ಹೊಸ ತೆರಿಗೆ ವ್ಯವಸ್ಥೆಯ ಗೊಂದಲವನ್ನು ಶೀಘ್ರದಲ್ಲಿ ಪರಿಹರಿಸುತ್ತೇವೆ: ನಿರ್ಮಲಾ ಸೀತಾರಾಮನ್
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಬಳಿಕ ಹೊಸ ತೆರಿಗೆ ವ್ಯವಸ್ಥೆಯಲ್ಲಿನ ಜನಸಾಮಾನ್ಯರ ಗೊಂದಲವನ್ನು ಶೀಘ್ರ ಬಗೆಹರಿಸಲಾಗುವುದು ಮತ್ತು ಸ್ಪಷ್ಟೀಕರಣ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2020: ಆದಾಯ ತೆರಿಗೆಯಲ್ಲಿನ ಬದಲಾವಣೆಯ ಸಂಪೂರ್ಣ ಮಾಹಿತಿ
ಹೊಸ ತೆರಿಗೆ ದರಗಳ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಬಹುಶಃ ಹಣಕಾಸು ಸಚಿವಾಲಯದಿಂದ ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಗೊಂದಲ ಮೂಡಿರಬಹುದು, ಹೀಗಾಗಿಯೇ ಸ್ಪಷ್ಟೀಕರಣ ನೀಡಲು ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. ' ಹೊಸ ತೆರಿಗೆ ದರದಿಂದ ಆಗಲಿರುವ ಪ್ರಯೋಜನಗಳ ಬಗ್ಗೆ ಸಚಿವಾಲಯವು ಲೆಕ್ಕಾಚಾರಗಳನ್ನು ಹಾಕುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಲ್ಲರಿಗೂ ಆ ಕುರಿತು ತಿಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಸ್ತುತ ತೆರಿಗೆ ಹಾಗೂ ಹೊಸ ತೆರಿಗೆ ನಡುವೆ ಸ್ವಲ್ಪ ಬದಲಾವಣೆಯಾಗಿದ್ದು, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಎಲ್ಲಾ ವಿನಾಯ್ತಿಗಳನ್ನು ಕೈಬಿಡಲಾಗಿಲ್ಲ. ಕೆಲವು ವಿನಾಯ್ತಿಗಳು ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲೂ ಸಿಗಲಿದೆ. ಈ ಬಗ್ಗೆ ಶೀಘ್ರ ಸ್ಪಷ್ಟೀಕರಣ ನೀಡಲಾಗುವುದು ಎಂದಿದ್ದಾರೆ.
ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್
ಸದ್ಯದ ಮಟ್ಟಿಗೆ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆಯಾಗಿ ನೀಡಲಾಗಿದ್ದು, ಹಾಲಿ ಜಾರಿಯಲ್ಲಿರುವ ತೆರಿಗೆ ದರವನ್ನೂ ಉಳಿಸಿಕೊಳ್ಳಲಾಗಿದೆ. ಹೊಸ ತೆರಿಗೆ ವ್ಯವಸ್ಥೆ ಮಧ್ಯಮ ಮತ್ತು ಕೆಳವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗುವುದು. ಜನರ ಬಳಿ ಹೆಚ್ಚಿನ ಹಣ ಇರುವಂತೆ ಮಾಡುವುದು ಅದರ ಹಿಂದಿನ ಮೂಲ ಉದ್ದೇಶವಾಗಿದೆ.