ಬ್ರಿಟಿಷರ ವಿರುದ್ಧ ಸೆಟೆದು ನಿಂತು ಅದ್ಭುತ ಸಂಸ್ಥೆಗಳ ಕಟ್ಟಿದ ಜಮ್ಷೆಡ್ ಜೀ ಗೊತ್ತೆ?
"ಟಾಟಾದಿಂದ ರೈಲು ಹಳಿಗೆ ಉಕ್ಕು ಉತ್ಪಾದಿಸುವ ಪ್ರಸ್ತಾವ ಬಂದಿದೆಯಾ, ಅದು ಕೂಡ ಬ್ರಿಟಿಷರ ಅಗತ್ಯಕ್ಕೆ ತಕ್ಕಂತೆ? ಒಂದು ವೇಳೆ ಅವರು ಅದನ್ನು ಮಾಡುವುದರಲ್ಲಿ ಯಶಸ್ವಿಯಾದರೆ ಪ್ರತಿ ಪೌಂಡ್ ಉಕ್ಕನ್ನು ನಾನು ತಿಂತೀನಿ" ಎಂದಿದ್ದ ಆ ಬ್ರಿಟಿಷ್ ಚೀಫ್ ಕಮಿಷನರ್. ಆದರೆ ಮೊದಲನೇ ವಿಶ್ವ ಯುದ್ಧ ನಡೆದ 1914ನೇ ಇಸವಿ ಹೊತ್ತಿಗೆ ಟಾಟಾದಿಂದ 1500 ಮೈಲಿನಷ್ಟು ರೈಲು ಹಳಿಗೆ ಬೇಕಾದ ಉಕ್ಕನ್ನು ರಫ್ತು ಮಾಡಲಾಯಿತು.
ಆಗ ಜಮ್ಷೆಡ್ ಜೀ ಟಾಟಾ ಅವರ ಮಗ ದೊರಬ್ ಗೆ ಮಾತನಾಡುವ ಸಮಯ ಬಂದಿತ್ತು. "ಭಾರತೀಯ ರೈಲ್ವೆ ಕಮಿಷನರ್ ಗೆ 'ಸ್ವಲ್ಪ ಮಟ್ಟಿಗೆ ಅಜೀರ್ಣ ಆಗಬಹುದು' ಆದರೆ ಅವರ ಮಾತಿನಂತೆ ನಡೆದುಕೊಳ್ಳುತ್ತಾರಾ? ಟಾಟಾದಿಂದ ಉಕ್ಕು ತಯಾರಾಗಿದೆ" ಎಂದಿದ್ದರು.
ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ ಲಿಮಿಟೆಡ್ ನೋಂದಣಿಯಾಗಿದ್ದು 1907ನೇ ಇಸವಿ, 26ನೇ ಆಗಸ್ಟ್. ಆದರೆ ಕಾರ್ಯ ನಿರ್ವಹಣೆ ಆರಂಭಿಸಿದ್ದು 1911-12ರಲ್ಲಿ. ಅವತ್ತಿನ ಕಷ್ಟದ ದಿನಗಳನ್ನೆಲ್ಲ ದಾಟಿ ಬೆಳೆದು ನಿಂತಿರುವ ಟಾಟಾ ಸ್ಟೀಲ್ ಇಂದಿಗೆ ವಿಶ್ವದಾದ್ಯಂತ ಸುಪರಿಚಿತ. ಇದೆಲ್ಲ ಸಾಧ್ಯವಾಗಿದ್ದು ಆ ವ್ಯಕ್ತಿಯೊಳಗೆ ಮೊಳಕೆಯೊಡೆದ ಕನಸಿನ ಬೀಜದಿಂದ. ಸ್ವಾಭಿಮಾನದ ಕುಲುಮೆಯಿಂದ. ಆ ವ್ಯಕ್ತಿಯ ಹೆಸರು ಜಮ್ಷೆಡ್ ಜೀ ಟಾಟಾ.
