'ಬ್ಯಾಂಕ್ ಡೆಪಾಸಿಟ್ ಗೆ 1 ಲಕ್ಷಕ್ಕಿಂತ ಹೆಚ್ಚು ಇನ್ಷೂರೆನ್ಸ್ ಕವರ್ ಬಗ್ಗೆ ಮಾಹಿತಿ ಇಲ್ಲ'
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಯಾವುದೇ ಹಣಕಾಸು ಸಂಸ್ಥೆ ದಿವಾಳಿಯಾದರೆ, ಮುಚ್ಚುವ ಹಂತ ತಲುಪಿದರೆ ಅದರ ಗ್ರಾಹಕರಿಗೆ ಈಗಿರುವ ಗರಿಷ್ಠ ಪರಿಹಾರ ಮೊತ್ತ ಒಂದು ಲಕ್ಷ ರುಪಾಯಿ. "ಆ ಮೊತ್ತವನ್ನು ಹೆಚ್ಚಿಸುವ ಯಾವುದೇ ಮಾಹಿತಿ ಇಲ್ಲ" ಎಂದು ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ತಿಳಿಸಿದೆ.
ಸದ್ಯಕ್ಕೆ ಠೇವಣಿದಾರರಿಗೆ ಒಂದು ಲಕ್ಷ ರುಪಾಯಿ ತನಕ ಬ್ಯಾಂಕ್ ಡೆಪಾಸಿಟ್ ಮೇಲೆ ಇದ್ದ ಇನ್ಷೂರೆನ್ಸ್ ಕವರ್ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಕಾನೂನು ತರುವ ಬಗ್ಗೆ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದರು.
ಬ್ಯಾಂಕ್ ಠೇವಣಿ ವಿಮೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ
ಆರೆಸ್ಸೆಸ್ ಗೆ ಆಪ್ತರಾದ ಕೆಲವರು ಸಹಕಾರ ಭಾರತಿ ಎಂಬ ಲಾಭರಹಿತ ಸಂಸ್ಥೆಗೆ ಪದಾಧಿಕಾರಿಗಳಾಗಿದ್ದು, ಬ್ಯಾಂಕ್ ಠೇವಣಿಗಳ ಮೇಲಿನ ಇನ್ಷೂರೆನ್ಸ್ ಮಿತಿಯನ್ನು ಐದು ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈಗಿನ ಹೇಳಿಕೆಗೆ ಮಹತ್ವ ಬಂದಿದೆ.
ಒಂದು ಲಕ್ಷಕ್ಕಿಂತ ಹೆಚ್ಚಿನ ಡೆಪಾಸಿಟ್ ಗೆ ಇನ್ಷೂರೆನ್ಸ್ ಕವರ್ ಆಗುವ ಪ್ರಸ್ತಾವದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಡಿಐಸಿಜಿಸಿ ಉತ್ತರ ನೀಡಿದೆ.
ಬ್ಯಾಂಕ್ ಗಳು ಮುಚ್ಚುವ ಹಂತದಲ್ಲಿ, ದಿವಾಳಿಯಾದ ಸಂದರ್ಭದಲ್ಲಿ ಠೇವಣಿದಾರರು ಬ್ಯಾಂಕ್ ಗಳಲ್ಲಿ ಅದ್ಯಾವುದೇ ಮೊತ್ತವನ್ನು ಇಟ್ಟಿದ್ದರೂ ಇನ್ಷೂರೆನ್ಸ್ ಕವರ್ ಆಗುವ ಒಂದು ಲಕ್ಷ ರುಪಾಯಿ ಮಾತ್ರ ವಾಪಸ್ ದೊರೆಯುತ್ತದೆ ಡಿಐಸಿಜಿಸಿ ಮಾಹಿತಿ ನೀಡಿದೆ.