ಕೊರೊನಾವೈರಸ್ ಹಾವಳಿಯಿಂದ ಕೇವಲ ಕೇಂದ್ರ ಸರ್ಕಾರವಷ್ಟೇ ಅಲ್ಲದೇ ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಎದುರಾದ ಆರ್ಥಿಕ ಕುಸಿತವನ್ನು ತಡೆಯಲು ರಾಜ್ಯ ಸರ್ಕಾರಗಳಿಗೆ ಸಾಲವೇ ಪ್ರಮುಖ ಆಸರೆಯಾಗಿದೆ. ದೇಶದ ಎಲ್ಲ ರಾಜ್ಯಗಳು ಕೊರೊನಾದಿಂದ ಎದುರಾದ ಸಂಕಷ್ಟ ನಿಭಾಯಿಸಲು ಈ ಕೊರೊನಾ ಅವಧಿಯಲ್ಲಿ ಬರೋಬ್ಬರಿ 1.93 ಲಕ್ಷ ಕೋಟಿ ರುಪಾಯಿಯ ಸಾಲವನ್ನು ವಿವಿಧ ಮೂಲಗಳಿಂದ ಎತ್ತಿವೆ.
ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಪಡೆದುಕೊಂಡಿದ್ದ ಸಾಲಕ್ಕಿಂತ ಶೇ 76 ರಷ್ಟು ಹೆಚ್ಚು ಎಂದು ಕೇರ್ ರೇಟಿಂಗ್ ಏಜೆನ್ಸಿ ಬಿಡುಗಡೆ ಮಾಡಿದ ವರದಿಗಳು ಹೇಳಿವೆ.
52.6 ಲಕ್ಷ ಕೋಟಿ ರುಪಾಯಿ ಸಾಲವನ್ನು ಎತ್ತಿವೆ
ರಾಜ್ಯಗಳು ಒಟ್ಟಾರೆಯಗಾಗಿ ಈ ವರ್ಷ 52.6 ಲಕ್ಷ ಕೋಟಿ ರುಪಾಯಿ ಸಾಲವನ್ನು ಎತ್ತಿವೆ. ಇದರಲ್ಲಿ ಶೇ 72 ರಷ್ಟು ಪಾಲು ದೊಡ್ಡ ಹತ್ತು ರಾಜ್ಯಗಳಿಗೆ ಸೇರುತ್ತದೆ. ಈ ಪೈಕಿ 6 ಲಕ್ಷ ಕೋಟಿ ರುಪಾಯಿ ಸಾಲ ಎತ್ತುವ ಮೂಲಕ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದೆ. ನಂತರ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಕರ್ನಾಟಕ ಸೇರಿವೆ.
ಸಾಲದ ಮಿತಿಯೊಳಗೆ ಸಾಲ
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ಕರ್ನಾಟಕ 14 ನೇ ಹಣಕಾಸು ಆಯೋಗ ಸೂಚಿಸಿದ್ದ ಸಾಲದ ಮಿತಿಯೊಳಗೆ ಸಾಲ ಮಾಡಿವೆ. ಅಂದರೆ ಜಿಡಿಪಿಯ ಶೇ 25 ರಷ್ಟು ಕಡಿಮೆ ಸಾಲ ಹೊಂದಿವೆ.
ವಿತ್ತೀಯ ಕೊರತೆ ಪ್ರಮಾಣವನ್ನು ಶೇ 3 ರಿಂದ ಶೇ 5 ಕ್ಕೆ ಏರಿಕೆ
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಸಂಪನ್ಮೂಲ ಸಂಗ್ರಹಕ್ಕೆ ಅನುಕೂಲ ಆಗಲು ವಿತ್ತೀಯ ಕೊರತೆ ಪ್ರಮಾಣವನ್ನು ಶೇ 3 ರಿಂದ ಶೇ 5 ಕ್ಕೆ ಏರಿಕೆ ಮಾಡಿದೆ. ಜೊತೆಗೆ ಸಾಲ ಪಡೆಯಲು ಕೆಲ ನಿಯಮಗಳನ್ನು ಸಡಿಲಿಕೆ ಮಾಡಿತ್ತು. ಹೀಗಾಗಿ ಕೊರೊನಾ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದೆ.
ವಿತ್ತೀಯ ಕೊರತೆ ಶೇ 7.6 ರಷ್ಟು ಏರಿಕೆಯಾಗಲಿದೆ
2020-21 ನೇ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಶೇ 7.6 ರಷ್ಟು ಏರಿಕೆಯಾಗಲಿದೆ. ಇದು ಬಜೆಟ್ ಅಂದಾಜಿಗಿಂತ ಎರಡು ಪಟ್ಟು ಹೆಚ್ಚು ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.


Click it and Unblock the Notifications