ಯಾವತ್ತೂ ಮುನ್ನಡೆಸಬೇಕೇ ಹೊರತು ಅನುಸರಿಸಬಾರದು
1839ರಿಂದ 1914ರ ಮಧ್ಯೆ ಜೀವಿಸಿದ್ದ ಜಮ್ಷೆಡ್ ಜೀ ಟಾಟಾ ಅವರದೊಂದು ಮಾತನ್ನು ಈಗಲೂ ರತನ್ ಟಾಟಾ ನೆನಪಿಸಿಕೊಳ್ಳುತ್ತಾರೆ: "ಯಾವತ್ತೂ ಮುನ್ನಡೆಸಬೇಕೇ ಹೊರತು ಅನುಸರಿಸಬಾರದು". ಜಮ್ಷೆಡ್ ಜೀ ಟಾಟಾ ಎಂಥ ಸ್ವಾಭಿಮಾನಿ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಗುತ್ತದೆ. ತಮ್ಮ ತಂದೆಯ ಕಾರ್ಖಾನೆಯಲ್ಲಿ ಜಮ್ಷೆಡ್ ಜೀ ಅಪ್ರೆಂಟೀಸ್ ಆಗಿ ಕೆಲಸ ಮಾಡುತ್ತಿದ್ದರು. ಆಗಿನ್ನೂ ಯುವಕ. ಅಂಥ ವೇಳೆ ಮುಂಬೈನ ಐಷಾರಾಮಿ ಹೋಟೆಲ್ ವೊಂದಕ್ಕೆ ಟಾಟಾ ಹೋಗುತ್ತಾರೆ. ಅವರನ್ನು ಅಲ್ಲಿಂದ ಹೊರಗೆ ಕಳಿಸಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ? "ಕಪ್ಪು ಬಣ್ಣದ ಚರ್ಮದವರಿಗೆ ಅಲ್ಲಿ ಪ್ರವೇಶ ಇಲ್ಲ" ಎಂಬ ನಿಯಮ ಇರುತ್ತದೆ. ಅದಕ್ಕಾಗಿ ಅಲ್ಲೊಂದು ಬೋರ್ಡ್ ತಗುಲಿ ಹಾಕಿರುತ್ತಾರೆ. ಆ ಘಟನೆಯಿಂದ ಕನಲಿಹೋದ ಜಮ್ಷೆಡ್ ಜೀ, ಅದ್ಭುತವಾದ ಹೋಟೆಲ್ ವೊಂದನ್ನು ಮುಂಬೈನಲ್ಲೇ ಕಟ್ಟುತ್ತಾರೆ. ಅದೂ ಭಾರತೀಯ ಅತಿಥಿಗಳಾಗಿಯೇ ಮೀಸಲಾಗಿರುತ್ತದೆ. 1903ನೇ ಇಸವಿಯಲ್ಲಿ ಸಮುದ್ರದತ್ತ ಮುಖ ಮಾಡಿ ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್. ಮುಂಬೈ ನಗರದಲ್ಲಿ ವಿದ್ಯುತ್ ಕಂಡ ಮೊದಲ ಹೋಟೆಲ್ ಅದು. ಅಷ್ಟೇ ಅಲ್ಲ, ಅಮೆರಿಕ ಫ್ಯಾನ್ ಗಳು, ಜರ್ಮನ್ ಲಿಫ್ಟ್ ಗಳು, ಇಂಗ್ಲಿಷ್ ಬಾಣಸಿಗರು. ಇಷ್ಟೆಲ್ಲ ಮೊದಲುಗಳನ್ನು ಹುಟ್ಟು ಹಾಕಿದ ಹೋಟೆಲ್ ಅದು.
