ಕೇಂದ್ರ ಸರ್ಕಾರದಿಂದ ಈರುಳ್ಳಿ ಕೃತಕ ಅಭಾವ ಸೃಷ್ಟಿ: ಮನೀಶ್ ಸಿಸೋಡಿಯಾ
ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಕಾರಣ ಕೇಂದ್ರ ಸರ್ಕಾರವೇ ಆಗಿದ್ದು, ಕೃತಕ ಅಭಾವ ಸೃಷ್ಟಿಸುತ್ತಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಈರುಳ್ಳಿ ಬೇಕಾದಷ್ಟು ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ಅದನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಬೆಲೆ ನಿಯಂತ್ರಣಕ್ಕೆ ಟರ್ಕಿಯಿಂದ 11,000 ಟನ್ ಈರುಳ್ಳಿ ಆಮದಿಗೆ ಕ್ರಮ
'ಕೇಂದ್ರ ಸರ್ಕಾರ ಸೆಪ್ಟೆಂಬರ್ 5ರಂದು ತನ್ನ ಬಳಿ 56,000 ಟನ್ ಈರುಳ್ಳಿ ದಾಸ್ತಾನು ಇದೆ ಎಂದು ಲಿಖಿತ ರೂಪದಲ್ಲಿ ಹೇಳಿತ್ತು. ಆದರೆ ದೆಹಲಿಗೆ ಮಾತ್ರ ಪೂರೈಕೆ ಮಾಡುತ್ತಿಲ್ಲ. ನಾವು 10 ಟನ್ ಈರುಳ್ಳಿ ಕೇಳುತ್ತಿರುವಾಗ 3-4 ಇಲ್ಲವೇ 5 ಟ್ರಕ್ಗಳನ್ನು ಪ್ರತಿದಿನ ಕಳುಹಿಸುತ್ತಿದೆ. ಆ ಟ್ರಕ್ನಲ್ಲೂ ಪೂರ್ತಿ ಈರುಳ್ಳಿ ತುಂಬಿರುವುದಿಲ್ಲ. ಹೀಗೆ ಏಕೆ ಮಾಡಲಾಗುತ್ತಿದೆ' ಎಂದು ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಕ್ರಮವೇ ಕಾರಣವಾಗಿದೆ. ಇಷ್ಟಾದರೂ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದರು.
ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ಬೆಲೆಯು 75 ರಿಂದ 110 ರುಪಾಯಿವರೆಗೆ ತಲುಪಿದೆ. ದೆಹಲಿಯಷ್ಟೇ ಅಲ್ಲದೆ ದೇಶದ ಅನೇಕ ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 80 ರುಪಾಯಿ ದಾಟಿದೆ.