ಟಿ ಜಾರಿಗೊಳಿಸಿರುವುದರಿಂದ ಮಾಸಿಕ ಪರಿಹಾರವನ್ನು 2 ತಿಂಗಳಲ್ಲಿ ಪಾವತಿಸಬೇಕಾಗಿತ್ತು. ಆದರೆ ಆಗಸ್ಟ್ 2019ರಿಂದ ರಾಜ್ಯಗಳು ಅಂತಹ ಯಾವುದೇ ಮೊತ್ತವನ್ನು ಸ್ವೀಕರಿಸಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸೆಸ್ನಿಂದ ಸಂಗ್ರಹಿಸಲಾಗಿರುವ 9,783 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.