ಉದ್ಯಮಿ ರತನ್ ಟಾಟಾ ಪ್ರೀತಿಯನ್ನು ಮುರಿದಿತ್ತು ಭಾರತ- ಚೀನಾ ಯುದ್ಧ
ದೊಡ್ಡ ಉದ್ಯಮಿಗಳು ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೇ ಕಡಿಮೆ. ಅಷ್ಟೇ ಏಕೆ, ತಮ್ಮ ವೈಯಕ್ತಿಕ ಅಭಿಪ್ರಾಯವನ್ನೇ ಸಾರ್ವಜನಿಕವಾಗಿ ವ್ಯಕ್ತಪಡಿಸುವುದಿಲ್ಲ. ಆದರೂ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಹೆಸರಾದ ಉದ್ಯಮಿ ರತನ್ ಟಾಟಾ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಆಸಕ್ತಿಕರ ಸಂಗತಿಗಳನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಅಂದ ಹಾಗೆ, ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ ರತನ್ ಟಾಟಾ. ಅವರಿಗೆ ಹನ್ನೊಂದು ಲಕ್ಷ ಫಾಲೋವರ್ಸ್ ಇದ್ದಾರೆ. ರತನ್ ಟಾಟಾ ಅವರು ಮಾಡುವ ಒಂದೇ ಒಂದು ಪೋಸ್ಟ್ ಗೆ ಕೂಡ ಅದ್ಭುತವಾಗಿ ಪ್ರತಿಕ್ರಿಯಿಸುವ, ಖುಷಿಪಡುವ ಜನ ಇವರು. ಅಂಥ ರತನ್ ಟಾಟಾ ಅವರು ಫೇಸ್ ಬುಕ್ ನ ಹೆಸರಾಂತ ಪುಟಾ ಹ್ಯೂಮನ್ಸ್ ಆಫ್ ಬಾಂಬೆ ಜತೆಗೆ ಮಾತನಾಡಿದ್ದಾರೆ.
ತಂದೆ ಜತೆ ಭಿನ್ನಾಭಿಪ್ರಾಯ ಇತ್ತು
ತಮ್ಮ ವೈಯಕ್ತಿಕ ಬದುಕು, ಕಾಲೇಜು ದಿನಗಳಾದ ಮೇಲೆ ಹೇಗೆ ಪ್ರೀತಿಯಲ್ಲಿ ಬಿದ್ದರು ಮತ್ತು ಹೇಗೆ ಅದು ಮದುವೆ ತನಕ ಬಂದಿತ್ತು ಇತ್ಯಾದಿ ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತನ್ನ ತಂದೆ ಜತೆಗೆ ಇದ್ದ ಭಿನ್ನಾಭಿಪ್ರಾಯದ ಬಗ್ಗೆಯೂ ಹೇಳಿಕೊಂಡಿದ್ದಾರೆ. ತನ್ನ ಪೋಷಕರ ವಿವಾಹ ವಿಚ್ಛೇದನದ ನಂತರ ಬದುಕು ಹೇಗಿತ್ತು, ಅಜ್ಜಿಯ ಹತ್ತಿರ ಬೆಳೆದಿದ್ದು, ಅವರು ಕಲಿಸಿದ ಮೌಲ್ಯಗಳು, ಕಾರ್ನೆಲ್ ಯೂನಿವರ್ಸಿಟಿಯ ದಿನಗಳು ಮತ್ತು ಸಂಬಂಧಗಳು ಹೇಗೆ ಬಿರುಕಾಯಿತು ಎಂಬ ಕಾರಣ ತಿಳಿಸಿದ್ದಾರೆ.
