ಭಾರತದ ಆರ್ಥಿಕತೆ ಈಗಾಗಲೇ ಚೇತರಿಕೆ ಹಾದಿಯಲ್ಲಿದೆ: ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ (ಜುಲೈ 9, 2020) ಇಂಡಿಯಾ ಗ್ಲೋಬಲ್ ವೀಕ್ 2020 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದಾರೆ. ಈ ಕಾರ್ಯಕ್ರಮವು ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆಯುತ್ತಿದ್ದು, ವರ್ಚುವಲ್ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮಾತನಾಡಿದ್ದಾರೆ.
ಬೀ ದ ರಿವೈವಲ್: ಇಂಡಿಯಾ ಅಂಡ್ ಎ ಬೆಟರ್ ನ್ಯೂ ವರ್ಲ್ಡ್ ಎಂಬುದು ಈ ಕಾರ್ಯಕ್ರಮದ ಮುಖ್ಯ ವಿಷಯ. ಈ ಕಾರ್ಯಕ್ರಮದಲ್ಲಿ ಮೂವತ್ತು ದೇಶಗಳ 5000 ಮಂದಿ ಭಾಗವಹಿಸಲಿದ್ದಾರೆ. 250 ಮಂದಿ ಜಾಗತಿಕ ಉಪನ್ಯಾಸಕರು 75 ಸೆಷನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊರೊನಾದಿಂದ ಭಾರತಕ್ಕೆ 11.40 ಲಕ್ಷ ಕೋಟಿ ನಷ್ಟ: ವಿಶ್ವ ಬ್ಯಾಂಕ್
ವಿದೇಶಾಂಗ ಸಚಿವ ಎಸ್. ಜೈಶಂಕರ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಜಮ್ಮು- ಕಾಶ್ಮೀರದ ಲೆ. ಜಿ.ಸಿ. ಮುರ್ಮು, ಇಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಧಾರ್ಮಿಕ ಮುಖಂಡ ಶ್ರೀ ಶ್ರೀ ರವಿ ಶಂಕರ್ ಸಹ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದಿಂದ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು ಹೀಗಿವೆ:
* ಆತ್ಮನಿರ್ಭರ್ ಎಂದರೆ ಈ ವಿಶ್ವಕ್ಕೆ ನಾವು ಮುಚ್ಚಿಕೊಳ್ಳುವುದು ಅಂತಲ್ಲ ಅಥವಾ ನಿರ್ಬಂಧ ಹಾಕಿಕೊಳ್ಳುವುದೂ ಅಂತ ಅಲ್ಲ. ಇದು ಸ್ವಾವಲಂಬನೆ, ಸ್ವಂತ- ಉತ್ಪಾದನೆ.
* ನಮ್ಮ ರೈತರ ಪರಿಶ್ರಮಕ್ಕಾಗಿ ಆಹ್ವಾನಿಸುತ್ತಿದ್ದೇವೆ. ಬಂದು, ನೇರವಾಗಿ ಹೂಡಿಕೆ ಮಾಡಿ. ನಾವು ಬಾಗಿಲು ತೆರೆದಿದ್ದೇವೆ.
* ಭಾರತದ ಫಾರ್ಮಾ ವಲಯ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಆಸ್ತಿ ಇದ್ದಂತೆ ಎಂಬುದು ಕೊರೊನಾ ಬಿಕ್ಕಟ್ಟು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಔಷಧಗಳ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಅದರಲ್ಲಿ ಅಭಿವೃದ್ಧಿ ಆಗುತ್ತಿರುವ ರಾಷ್ಟ್ರಗಳಿಗೆ ಅನುಕೂಲ ಆಗಿದೆ.
* ಭಾರತವು ಪುನಶ್ಚೇತನದ ಬಗ್ಗೆ ಮಾತನಾಡುವಾಗ ಇದು ಕಾಳಜಿಯಿಂದ, ಕರುಣೆಯಿಂದ ಹಾಗೂ ಪರಿಸರ ಹಾಗೂ ಆರ್ಥಿಕತೆಯನ್ನು ಸುಸ್ಥಿರವಾಗಿಟ್ಟುಕೊಂಡು ಮಾಡುವ ಪುನಶ್ಚೇತನ ಆಗಿರುತ್ತದೆ. ಯಾವುದು ಅಸಾಧ್ಯ ಎಂದೆನಿಸುತ್ತದೋ ಅದನ್ನು ಸಾಧಿಸುವ ಸ್ಫೂರ್ತಿ ಭಾರತೀಯರಲ್ಲಿ ಇದೆ. ಭಾರತವು ಈಗಾಗಲೇ ಆರ್ಥಿಕತೆ ಚೇತರಿಕೆ ಹಾದಿಯಲ್ಲಿ ಇದೆ ಎಂದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ.
* ದಶಕಗಳಿಂದ ಭಾರತದ ತಂತ್ರಜ್ಞಾನ ಕ್ಷೇತ್ರವು ಮಾರ್ಗದರ್ಶನ ನೀಡುತ್ತಿದೆ.
* ಪ್ರತಿಭೆಗಳ ಪವರ್ ಹೌಸ್ ಭಾರತ. ಕೊಡುಗೆ ನೀಡುವ ಸಲುವಾಗಿ ತಹತಹಿಸುತ್ತಿದೆ.
* ಯಾವುದೇ ಸವಾಲಿರಲಿ ಭಾರತವು ಹೊಸ ಸ್ಫೂರ್ತಿ, ಸುಧಾರಣೆ ಹಾಗೂ ಹೊಸ ಚೈತನ್ಯದೊಂದಿಗೆ ಮೇಲೆದ್ದಿದೆ ಎಂಬುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಅದೇ ಸ್ಫೂರ್ತಿ ಈಗಲೂ ಮುಂದುವರಿಯಲಿದೆ.
* ನಾವು ಆರ್ಥಿಕ ಪುನಶ್ಚೇತನದ ಕಡೆಗೂ ಸಮಾನವಾಗಿ ಗಮನ ಹರಿಸುತ್ತಿದ್ದೇವೆ.
* ಭಾರತೀಯರು ಸಹಜವಾಗಿಯೇ ಸುಧಾರಕರು.