ಭಾರತ-ಪಾಕ್ ಮ್ಯಾಚ್; ಶಾಪಿಂಗ್ ನಿಲ್ಲಿಸಿದ ಭಾರತೀಯರು; ಶಾಕ್ ಕೊಡುತ್ತೆ ಯುಪಿಐ ವಹಿವಾಟು ಅಂಕಿ-ಅಂಶ
ಕ್ರಿಕೆಟ್ ಅಂದರೆ ಭಾರತೀಯರಿಗೆ ವಿಶೇಷ ಹಬ್ಬ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಇದ್ದರಂತೂ ಕಣ್ಣು ಎವೆಯಿಕ್ಕದೇ ನೋಡುತ್ತಾರೆ. ಅಂತೆಯೇ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊನ್ನೆಯ ಪಂದ್ಯವಂತೂ ರೋಚಕಗಳ ಸರಮಾಲೆಯನ್ನೇ ಹೊತ್ತು ತಂದಿತ್ತು. ಏಳು ಬೀಳುಗಳ ಮಧ್ಯೆ, ಸೋಲಿನ ದವಡೆಯಿಂದ ಪಾರಾಗಿ ಭಾರತೀಯರು ಜಯಭೇರಿ ಭಾರಿಸಿದ್ದರು. ಈ ವೇಳೆ, ಭಾರತದ ಆನ್ಲೈನ್ ಶಾಪಿಂಗ್ ಬಹುತೇಕ ಸ್ತಬ್ಧವಾಗಿತ್ತಂತೆ.
ಇದೇನಚ್ಚರಿ ಎನಿಸಬಹುದು, ಆದರೆ ಇದು ನಿಜ. ಹೂಡಿಕೆ ತಜ್ಞ ಮಿಹಿರ್ ವೋರಾ ಎಂಬುವವರು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆದ ಭಾನುವಾರ ದಿನದ ಆನ್ಲೈನ್ ವ್ಯಾಪಾರ ವಹಿವಾಟಿನ ಅಂಕಿ ಅಂಶವನ್ನು ಹೊರಹಾಕಿದ್ದು, ಬಹಳ ಸೋಜಿಗ ಎನಿಸುತ್ತದೆ.
ರಿಷಿ ಸುನಕ್ ಗೆಲುವಿನ ಎಫೆಕ್ಟ್; ಗರಿಗೆದರಿದ ಬ್ರಿಟನ್ ಬಾಂಡ್ಗಳು
"ಭಾರತದ ಶಾಪಿಂಗ್ ಅನ್ನು ವಿರಾಟ್ ಕೊಹ್ಲಿ ನಿಲ್ಲಿಸಿದ್ದಾರೆ.!! ನಿನ್ನೆ (ಅ. 23) ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗಿನ ಯುಪಿಐ ಟ್ರಾನ್ಸಾಕ್ಷನ್ಗಳಿವು. ಪಂದ್ಯ ಕುತೂಹಲ ಹಂತಕ್ಕೆ ಏರುತ್ತಿರುವಂತೆಯೇ ಆನ್ಲೈನ್ ಶಾಪಿಂಗ್ ನಿಂತಿತ್ತು. ಪಂದ್ಯದ ಬಳಿಕ ಶಾಪಿಂಗ್ ಮತ್ತೆ ಗರಿಗೆದರಿತು" ಎಂದು ಮ್ಯಾಕ್ಸ್ ಲೈಫ್ನಲ್ಲಿ ಚೀಫ್ ಇನ್ವೆಸ್ಟ್ಮೆಂಟ್ ಆಫೀಸರ್ ಆಗಿರುವ ಮಿಹಿರ್ ವೋರಾ ನಿನ್ನೆ ಸೋಮವಾರ ಟ್ವೀಟ್ ಮಾಡಿದ್ದಾರೆ.
ಭಾನುವಾರ ದಿನದ ಆನ್ಲೈನ್ ಶಾಪಿಂಗ್ನ ಹಣದ ವಹಿವಾಟಿನ ಮಾಹಿತಿಯನ್ನು ಮಿಹಿರ್ ಅವರು ಗ್ರಾಫಿಕ್ಸ್ ಸಮೇತ ಬಿಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯ ಭಾನುವಾರ ಮಧ್ಯಾಹ್ನ 1 ಗಂಟೆಯ ನಂತರ ಶುರುವಾಗಿದ್ದು. ಅಲ್ಲಿಯವರೆಗೆ ದೀಪಾವಳಿಯ ಶಾಪಿಂಗ್ನಲ್ಲಿ ಜನರು ನಿರತರಾಗಿದ್ದ ಅಂಶವನ್ನು ಗಮನಿಸಬಹುದು. ಪಂದ್ಯ ಶುರುವಾದ ಬಳಿಕ ಶಾಪಿಂಗ್ ದರ ಇಳಿಮುಖವಾಗುತ್ತಾ ಹೋಗುತ್ತದೆ.