ಸ್ವಂತ ದುಡ್ಡಿನಲ್ಲಿ ಐಐಎಸ್ಸಿ ಆರಂಭ
ಇನ್ನು ಜಮ್ಷೆಡ್ ಜೀ ಟಾಟಾ ಭಾರತದ ಮೊದಲ ಅಡ್ವಾನ್ಸ್ಡ್ ಸೈಂಟಿಫಿಕ್ ಎಜುಕೇಷನ್ ಇನ್ ಸ್ಟಿಟ್ಯೂಷನ್ ಆರಂಭಿಸಿದವರು. ಅದು ಕೂಡ ಅವರ ಸ್ವಂತ ದುಡ್ಡಿನಲ್ಲಿ. ಅದೇನು ವಾಸ್ತವಿಕ ವಿಜ್ಞಾನವನ್ನು ಅಲ್ಲಿ ಕಲಿಸಲಾಗುತ್ತೋ ಎಂದು ಆಡಿಕೊಂಡವರೇ ಹೆಚ್ಚಿದ್ದರು. ಆದರೆ ಟಾಟಾ ಹೇಳಿದ್ದರು: ಈ ಸಂಸ್ಥೆ ನನ್ನ ಮೂರನೇ ಮಗ. ಬೆಂಗಳೂರಿನಲ್ಲಿ ಇರುವ ಆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಜಗತ್ತಿನ ಬೇರೆ ಯಾವುದೇ ಸಂಸ್ಥೆಯೊಂದಿಗೆ ಸಮನಾಗಿ ನಿಲ್ಲಬಲ್ಲ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ. ಆತ ಮಹಾನ್ ಕನಸುಗಾರ. ಅವರು ಕಂಡ ಕನಸುಗಳಲ್ಲಿ ಬದುಕಿದ್ದಂತೆಯೇ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗಿದ್ದು ಅದೊಂದು. ಐರನ್ ಮತ್ತು ಸ್ಟೀಲ್ ಕಂಪೆನಿ ಸ್ಥಾಪನೆ, ಹೈಡ್ರೋ ಎಲೆಕ್ಟ್ರಿಕ್ ಪವರ್ ಜನರೇಷನ್, ಭಾರತದಲ್ಲಿ ಭಾರತೀಯರಿಗೆ ವಿಜ್ಞಾನ ಕಲಿಸುವಂಥ ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಬೇಕು ಎಂಬ ಕನಸುಗಳೆಲ್ಲ ಜಮ್ಷೆಡ್ ಜೀ ಅವರ ನಿಧನದ ನಂತರ ಸಾಧ್ಯವಾಯಿತು.
ಕಾರ್ಮಿಕರ ಪರವಾಗಿ ಹಲವು ಯೋಜನೆಗಳು
ಜಮ್ಷೆಡ್ ಜೀ ಅವರು ಕಟ್ಟಲು ಬಯಸಿದ್ದ ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿಯನ್ನು ಅವರ ಮಗ ದೊರಬ್ಜೀ ಟಾಟಾ ಸಾಧ್ಯ ಮಾಡಿದರು. ಆದರೆ ಅಷ್ಟರಲ್ಲಿ ಜಮ್ಷೆಡ್ ಜೀ ತೀರಿಕೊಂಡು ಎಂಟು ವರ್ಷ ಆಗಿಹೋಗಿತ್ತು. ಇನ್ನು 1915ನೇ ಇಸವಿಯಲ್ಲಿ ಹೈಡ್ರೋ ಎಲೆಕ್ಟ್ರಿಕ್ ಉತ್ಪಾದನೆ ಕೇಂದ್ರ ಮುಂಬೈ ಸಮೀಪ ಖೊಪೋಲಿಯಲ್ಲಿ ಸ್ಥಾಪನೆಯಾಯಿತು. ದೇಶದ ಮೊದಲ ಟೆಕ್ಸ್ ಟೈಲ್ ಮಿಲ್ಸ್ ಆರಂಭಿಸಿ ಭಾರತೀಯರಿಗೆ ನಿತ್ಯದ ಅನ್ನಕ್ಕೆ ದಾರಿ ಆಗುವಂತೆ ಮಾಡಿದರು. ಅಷ್ಟೇ ಅಲ್ಲ, ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಲು ಕಾರಣರಾದರು. ಈ ದೇಶದಲ್ಲಿ ಕಾರ್ಮಿಕ ಕಾನೂನು ಅಂತಲೇ ಇಲ್ಲದ ದಿನಗಳಲ್ಲಿ ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. 1877ನೇ ಇಸವಿಯಲ್ಲೇ ತಮ್ಮ ಸಿಬ್ಬಂದಿಗೆ ಟಾಟಾ ಪಿಂಚಣಿ ಯೋಜನೆ ಜಾರಿಗೆ ತಂದಿದ್ದರು. ದಿನಕ್ಕೆ ಎಂಟು ಗಂಟೆ ವರ್ಕಿಂಗ್ ಅವರ್ (1912) ಪರಿಚಯಿಸಲಾಗಿತ್ತು. ಅವರ ನಂತರ 1921ನೇ ಇಸವಿಯಲ್ಲಿ ಎಲ್ಲ ಸಿಬ್ಬಂದಿಗೂ ಮೆಟರ್ನಿಟಿ ಅನುಕೂಲಗಳನ್ನು ಒದಗಿಸಲಾಯಿತು.
