ಮುದ್ರಾ ಅಡಿ ಹೆಚ್ಚುತ್ತಿರುವ NPA; ಆರ್ ಬಿಐ ಡೆಪ್ಯೂಟಿ ಗವರ್ನರ್ ವಾರ್ನಿಂಗ್
'ಮುದ್ರಾ ಸಾಲ'ದಲ್ಲಿ ಹೆಚ್ಚುತ್ತಿರುವ ಅನುತ್ಪಾದಕ ಸಾಲದ (ನಾನ್ ಪರ್ಫಾಮಿಂಗ್ ಅಸೆಟ್ಸ್- ಎನ್ ಪಿಎ) ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಗವರ್ನರ್ ಎಂ. ಕೆ. ಜೈನ್ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಹ ಅವರು ಹೇಳಿದ್ದಾರೆ.
ಈ ಮುದ್ರಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಆರಂಭಿಸಿದ್ದರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಬ್ಯಾಂಕ್ ಸಾಲ ದೊರೆಯುವಂತೆ ವ್ಯವಸ್ಥೆ ಮಾಡಲು ಈ ಯೋಜನೆ ಪರಿಚಯಿಸಲಾಯಿತು.
ಮುದ್ರಾ ಯೋಜನೆ ಮೂಲಕ ಹಲವಾರು ಫಲಾನುಭವಿಗಳನ್ನು ಬಡತನದಿಂದ ಹೊರಕ್ಕೆ ತರಲಾಗಿದೆ. ಆದರೆ ಈ ಸಾಲಗಾರರ ಪೈಕಿ ಎನ್ ಪಿಎ ಪ್ರಮಾಣ ಹೆಚ್ಚಾಗಿದೆ ಎಂದು ಎಸ್ ಐಡಿಬಿಐನ ಮೈಕ್ರೋ ಫೈನಾನ್ಸ್ ಕಾರ್ಯಕ್ರಮದಲ್ಲಿ ಜೈನ್ ಹೇಳಿದ್ದಾರೆ.
ಸಾಲ ಪಡೆಯುವ ಹಂತದಲ್ಲೇ ಮರುಪಾವತಿ ಸಾಮರ್ಥ್ಯದ ಬಗ್ಗೆ ಮೌಲ್ಯಮಾಪನ ಮಾಡಬೇಕು. ಸಾಲ ಮರುಪಾವತಿಯ ಪೂರ್ತಿ ಅವಧಿಯಲ್ಲಿ ಸರಿಯಾದ ಕಣ್ಗಾವಲು ಇಡಬೇಕು ಎಂದಿದ್ದಾರೆ.
ಮುದ್ರಾ ಯೋಜನೆ ಅಡಿ ಬ್ಯಾಂಕ್ ಗಳಿಂದ ಸಾಲ ನೀಡುವಾಗ ಯಾವುದೇ ಶ್ಯೂರಿಟಿ ಅಥವಾ ಅಡಮಾನ ತೆಗೆದುಕೊಳ್ಳುವುದಿಲ್ಲ. ವಾಹನ ಸಾಲ ಪಡೆದ ಪ್ರಕರಣಗಳಲ್ಲಿ ಮಾತ್ರ ವಾಹನವನ್ನು ಬ್ಯಾಂಕ್ ಗಳಿಂದ ಅಡಮಾನ ಮಾಡಿಸಿಕೊಳ್ಳುತ್ತದೆ. ಆದ್ದರಿಂದ ಮುದ್ರಾ ಯೋಜನೆಯಲ್ಲಿ ಎನ್ ಪಿಎ ಪ್ರಮಾಣ ಹೆಚ್ಚಾಗುತ್ತಿದೆ.