ಪಂದ್ಯ ಮುಗಿಯುವವರೆಗೂ ಇಳಿಮುಖದ ಟ್ರೆಂಡಿಂಗ್ ಕಾಣುತ್ತದೆ. ಆದರೆ, ಪಾಕಿಸ್ತಾನದ ಬ್ಯಾಟಿಂಗ್ ಮುಗಿದು ಭಾರತದ ಚೇಸಿಂಗ್ ನಿರ್ಣಾಯಕ್ಕೆ ಹಂತಕ್ಕೆ ಬಂದಾಗ ಶಾಪಿಂಗ್ ದರ ಬಹಳ ತೀರಾ ಕೆಳಗೆ ಕುಸಿದಿರುವುದನ್ನು ಕಾಣಬಹುದು. ಈ ಪಂದ್ಯ ಮುಗಿದ ಬಳಿಕ ಗ್ರಾಫಿಕ್ಸ್ನಲ್ಲಿ ಹಳದಿ ಪಟ್ಟಿ ಮತ್ತೆ ಮೇಲೆದ್ದಿರುವುದುನ್ನೂ ಕಾಣಬಹುದು.
ಭಾರತದಲ್ಲಿ ಕ್ರಿಕೆಟ್ ಆಟವನ್ನು ನೀವು ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದರೆ ಇದು ಅಷ್ಟೇನೂ ಅಚ್ಚರಿ ಎನಿಸದು. ಪ್ರಮುಖ ತಂಡಗಳ ಜೊತೆ ಭಾರತ ಕ್ರಿಕೆಟ್ ಪಂದ್ಯ ಆಡುವ ವೇಳೆ ನೀವು ರಸ್ತೆಯಲ್ಲಿ ವಾಹನಗಳ ಸಂಚಾರ ಬಹಳ ಕಡಿಮೆ ಆಗುವುದನ್ನು ಗಮನಿಸಬಹುದು. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುತ್ತಿದ್ದಾಗಲಂತೂ ಹಲವು ರಸ್ತೆಗಳು ಕರ್ಫ್ಯೂ ಹೇರಿದ ರೀತಿಯಲ್ಲಿ ಬಿಕೋ ಎನಿತ್ತಿರುತ್ತವೆ. ಮೊನ್ನೆಯ ಭಾರತ ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ವೇಳೆ ಆನ್ಲೈನ್ ವಹಿವಾಟಿನ ದರ ಕಡಿಮೆಗೊಂಡಿದ್ದರಲ್ಲಿ ಆಶ್ಚರ್ಯ ಎನಿಸದು.
ಕಿಂಗ್ ಕೊಹ್ಲಿ ಧಮಾಕ
ವಿರಾಟ್ ಕೊಹ್ಲಿ ಬಹುತೇಕ ಏಕಾಂಗಿಯಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಗೆಲ್ಲಲು ಪಾಕಿಸ್ತಾನ ಒಡ್ಡಿದ 160 ರನ್ ಗುರಿಯನ್ನು ಭಾರತ ಕೊನೆಯ ಎಸೆತದಲ್ಲಿ ಮುಟ್ಟಿತ್ತು. ಚೇಸಿಂಗ್ನ 19ನೇ ಓವರ್ ಭಾರತಕ್ಕೆ ನಿರ್ಣಾಯಕವಾಗಿತ್ತು. ವಿರಾಟ್ ಕೊಹ್ಲಿ ಸಿಡಿಸಿದ 2 ಅದ್ಭುತ ಸಿಕ್ಸರ್ಗಳು ಪಂದ್ಯದ ಗತಿಯನ್ನು ಬದಲಾಯಿಸಿತು. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಟೇಲ್ ಔಟ್ ಆದ ಬಳಿಕ ಭಾರತಕ್ಕೆ ಗೆಲುವು ಬಹುತೇಕ ಕಷ್ಟಸಾಧ್ಯ ಎನಿಸಿತ್ತು. ಆದರೆ, ವಿರಾಟ್ ಕೊಹ್ಲಿ ತಾನೆಂಥ ಆಟಗಾರ ಎಂಬುದನ್ನು ನಿಚ್ಚಳವಾಗಿ ಸಾಬೀತುಪಡಿಸಿದರು. ಅವರ 82 ರನ್ ಇನ್ನಿಂಗ್ಸ್ ಭಾರತಕ್ಕೆ ಸಧಾ ಗೆಲುವಿನ ಆಸೆ ಬಿಟ್ಟುಹೋಗದಂತೆ ನೋಡಿಕೊಂಡಿತು.
ಕೈತಪ್ಪಿ ಹೋಗುವಂತಿದ್ದ ಪಂದ್ಯ ಕಿಂಗ್ ಕೊಹ್ಲಿ ಆಟದಿಂದಾಗಿ ಭಾರತಕ್ಕೆ ವಾಪಸ್ ದಕ್ಕಿತು. ಕೊನೆಯ ಎರಡು ಎಸೆತ ಇದ್ದಾಗ ಕ್ರೀಸ್ಗೆ ಬಂದ ಆರ್ ಅಶ್ವಿನ್ ಅವರ ಜಾಣ್ಮೆಯ ಬ್ಯಾಟಿಂಗ್ ಭಾರತಕ್ಕೆ ಗೆಲುವಿನ ರನ್ ತಂದುಕೊಟ್ಟಿತು. ದುಬೈನಲ್ಲಿ ನಡೆದ ಕಳೆದ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆದ ಸೋಲಿಗೆ ಭಾರತ ಈಗ ಮೆಲ್ಬೋರ್ನ್ನಲ್ಲಿ ಸೇಡು ತೀರಿಸಿಕೊಂಡಿತು. ಅ. 27ರಂದು ಸಿಡ್ನಿಯಲ್ಲಿ ಭಾರತ ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರುಗೊಳ್ಳುತ್ತಿದೆ.