ಆಸ್ತಿಯಲ್ಲಿ ಅರ್ಧ ಪಾಲು ದಾನ ಮಾಡಿದ ಮಹಾನ್ ದಾನಿ
ಒಂದು ಪುಟ್ಟ ಕೈಗಾರಿಕೆ ಪ್ರದೇಶವನ್ನೇ ಸ್ಥಾಪಿಸುವಂತೆ ತಮ್ಮ ಮಗ ದೊರಬ್ಜಿಗೆ ಪತ್ರ ಬರೆಯುತ್ತಾರೆ ಜಮ್ಷೆಡ್ ಜೀ. ಇಂದು ಆ ಪ್ರದೇಶದ ಹೆಸರು ಜಮ್ಷೆಡ್ ಪುರ್. ಆ ಪತ್ರದ ಒಂದು ಭಾಗ ಹೀಗಿದೆ: "ಆ ಪ್ರದೇಶದಲ್ಲಿ ಫುಟ್ಬಾಲ್, ಹಾಕಿ ಮತ್ತು ಪಾರ್ಕ್ ಗಳಿಗೆ ಅಂತ ಸ್ಥಳ ಮೀಸಲಿಡಬೇಕು. ಹಿಂದೂಗಳ ದೇವಾಲಯ, ಮುಸ್ಲಿಮರಿಗೆ ಮಸೀದಿ, ಕ್ರಿಶ್ಚಿಯನ್ನರಿಗೆ ಚರ್ಚ್ ಇರಬೇಕು" ಎಂದಿದ್ದಾರೆ. ಜಮ್ಷೆಡ್ ಜೀ ಒಬ್ಬ ಉದ್ಯಮಿಯಾಗಿ, ತನ್ನ ತಿಜೋರಿ ತುಂಬಿಸಿಕೊಳ್ಳುವ ಮಹತ್ವಾಕಾಂಕ್ಷಿ ಅಷ್ಟೇ ಆಗಿದ್ದರೆ ಇತಿಹಾಸ ಅವರನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರಲಿಲ್ಲ. ಅಥವಾ ಇಷ್ಟು ಪುಟಗಳು ಅವರಿಗೆ ಮೀಸಲಿರುತ್ತಿರಲಿಲ್ಲ. ತಮ್ಮ ಒಟ್ಟು ಆಸ್ತಿಯ ಅರ್ಧ ಭಾಗ, ಹದಿನಾಲ್ಕು ಕಟ್ಟಡಗಳು, ಮುಂಬೈನಲ್ಲಿನ ನಾಲ್ಕು ಜಮೀನು ಇಷ್ಟನ್ನೂ ಬೆಂಗಳೂರಿನಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪಿಸುವುದಕ್ಕಾಗಿ ದಾನ ಮಾಡಿದರು. ಇದೇ ಐಐಎಸ್ ಸಿಯಿಂದ ಬಂದ ಪ್ರತಿಭಾವಂತ ವಿಜ್ಞಾನಿಗಳೇ ಸಿ.ವಿ.ರಾಮನ್, ಹೋಮಿ ಜೆ ಭಾಭಾ, ವಿಕ್ರಂ ಎಸ್ ಸಾರಾಭಾಯಿ ಹಾಗೂ ಸಿಎನ್ ಆರ್ ರಾವ್. ಅಂದ ಹಾಗೆ ಕೆಲವರ ಹುಟ್ಟು ಅದೊಂದು ಘಟನೆಯಷ್ಟೇ ಆಗಿರುವುದಿಲ್ಲ. ಈ ಭೂಮಿಯಲ್ಲಿ ಬದಲಾವಣೆ ತರುವ ಉದ್ದೇಶದಿಂದಲೇ ಹುಟ್ಟಿರುತ್ತಾರೆ ಎಂಬ ಮಾತು ಜಮ್ಷೆಡ್ ಜೀ ಟಾಟಾ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