ಏಪ್ರಿಲ್ 14ರ ನಂತರವೂ ಲಾಕ್ ಡೌನ್? ಸಚಿವ ಸುಧಾಕರ್ ಏನಂದ್ರು ಗೊತ್ತಾ?
21 ದಿನಗಳ ಲಾಕ್ ಡೌನ್ ಅವಧಿ ಏಪ್ರಿಲ್ 14ಕ್ಕೆ ಪೂರ್ತಿ ಆಗಲಿದೆ. ಆದರೆ ಎಲ್ಲೆಲ್ಲಿ COVID- 19 ಪಾಸಿಟಿವ್ ಪ್ರಕರಣಗಳು ಹೆಚ್ಚಿವೆಯೋ ಅಲ್ಲೆಲ್ಲ ಲಾಕ್ ಡೌನ್ ಮುಂದುವರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. "ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇನ್ನೂ ಕೆಲ ಸಮಯ ಕಾದುನೋಡಬೇಕಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ 21 ದಿನಗಳ ಲಾಕ್ ಡೌನ್ ಅನ್ನು ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಇನ್ನೂ ನಿರ್ಧಾರ ಮಾಡಬೇಕಿದೆ. ಮಂಗಳವಾರದಂದು ಕರ್ನಾಟಕದಲ್ಲಿ ಹನ್ನೆರಡು ಕೊರೊನಾ ಪಾಸಿಟಿವ್ ಪ್ರಕರಣ ಹೊಸದಾಗಿ ಕಂಡುಬಂದಿದೆ.
ಅಲ್ಲಿಗೆ ಕರ್ನಾಟಕದಲ್ಲಿ 175 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 4 ಮಂದಿ ಸಾವನ್ನಪ್ಪಿದ್ದಾರೆ. "ರೆಡ್ ಅಲರ್ಟ್ ಹಾಗೂ ವಲಯ ಇರುವ ಕಡೆಗೆ ನನ್ನ ಪ್ರಕಾರ ಲಾಕ್ ಡೌನ್ ಹೆಚ್ಚುವರಿಯಾಗಿ ಎರಡು ವಾರ ಮುಂದುವರಿಯಬೇಕು. ಅದು ಏಪ್ರಿಲ್ ತಿಂಗಳ ಕೊನೆಯ ತನಕ. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತೇವೆ" ಎಂದಿದ್ದಾರೆ ಸುಧಾಕರ್.
ಬೆಂಗಳೂರಿನಲ್ಲಿ ಅರವತ್ತಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. ಸಾವಿರಾರು ಮಂದಿ ಗೃಹ ದಿಗ್ಬಂಧನದಲ್ಲಿ ಇದ್ದಾರೆ. ಕರ್ನಾಟಕದ ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಎರಡಂಕಿ ದಾಟಿದೆ. ಈವರೆಗೆ ಬೆಂಗಳೂರು, ಮೈಸೂರಿನಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ವರದಿ ಆಗಿದೆ.