ಹಣದುಬ್ಬರ ಪ್ರಸ್ತುತ ಪ್ರಮುಖ ಆದ್ಯತೆ ಏನಲ್ಲ: ನಿರ್ಮಲಾ ಸೀತಾರಾಮನ್
ಕಳೆದ ಕೆಲವು ವಾರಗಳಿಂದ ಹಣದುಬ್ಬರವು ಇಳಿಕೆಯಾಗುತ್ತಿದೆ. ಹಾಗಿರುವಾಗ ಪ್ರಸ್ತುತ ಭಾರತದಲ್ಲಿ ಹಣದುಬ್ಬರವು ಪ್ರಮುಖ ಆದ್ಯತೆ ಏನಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, "ಪ್ರಸ್ತುತ ಉದ್ಯೋಗ ಸೃಷ್ಟಿ ಮಾಡುವುದು ಹಾಗೂ ಆದಾಯವನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುವುದು ಮಾತ್ರ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ಹಲವಾರು ವಾರಗಳಿಂದ ಹಣದುಬ್ಬರವು ಕಡಿಮೆಯಾಗಿದೆ. ಆದ್ದರಿಂದ ಹಣದುಬ್ಬರ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ ಏನಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು
ಭಾರತದಲ್ಲಿ ರಾಷ್ಟ್ರೀಯ ಮೂಲಸೌಕರ್ಯ ಹಾಗೂ ಹೂಡಿಕೆ ನಿಧಿ (ಎನ್ಐಐಎಫ್) ದೃಢವಾಗಬೇಕಾಗಿದೆ. ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಬೇಕಾಗಿದೆ ಎಂದಿದ್ದಾರೆ.
ಹಣದುಬ್ಬರ ಕೂಡಾ ಪ್ರಮುಖ
ಇನ್ನು ನಮಗೆ ಹಣದುಬ್ಬರ ಕೂಡ ಪ್ರಮುಖವೇ ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ನಮಗೆ ಹಣದುಬ್ಬರ ಕೂಡಾ ಪ್ರಮುಖವೇ ಆಗಿದೆ. ಆದರೆ ಅತೀ ಪ್ರಮುಖ ಆದ್ಯತೆ ಏನಲ್ಲ. ಏಕೆಂದರೆ ಕಳೆದ ಹಲವು ವಾರಗಳಿಂದ ನಾವು ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ಸಫಲವಾಗಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವೆ ವಿವರಿಸಿದ್ದಾರೆ. ಇನ್ನು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರಕಾರ ಭಾರತವು ಹಂತ ಹಂತವಾಗಿ ಬೆಳವಣಿಗೆ ಹೊಂದಬೇಕಾದರೆ ಎರಡು ಪ್ರಮುಖ ವಿಚಾರಗಳಿಗೆ ಅಧಿಕ ಆದ್ಯತೆ ನೀಡಬೇಕಾಗಿದೆ. ಅದು ಉದ್ಯೋಗ ಸೃಷ್ಟಿ ಹಾಗೂ ಆದಾಯ ಹಂಚಿಕೆಯಾಗಿದೆ. ಇನ್ನು ಹೂಡಿಕೆದಾರರಿಗೆ ಆಹ್ವಾನವನ್ನು ಕೂಡಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಭಾರತವು ಹೆಚ್ಚು ಹೂಡಿಕೆಯನ್ನು ಪಡೆಯುವ ನಿಟ್ಟಿನಲ್ಲಿ ಹೂಡಿಕೆ ಕ್ಷೇತ್ರವನ್ನು ತೆರೆದಿರಿಸಿದೆ ಎಂದಿದ್ದಾರೆ.
ವೈಯಕ್ತಿಕ ಡೇಟಾ ಸಂರಕ್ಷಣೆ ಮಸೂದೆ ಬಗ್ಗೆ ವಿತ್ತ ಸಚಿವೆ ಹೇಳಿದ್ದೇನು?
ಇನ್ನು ಈ ಸಂದರ್ಭದಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಡೇಟಾ ಸಂರಕ್ಷಣೆ ಮಸೂದೆ ಬಗ್ಗೆಯೂ ಮಾತನಾಡಿದ್ದಾರೆ. ಈ ಹಿಂದೆ ಹಲವಾರು ವಿವಾದಗಳ ಕಾರಣ ಈ ಮಸೂದೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಈ ಮಸೂದೆ ಸಿದ್ಧತೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೆ ಹೊಸ ವೈಯಕ್ತಿಕ ಡೇಟಾ ಸಂರಕ್ಷಣೆ ಮಸೂದೆ ಜಾರಿ ಆಗಲಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಹಣದುಬ್ಬರ ಸ್ಥಿತಿ ಹೇಗಿದೆ?
ಸಗಟು ಬೆಲೆ ಆಧಾರಿತ ಹಣದುಬ್ಬರವು (ಡಬ್ಲ್ಯೂಪಿಐ) ಜುಲೈ 2022 ರಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆಹಾರ ಪದಾರ್ಥಗಳು ಮತ್ತು ಆಹಾರ ಉತ್ಪನ್ನಗಳ ಬೆಲೆಗಳು ಕೊಂಚ ಇಳಿಕೆಯಾದ ಕಾರಣದಿಂದಾಗಿ ಜುಲೈನಲ್ಲಿ ಸಗಟು ಹಣದುಬ್ಬರವು ಶೇಕಡ 13.93ಕ್ಕೆ ಇಳಿದಿದೆ. ಕಳೆದ ವರ್ಷ ಜುಲೈನಲ್ಲಿ ಸಗಟು ಹಣದುಬ್ಬರ ಶೇ.11.57ರಷ್ಟಿತ್ತು. ಇನ್ನು ಆಗಸ್ಟ್ ಹಣದುಬ್ಬರವು ಇನ್ನಷ್ಟೇ ತಿಳಿಯಬೇಕಾಗಿದೆ. ಆದರೆ ತಜ್ಞರು ಆಗಸ್ಟ್ನಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದೇಶದಲ್ಲಿ ಜುಲೈ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ರಿಟೇಲ್ ಹಣದುಬ್ಬರ ಶೇಕಡ 6.71ಕ್ಕೆ ಇಳಿದಿದ್ದು, ಮಾರ್ಚ್ ಬಳಿಕ ಮೊದಲ ಬಾರಿಗೆ ರಿಟೇಲ್ ಹಣದುಬ್ಬರ ಇಷ್ಟು ಕೆಳಕ್ಕೆ ಇಳಿದಿದೆ. ಸಿಪಿಐ ಆಧಾರಿತ ರಿಟೇಲ್ ಹಣದುಬ್ಬರವು ಜೂನ್ನಲ್ಲಿ ಶೇಕಡ 7.01 ರಷ್ಟಿತ್ತು. ಸತತ ಆರನೇ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಅಂದಾಜು ಮಿತಿಯನ್ನು ಹಣದುಬ್ಬರ ಮೀರಿತ್ತು. ಈಗ ಸತತ ಏಳನೇ ತಿಂಗಳಿನಲ್ಲಿ ಆರ್ಬಿಐ ಮಿತಿಗಿಂತ ರಿಟೇಲ್ ಹಣದುಬ್ಬರ ಅಧಿಕವಾಗಿದೆ. ಇನ್ನು ಮೇ ಬಳಿಕ ಸತತ ಮೂರು ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹಣದುಬ್ಬರವನ್ನು ನಿಯಂತ್ರಣ ಮಾಡಲು ರೆಪೋ ದರ ಹೆಚ್ಚಳ ಮಾಡಿದೆ.