ಲಾಸ್ ಏಂಜಲೀಸ್ ನಲ್ಲಿ ಲವ್
"ನನ್ನ ಕಾಲೇಜು ದಿನಗಳ ನಂತರ ಲಾಸ್ ಏಂಜಲೀಸ್ ನ ಆರ್ಕಿಟೆಕ್ಚರ್ ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಸೇರಿದೆ. ಅಲ್ಲಿ ಎರಡು ವರ್ಷ ನಾನು ಕೆಲಸ ಮಾಡಿದೆ. ಅದು ಅದ್ಭುತವಾದ ಸಮಯ. ಅಲ್ಲಿ ವಾತಾವರಣ ಸುಂದರವಾಗಿತ್ತು. ನನ್ನದೊಂದು ಕಾರಿತ್ತು ಮತ್ತು ನನ್ನ ಕೆಲಸವನ್ನು ಪ್ರೀತಿಸುತ್ತಿದ್ದೆ. ಲಾಸ್ ಏಂಜಲೀಸ್ ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದೆ ಮತ್ತು ಇನ್ನೇನು ಮದುವೆ ಆಗುವವನಿದ್ದೆ. ಆದರೆ ಭಾರತ- ಚೀನಾ ಯುದ್ಧದ ಸನ್ನಿವೇಶದಲ್ಲಿ ಆಕೆಯ ಪೋಷಕರು ಆ ಸಂಬಂಧವನ್ನು ಮುಂದುವರಿಸುವುದು ಇಷ್ಟಪಡಲಿಲ್ಲ" ಎಂದು ಹೇಳಿದ್ದಾರೆ.
ಸಂತೋಷವಾದ ಬಾಲ್ಯ
ಮೂರು ಭಾಗದ ಸರಣಿಯ ಪೈಕಿ ಮೊದಲನೆಯದರಲ್ಲಿ ಟಾಟಾ ಮಾತನಾಡಿ, ತಂದೆ- ತಾಯಿಯ ವಿವಾಹ ವಿಚ್ಛೇದನದ ಕಾರಣಕ್ಕೆ ನಾನು ಹಾಗೂ ಸೋದರ ಕೆಲವು ಶೋಷಣೆ ಅನುಭವಿಸಿದ್ದೇವೆ. ಆದರೂ ನನ್ನ ಬಾಲ್ಯ ಸಂತೋಷವಾಗಿತ್ತು. ಆಗಿನ ಪರಿಸ್ಥಿತಿ ಈಗಿನ ರೀತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.
ಜೀವನ ಮೌಲ್ಯವನ್ನು ಹೇಳಿಕೊಟ್ಟ ಅಜ್ಜಿ
ಪೋಷಕರಾದ ನವಲ್ ಟಾಟಾ ಮತ್ತು ಸೂನಿ ಬೇರೆಯಾದಾಗ ರತನ್ ಟಾಟಾ ಅವರಿಗೆ ಇನ್ನೂ ಚಿಕ್ಕ ವಯಸ್ಸು. ಅಜ್ಜಿ ನವಜ್ ಬಾಯಿ ಟಾಟಾ ಅವರೇ ರತನ್ ಅವರನ್ನು ಸಾಕಿದರು. ತಮಗೆ ಜೀವನ ಮೌಲ್ಯವನ್ನು ಹೇಳಿಕೊಟ್ಟವರು ಅಜ್ಜಿ. ಯಾವುದೇ ಕಾರಣಕ್ಕೆ ಗೌರವ ಕಳೆದುಕೊಳ್ಳಬಾರದು ಎಂದು ಹೇಳಿಕೊಟ್ಟ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.
ಎರಡನೇ ವಿಶ್ವಯುದ್ಧದ ನಂತರ ಲಂಡನ್ ಗೆ
ಎರಡನೇ ವಿಶ್ವ ಯುದ್ಧದ ನಂತರ ನನ್ನನ್ನು ಹಾಗೂ ಸೋದರನನ್ನು ಅಜ್ಜಿ ಲಂಡನ್ ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಮಗೆ ಮೌಲ್ಯಗಳು ಗೊತ್ತಾದವು. ಅದನ್ನು ಮಾತನಾಡಬೇಡಿ, ಆ ಬಗ್ಗೆ ಸುಮ್ಮನಿರಿ ಇತ್ಯಾದಿ ಏನನ್ನೂ ಅವರು ಹೇಳಲಿಲ್ಲ. ಏಕೆಂದರೆ, ಎಲ್ಲಕ್ಕಿಂತ ಹೆಚ್ಚೆಂದರೆ ಅದು ಪ್ರತಿಷ್ಠೆ- ಗೌರವ ಎಂದು ಅವರು ಹೇಳಿಕೊಟ್ಟಿದ್ದು ನಮ್ಮ ಮನಸ್ಸಿನಲ್ಲಿ ಉಳಿದುಹೋಗಿತ್ತು ಎಂದಿದ್ದಾರೆ ರತನ್ ಟಾಟಾ.