ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ದೇವಾಲಯದ ಆದಾಯ ಏರಿಕೆ
ಶಬರಿಮಲೆಯಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಯಾತ್ರೆ ಕೊನೆಯಾಗುತ್ತಿದೆ. ಜನವರಿ 14ರಂದು ಮಕರ ಸಂಕ್ರಾಂತಿಯಂದು ಬೆಳಕಿನ ದರ್ಶನದ ಬಳಿಕ ಈ ವರ್ಷದ ತೀರ್ಥಯಾತ್ರೆ ಸಂಪೂರ್ಣವಾಗಲಿದೆ. ಈ ನಡುವೆ ಈ ವರ್ಷದಲ್ಲಿ ಶಬರಿಮಲೆಯ ಆದಾಯ ಹೆಚ್ಚಳವಾಗಿದೆ.
ಪ್ರಸ್ತುತ ವರ್ಚುವಲ್ ಬುಕ್ಕಿಂಗ್ ವ್ಯವಸ್ಥೆ ಇದ್ದು, ಬುಕ್ಕಿಂಗ್ ಅಧಿಕವಾಗುತ್ತಿದೆ. ಯಾತ್ರಿಕರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಶಬರಿಮಲೆ ಆದಾಯವು ಕೂಡಾ ಹೆಚ್ಚಾಗುತ್ತಿದೆ. ಈವರೆಗೆ ಅಂದರೆ ಡಿಸೆಂಬರ್ 25ರವರೆಗೆ ಸುಮಾರು 29.08 ಲಕ್ಷ ಜನರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಈ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತ ಮಂಗಳವಾರ ಕೊನೆಯಾಗಲಿದೆ. ಮಂಗಳವಾರ ಮಧ್ಯಾಹ್ನ ಮಂಡಲಪೂಜೆಯ ಮೂಲಕ ಮೊದಲ ಹಂತ ಕೊನೆಯಾಗಲಿದೆ. ಈ ಪೂಜೆ ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಟಿಡಿಬಿ ಹಾಗೂ ಪೊಲೀಸರು ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಇದೆ.
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
ಡಿಸೆಂಬರ್ 25ರವರೆಗಿನ ಲೆಕ್ಕಾಚಾರದ ಪ್ರಕಾರ ಶಬರಿಮಲೆ ದೇವಾಲಯಕ್ಕೆ ಡೊನೇಶನ್ ರೂಪದಲ್ಲಿ ಸುಮಾರು 70.10 ಕೋಟಿ ರೂಪಾಯಿ ಲಭ್ಯವಾಗಿದೆ. ಹಾಗಾದರೆ ಕಳೆದ ವರ್ಷದ ಆದಾಯ ಎಷ್ಟು ಹೆಚ್ಚಾಗಿತ್ತು, ಈ ವರ್ಷ ಎಷ್ಟು ಹೆಚ್ಚಾಗಿದೆ ಎಂದು ತಿಳಿಯೋಣ ಮುಂದೆ ಓದಿ....
ಮಕ್ಕಳ ಆಗಮನ ಹೆಚ್ಚಳ
ತಿರುವಂಕೂರು ದೇವಸ್ವ ಮಂಡಳಿಯ ಅಧ್ಯಕ್ಷ ಕೆ ಅನಂತಗೋಪನ್ ಪ್ರಕಾರ ಈ ವಾರ್ಷಿಕ ತೀರ್ಥಯಾತ್ರೆ ಸಂದರ್ಭದಲ್ಲಿ ಈವರೆಗೆ ಶಬರಿಮಲೆಗೆ ಭೇಟಿ ನೀಡಿರುವ ಭಕ್ತರ ಪೈಕಿ ಸುಮಾರು ಶೇಕಡ 20ರಷ್ಟು ಮಕ್ಕಳಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಬಂಧಿತ ನಿರ್ಬಂಧಗಳು ಅಧಿಕವಾಗಿತ್ತು. ಆದರೆ ಈ ವರ್ಷದಲ್ಲಿ ನಿರ್ಬಂಧಗಳು ಅಷ್ಟಾಗಿಲ್ಲ. ಈ ನಡುವೆ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಇನ್ನು ಮಕ್ಕಳಿಗಾಗಿ ಪ್ರತ್ಯೇಕವಾದ ಸಾಲನ್ನು ಮಾಡಲಾಗಿದೆ. ನೂಕುನುಗ್ಗಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಆದರೆ ಭಕ್ತರು ಸಾಮಾನ್ಯ ಸಮಯಕ್ಕಿಂತ ಅಧಿಕ ಸಮಯ ದರ್ಶನಕ್ಕಾಗಿ ಕಾಯಬೇಕಾಗಿ ಬಂದರೆ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೂಡಾ ತಿಳಿಸಿದ್ದಾರೆ.
ಕಳೆದ ವರ್ಷದ ಆದಾಯ ಎಷ್ಟಿತ್ತು?
ಕಳೆದ ವರ್ಷ ಮಂಡಲ ಪೂಜೆಯವರೆಗೆ ಸುಮಾರು 10.35 ಲಕ್ಷ ತೀರ್ಥ ಯಾತ್ರಿಕರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಕಳೆದ ವರ್ಷ ಶಬರಿಮಲೆ ತೀರ್ಥ ಯಾತ್ರೆಯ ಸಂದರ್ಭದಲ್ಲಿ ಬೋರ್ಡ್ ಸುಮಾರು 78.92 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಅರ್ವಾಣ (ಪ್ರಸಾದ) ವನ್ನು ಮಾರಾಟ ಮಾಡುವ ಮೂಲಕ ಟಿಡಿಬಿ ಸುಮಾರು 31.25 ಕೋಟಿ ರೂಪಾಯಿ ಪಡೆದುಕೊಂಡಿದೆ. ಅಪ್ಪಮ್ (ಪ್ರಸಾದ) ಮಾರಾಟ ಮಾಡುವ ಮೂಲಕ 3.52 ಕೋಟಿ ರೂಪಾಯಿಯನ್ನು ಟಿಡಿಬಿ ಸಂಗ್ರಹ ಮಾಡಿದೆ. ಕನ್ನಿಕ ಸಮರ್ಪನೆ ಮೂಲಕ ಸುಮಾರು 29.30 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದೆ. ಇನ್ನು ಕಾಣಿಕೆಯ ಮೂಲಕ ಬಂದ ಹಣದ ಒಂದು ಭಾಗದ ಎಣಿಕೆ ಇನ್ನೂ ಉಳಿದಿರುವ ಕಾರಣ ದೇವಾಲಯದ ಆದಾಯವು ಇನ್ನಷ್ಟು ಹೆಚ್ಚು ಆಗಲಿದೆ.
ಕೋವಿಡ್ಗೂ ಮುನ್ನ ಎಷ್ಟಿತ್ತು ಆದಾಯ?
2019 ರಲ್ಲಿ ಕೊರೊನಾ ವೈರಸ್ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಶಬರಿಮಲೆಯ ಆದಾಯವು 156 ಕೋಟಿ ರೂಪಾಯಿ ಆಗಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿದ್ದ ನಿರ್ಬಂಧದ ಹಿನ್ನೆಲೆ ಆದಾಯವು 8.39 ಕೋಟಿಗೆ ಇಳಿಕೆ ಕಂಡಿದೆ. ಆದರೆ ಬಳಿಕ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು ಈ ಬಾರಿ 10.35 ಲಕ್ಷ ತೀರ್ಥಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಹಾಗೆಯೇ ಆದಾಯವು 78.92 ಕೋಟಿ ರೂಪಾಯಿ ಏರಿಕೆ ಆಗಿದೆ.