ಭಾರತದ ಆಭರಣ ಮಾರಾಟಗಾರರು ಕೆಲವರಿಗೆ ಆದಾಯ ತೆರಿಗೆ ನೋಟಿಸ್ ಬರುತ್ತಿದೆ. ಮೂರು ವರ್ಷದ ಹಿಂದೆ ನಡೆಸಿದ ವ್ಯವಹಾರದ ಲೆಕ್ಕಪತ್ರಗಳನ್ನು ಕೇಳಿ, ಈಗ ಐಟಿ ಇಲಾಖೆಯಿಂದ ಲೆಕ್ಕವನ್ನು ಕೇಳಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2016ರ ನವೆಂಬರ್ ನಲ್ಲಿ ನೋಟು ನಿಷೇಧ ಮಾಡಿದ್ದರಲ್ಲ, ಆ ಅವಧಿಯಲ್ಲಿನ ಲೆಕ್ಕ ಕೇಳಿ ನೋಟಿಸ್ ನೀಡಲಾಗಿದೆ ಹತ್ತಕ್ಕೂ ಹೆಚ್ಚು ಮಂದಿ ಆಭರಣ ಮಾರಾಟಗಾರರು ಒಪ್ಪಿಕೊಂಡಿದ್ದಾರೆ.
ನವೆಂಬರ್ 8, 2016ರಂದು ಆಗ ಚಲಾವಣೆಯಲ್ಲಿ ಇದ್ದ 500, 1000 ರುಪಾಯಿಯ ನೋಟುಗಳ ನಿಷೇಧ ಮಾಡಿದ್ದರು. ಆಗ ತಮ್ಮ ಬಳಿ ಇರುವ, ಲೆಕ್ಕಕ್ಕೆ ನೀಡದ ಹಣವನ್ನು ಉಳಿಸಿಕೊಳ್ಳುವ ಸಲುವಾಗಿ ಗ್ರಾಹಕರು ಚಿನ್ನದ ಆಭರಣಗಳ ಮಾರಾಟ ಮಳಿಗೆಗಳಿಗೆ ಮುಗಿ ಬಿದ್ದಿದ್ದರು. ಅಂಥದ್ದೇ ಒಂದು ಮಳಿಗೆ ಮುಂಬೈನಲ್ಲಿ ಕಂಡು ಹಿಡಿಯಲಾಗಿದೆ. ಅವರಿಂದ ನೆಕ್ಲೇಸ್, ಉಂಗುರ, ಚಿನ್ನದ ಗಟ್ಟಿ... ಹೀಗೆ ಏನಾದರೂ ಸರಿ, ಚಿನ್ನದ ರೂಪದಲ್ಲಿ ಇರಲಿ ಎಂದು ಖರೀದಿ ಮಾಡಲಾಗಿದೆ.
ಸರಕನ್ನು ಪ್ರೀಮಿಯಂ ಬೆಲೆಗೆ ಮಾರಾಟ
ಇದೀಗ ಆ ಆಭರಣ ವರ್ತಕ ಜೈನ್, ಆ ದಿನ ನಡೆದಿದ್ದೇನು ಎಂದು ಖಾಸಗಿಯಾಗಿ ಹೇಳುವುದು ಹೀಗೆ: ನನ್ನ ಬಳಿ ಇದ್ದ ಎಲ್ಲ ಸರಕನ್ನು ಪ್ರೀಮಿಯಂ ಬೆಲೆಗೆ ಮಾರಾಟ ಮಾಡಿದೆ. ಎರಡು ವಾರದಲ್ಲಿ ಎಷ್ಟು ಆದಾಯ ಬರುತ್ತದೋ ಅಷ್ಟನ್ನು ಆ ದಿನದಲ್ಲೇ ಬಂತು ಎಂದು ಹೇಳಿಕೊಂಡಿದ್ದಾರೆ.ಮೂರು ತಿಂಗಳ ಹಿಂದೆ ಜೈನ್ ಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ಬಂದಿದೆ. ಗಳಿಕೆಯ ಮೂಲ ಏನು, ಆ ದಿನ ರಾತ್ರಿ ನಡೆಸಿದ ವ್ಯವಹಾರ ಎಷ್ಟು ಎಂಬ ಮಾಹಿತಿಯನ್ನು ನೀಡಬೇಕು. ಏಕೆಂದರೆ, ಆ ಖರೀದಿ ಹಿಂದೆ ಕಪ್ಪು ಹಣ ಇರಬಹುದು ಎಂಬ ಗುಮಾನಿಯನ್ನು ವ್ಯಕ್ತಪಡಿಸಲಾಗಿದೆ.
