GST ಸಮಿತಿ ಸಭೆಯಲ್ಲಿ ಕೇಂದ್ರದ ವಿರುದ್ಧ ಕೆಂಡ ಉಗುಳಲಿವೆ ಬಿಜೆಪಿಯೇತರ ರಾಜ್ಯಗಳು
ಜಿಎಸ್ ಟಿ ಸಮಿತಿ ಸಭೆಯು ಸೋಮವಾರದಂದು (ಅಕ್ಟೋಬರ್ 5, 2020) ದೊಡ್ಡ ಮಟ್ಟದ ಅಲ್ಲೋಲ- ಕಲ್ಲೋಲ ಎಬ್ಬಿಸುವ ಸಾಧ್ಯತೆ ಇದೆ. ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳು ಇವೆಯೋ ಅಲ್ಲಿ ಕೇಂದ್ರದ ಜಿಎಸ್ ಟಿ ಪರಿಹಾರ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.
ಬಿಜೆಪಿ ಇರುವ ಸರ್ಕಾರಗಳು ಈ ವಿಚಾರದಲ್ಲಿ ಕೇಂದ್ರದ ಬೆಂಬಲಕ್ಕಿವೆ. ಜಿಎಸ್ ಟಿ ಪರಿಹಾರದ ಕೊರತೆಯನ್ನು ತುಂಬಿಕೊಳ್ಳಲು 97,000 ಕೋಟಿ ರುಪಾಯಿ ಸಾಲ ಪಡೆಯುವ ಆಯ್ಕೆಯನ್ನು ಸೆಪ್ಟೆಂಬರ್ ಮಧ್ಯದ ತನಕ ಆಯ್ಕೆ ಮಾಡಿಕೊಂಡಿದ್ದವು. ಇನ್ನು ವಿರೋಧ ಪಕ್ಷಗಳು ಆಡಳಿತದಲ್ಲಿ ಇರುವ ಪಶ್ಚಿಮ ಬಂಗಾಲ, ಪಂಜಾಬ್, ಕೇರಳದಿಂದ ಕೇಂದ್ರದ ಸಾಲ ಮಾಡುವ ಆಯ್ಕೆಯನ್ನು ಒಪ್ಪಿಕೊಂಡಿಲ್ಲ.
ಚಿಗಿತುಕೊಂಡ ಜಿಎಸ್ ಟಿ ಸಂಗ್ರಹ; ಸೆಪ್ಟೆಂಬರ್ ನಲ್ಲಿ 95,480 ಕೋಟಿ ರುಪಾಯಿ
ಅಕ್ಟೋಬರ್ 5ನೇ ತಾರೀಕಿನಂದು ನಡೆಯುವ 42ನೇ ಜಿಎಸ್ ಟಿ ಸಭೆಯಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರ ನೀದಿದ್ದ ಸಾಲ ಪಡೆಯುವ ಯೋಜನೆಯನ್ನು ತಿರಸ್ಕರಿಸುವ ಹಾಗೂ ಪರ್ಯಾಯ ಆಯ್ಕೆಗಳನ್ನು ಕೇಳುವ ಸಾಧ್ಯತೆ ಇದೆ. ಇನ್ನು ಜಿಎಸ್ ಟಿ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ನೀಡುವುದು ಕೇಂದ್ರದ ಸಾಂವಿಧಾನಿಕ ಜವಾಬ್ದಾರಿ ಎಂದು ಹೇಳಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 2.35 ಲಕ್ಷ ಕೋಟಿ ರುಪಾಯಿ ಜಿಎಸ್ ಟಿ ಆದಾಯ ಕೊರತೆ ಆಗುವ ಸಾಧ್ಯತೆ ಇದೆ. ಅದರಲ್ಲಿ ಜಿಎಸ್ ಟಿ ಜಾರಿಯಿಂದ ಆಗುವ ನಷ್ಟ 97,000 ಕೋಟಿ ಹಾಗೂ ಕೊರೊನಾದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟ 1.38 ಲಕ್ಷ ಕೋಟಿ ರುಪಾಯಿ ಎಂದು ಲೆಕ್ಕ ಹಾಕಲಾಗಿದೆ.