ಭಾರತದ ಆರ್ಥಿಕತೆ ಗಂಭೀರ ಪರಿಸ್ಥಿತಿಯಲ್ಲಿದೆ: ಐಎಂಎಫ್
ಭಾರತದ ಆರ್ಥಿಕತೆಯು ಗಂಭೀರ ಪರಿಸ್ಥಿತಿಯನ್ನು ತಲುಪಿದ್ದು, ಸರ್ಕಾರ ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಸಲಹೆ ನೀಡಿದೆ.
ವೆಚ್ಚ ಮತ್ತು ಹೂಡಿಕೆ ಕುಸಿತ, ತೆರಿಗೆ ಆದಾಯದಲ್ಲಿ ಇಳಿಕೆ ಇತರೆ ಎಲ್ಲಾ ಅಂಶಗಳು ವಿಶ್ವದಲ್ಲಿ ವೇಗವಾಗಿ ಓಡುತ್ತಿರುವ ಭಾರತದ ಆರ್ಥಿಕತೆಯ ಓಟಕ್ಕೆ ತಡೆಯೊಡ್ಡಿವೆ ಎಂದು ಐಎಂಎಫ್ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ನೀತಿಯಲ್ಲಿ ವ್ಯಾಪಕ ವಿಸ್ತರಣೆಯಾಗಿದ್ದು, ಇದು ಲಕ್ಷಾಂತರ ಜನರನ್ನು ಬಡತನದ ರೇಖೆಗಿಂತ ಮೇಲುತ್ತುವಲ್ಲಿ ಯಶಸ್ವಿಯಾಗಿದೆ. ಆದರೆ 2019ರ ಮೊದಲ ಆರು ತಿಂಗಳಲ್ಲಿ ವಿವಿಧ ಕಾರಣಗಳಿಂದ ಭಾರತದ ಆರ್ಥಿಕತೆ ಕುಸಿದಿದೆ ಎಂದು ವರದಿಯಲ್ಲಿ ತನ್ನ ಅಭಿಪ್ರಾಯ ಪ್ರಕಟಿಸಿದೆ.
''ಭಾರತದ ಅರ್ಥವ್ಯವಸ್ಥೆಯು ಹಿನ್ನಡೆ ಅನುಭವಿಸುತ್ತಿದ್ದು, ಆರ್ಥಿಕ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಇದಕ್ಕೆ ಕಾರಣ. ಈಗಿರುವ ಆರ್ಥಿಕ ಹಿಂಜರಿತ ಹಿಮ್ಮೆಟಿಸಲು ಮತ್ತು ಭಾರತವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯಲು ತುರ್ತು ನೀತಿ, ಕ್ರಮಗಳು ಅಗತ್ಯವಿದೆ'' ಎಂದು ಐಎಂಎಫ್ನ ಏಷ್ಯಾ ಫೆಸಿಫಿಕ್ ವಿಭಾಗದ ರನಿಲ್ ಸಲ್ಗಾಡೊ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆ ಸಲುವಾಗಿ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುವ ವಿಷಯದಲ್ಲೂ ಭಾರತ ಸರ್ಕಾರದ ಮುಂದೆ ಸೀಮಿತ ಆಯ್ಕೆಗಳಿವೆ ಎಂದು ಐಎಂಎಫ್ ಎಚ್ಚರಿಸಿದೆ.