15 ಸಾವಿರಕ್ಕೂ ಹೆಚ್ಚು ಆಭರಣ ಮಾರಾಟಗಾರರಿಗೆ ನೋಟಿಸ್
ಜೈನ್ ಮಾತ್ರ ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಭಾರತೀಯ ಕಾನೂನಿನ ಪ್ರಕಾರ, ವಿವಾದಕ್ಕೆ ಈಡಾಗಿರುವ ಒಟ್ಟು ಮೊತ್ತದ 20% ಅನ್ನು ಠೇವಣಿಯಾಗಿ ಇಡಲೇಬೇಕು. "ಒಂದು ವೇಳೆ ನಾವು ಕೇಸಿನಲ್ಲಿ ಸೋತರೆ ಬಾಕಿ ಹಣವನ್ನು ಕಟ್ಟುವುದಕ್ಕೆ ವ್ಯಾಪಾರವನ್ನೇ ನಿಲ್ಲಿಸಬೇಕಾಗುತ್ತದೆ" ಎನ್ನುತ್ತಾರೆ ಜೈನ್. 15 ಸಾವಿರಕ್ಕೂ ಹೆಚ್ಚು ಆಭರಣ ಮಾರಾಟಗಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಹೋಗಿದೆ. ಬೆಲೆ ಬಾಳುವ ರತ್ನ ಹಾಗೂ ಆಭರಣಗಳ ವ್ಯವಹಾರ ನಡೆಸುವವರಿಂದಲೇ 50 ಸಾವಿರ ಕೋಟಿ ರುಪಾಯಿಯಷ್ಟು ವ್ಯವಹಾರಕ್ಕೆ ಲೆಕ್ಕ ಕೇಳುತ್ತಿದ್ದಾರೆ. "ಇದರಿಂದ ದೀರ್ಘಾವಧಿಯಲ್ಲಿ ಆಭರಣ ವಲಯಕ್ಕೆ ಸಮಸ್ಯೆ ಆಗುತ್ತದೆ. 20% ಮೊತ್ತವನ್ನು ಕಟ್ಟಬೇಕಾಗುವುದರಿಂದ ಚಿನ್ನದ ಗಟ್ಟಿ ಅಥವಾ ಆಭರಣವನ್ನು ಸಾಲದ ಮೇಲೆ ಖರೀದಿಸಬೇಕಾಗಿದೆ" ಎನ್ನುತ್ತಿದ್ದಾರೆ ವರ್ತಕರು.
ಸರಬರಾಜುದಾರರು, ಬ್ಯಾಂಕರ್ ಗಳಿಗೆ ಹೊಡೆತ
ಒಂದು ವೇಳೆ ಆಭರಣ ವರ್ತಕರು ವ್ಯಾಜ್ಯದಲ್ಲಿ ಸೋತುಹೋದರೆ ತಾವು ಪಡೆದಿರುವ ಸಾಲವನ್ನು ಇವರು ಕಟ್ಟಲು ಸಾಧ್ಯವಿಲ್ಲ. ಇದರಿಂದಾಗಿ ಸಾಲ ನೀಡಿದ ಸರಬರಾಜುದಾರರು, ಬ್ಯಾಂಕರ್ ಗಳಿಗೆ ಹೊಡೆತ ಬೀಳಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ತೆರಿಗೆ ಅಧಿಕಾರಿಗಳಿಗೆ ಇರುವ ಹಕ್ಕಿನಲ್ಲಿ ಈ ಹಿಂದಿನ ಆದಾಯದ ತೆರಿಗೆ ಪಾವತಿಸುವಂತೆ ಕೇಳಬಹುದು. ಲೆಕ್ಕ ಹಾಕುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಇಡೀ ಆದಾಯವನ್ನೇ ತೆರಿಗೆಯಾಗಿ ಬೇಡಿಕೆ ಇಡುವುದು ತೀರಾ ಅಪರೂಪ. "ಮೂರು ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಸಮಾಧಿಯನ್ನು ಅಗೆದು, ಆತ ಹೇಗೆ ಸಾವನ್ನಪ್ಪಿದ್ದ ಎಂದು ಪತ್ತೆ ಹಚ್ಚಿ, ಕೊಲೆಗಾರನನ್ನು ಹಿಡಿದಂತೆ ಆಗುತ್ತದೆ ಈ ಪ್ರಯತ್ನ" ಎನ್ನುತ್ತಾರೆ ಕೋಲ್ಕತ್ತಾ ಮೂಲದ ತೆರಿಗೆ ಅಧಿಕಾರಿ.
1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ತೆರಿಗೆ ಬಾಕಿ
ಇಬ್ಬರು ಹಿರಿಯ ತೆರಿಗೆ ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿ, ಈ ವರ್ಷ ಸಾವಿರಾರು ತೆರಿಗೆ ನೋಟಿಸ್ ಕಳುಹಿಸಲಾಗಿದೆ. ಅದರಲ್ಲಿ ಆಭರಣ ವ್ಯಾಪಾರಿಗಳೂ ಇದ್ದಾರೆ. ಒಟ್ಟು 1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ತನಕ ತೆರಿಗೆ ಪಾವತಿಸುವಂತೆ ಬೇಡಿಕೆ ಇಡಲಾಗಿದೆ ಎಂದಿದ್ದಾರೆ. ಸರ್ಕಾರವು ಇರಿಸಿಕೊಂಡಿದ್ದ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಲು ಸಾಧ್ಯವಾಗದ ಕಾರಣಕ್ಕೆ ಅಧಿಕಾರಿಗಳ ವರ್ಗಾವಣೆ, ಬಡ್ತಿ ಹಾಗೇ ಉಳಿದುಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಕಾರಣಕ್ಕೆ ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ಅವಧಿಯನ್ನು ಮಾರ್ಚ್ ಕೊನೆಯ ತನಕ ವಿಸ್ತರಿಸಲಾಗಿದೆ. ಅಧಿಕಾರಿಗಳು ಶ್ರೀಮಂತರ ಮನೆಯ ಕೆಲಸದವರು, ಚಾಲಕರ ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಎಲ್ಲಿ ನೋಟುನಿಷೇಧದ ನಂತರ ತಮ್ಮ ಅಘೋಷಿತ ಆದಾಯವನ್ನು ಅವರ ಮೂಲಕ ಮುಚ್ಚಿಟ್ಟುಕೊಳ್ಳಲು ಯತ್ನಿಸಿದ್ದಾರೆ ಎಂದು ಹೀಗೆ ಮಾಡಲಾಗಿದೆ ಎಂಬ ಗುಮಾನಿಯಿಂದ ಈ ಕ್ರಮ ಕೈಗೊಂಡಿದ್ದಾರೆ.


Click it and Unblock the Notifications