ಕೊರೊನಾವೈರಸ್ನಿಂದಾಗಿ ದೇಶದ ಅರ್ಥವ್ಯವಸ್ಥೆಯು ಅಲುಗಾಡಿದ್ದು, ಏಪ್ರಿಲ್ 14ಕ್ಕೆ ಲಾಕ್ಡೌನ್ ಕೊನೆಯಾದ ಬಳಿಕ ಜೀವನ ಎಂದಿನಂತೆ ಸಾಗುತ್ತದೆ ಎಂದು ಜನತೆ ಅಂದುಕೊಂಡರೆ ತಪ್ಪು ಎಂದಿದ್ದಾರೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್.
21 ದಿನಗಳ ಲಾಕ್ಡೌನ್ ಬಳಿಕ ದೇಶದಲ್ಲಿ ಹಲವು ನಾಗರಿಕರಿಗೆ ಮುಂದೆ ಜೀವನದ ಪರಿಸ್ಥಿತಿ ಇದೇ ರೀತಿ ಇರಲಿಕ್ಕಿಲ್ಲ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ಬಂದ ಬಳಿಕ ದೇಶವು ಅತಿದೊಡ್ಡ 'ತುರ್ತು ಪರಿಸ್ಥಿತಿ' ಎದುರಿಸಲಿದೆ ಎಂದಿದ್ದಾರೆ.

ಕೊರೋನಾ ಸೋಂಕು ವಿರುದ್ಧ ಭಾರತ ಗೆದ್ದರೆ ಆಯಿತು ಎಂದು ಹೇಳಿದಷ್ಟು ಸುಲಭವಲ್ಲ, ಇಷ್ಟು ದಿನಗಳ ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಷ್ಟವಿದೆ, ಸಾಕಷ್ಟು ಸಮಯವೇ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಸರ್ಕಾರ ಆರ್ಥಿಕ ಚೇತರಿಕೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಸಾಮಾನ್ಯ ಜನತೆ ಪರಿಸ್ಥಿತಿ ಕಷ್ಟವಾಗಬಹುದು ಎಂದು ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
2008-09ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಹದಗೆಟ್ಟಿತ್ತು. ಆದರೆ ಅಂದು ಲಾಕ್ ಡೌನ್ ಆಗಿರಲಿಲ್ಲ. ಆರ್ಥಿಕ ಚಟುವಟಿಕೆಗಳು, ವ್ಯವಹಾರಗಳು, ಜನಜೀವನ ಎಂದಿನಂತೆ ಅಂದು ಸಾಗಿತ್ತು. ಅಂದು ಸರ್ಕಾರದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಕೊರೋನಾ ವೈರಸ್ ಸೋಂಕಿನಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ತತ್ತರಿಸಿ ಹೋಗಿವೆ.
ಲಾಕ್ ಡೌನ್ ನಂತರ ಮುಂದೇನು ಎಂಬ ಬಗ್ಗೆ ಸರ್ಕಾರ ಯೋಜನೆ ಹಾಕಿಕೊಳ್ಳಬೇಕಾಗಿತ್ತು. ಲಾಕ್ ಡೌನ್ ಮುಗಿದ ನಂತರ ಕೂಡ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಕೋಟಿಗಟ್ಟಲೆ ಜನರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications