ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿಯ ಕೃಷಿಕ ಮಲ್ಲಿಕಾರ್ಜುನ ಈಗ ಪರಿಚಯಸ್ಥರ ಮಧ್ಯೆ ವಿಪರೀತ ಚರ್ಚೆ ಆಗುತ್ತಿದ್ದಾರೆ. ಅದಕ್ಕೆ ಕಾರಣ ಆಗಿದ್ದು ಈರುಳ್ಳಿ ಬೆಲೆಯ ಏರಿಕೆ. ಈ ಬಾರಿಯ ಬಂಪರ್ ಬೆಲೆಯ ಕಾರಣಕ್ಕೆ ನಲವತ್ತೆರಡು ವರ್ಷದ ಮಲ್ಲಿಕಾರ್ಜುನ ತಮ್ಮ ಹಿಂದಿನ ಸಾಲವನ್ನೆಲ್ಲ ತೀರಿಸಿದ್ದಾರೆ.
ಅಂದ ಹಾಗೆ, ಈ ಸಲವೂ ಸಾಲ ಮಾಡಿಯೇ ಮಲ್ಲಿಕಾರ್ಜುನ ಈರುಳ್ಳಿ ಬೆಳೆದಿದ್ದರು. ಈ ತನಕ ಅವರು ತೆಗೆದುಕೊಂಡ ಅತಿ ದೊಡ್ಡ ರಿಸ್ಕ್ ಇದೇ ಎನ್ನುತ್ತಾರೆ ಅವರು. "ಒಂದು ವೇಳೆ ಬೆಳೆ ಹಾನಿಯಾಗಿದ್ದರೆ ಅಥವಾ ಬೆಲೆ ನೆಲೆ ಕಚ್ಚಿದ್ದರೆ ಅತಿ ದೊಡ್ಡ ನಷ್ಟಕ್ಕೆ ಸಿಲುಕಿರುತ್ತಿದ್ದೆ. ಆದರೆ ಈ ಬಾರಿ ಈರುಳ್ಳಿಯು ನನ್ನ ಹಾಗೂ ನನ್ನ ಕುಟುಂಬದ ಅದೃಷ್ಟವನ್ನೇ ಬದಲಿಸಿತು" ಎನ್ನುತ್ತಾರೆ ಮಲ್ಲಿಕಾರ್ಜುನ.
ಈ ಬಾರಿ 240 ಟನ್ ಬೆಳೆ ಬೆಳೆದಿದ್ದರು (ಹತ್ತಿರ ಹತ್ತಿರ 20 ಟ್ರಕ್ ಲೋಡ್). ಅದು ಕೂಡ ಒಂದು ಕೇಜಿ ಈರುಳ್ಳಿಯ ಬೆಲೆ 200 ರುಪಾಯಿ ಹತ್ತಿರಕ್ಕೆ ಜಿಗಿದು ಓಡುತ್ತಿದ್ದ ವೇಳೆಯಲ್ಲಿ. 5ರಿಂದ 10 ಲಕ್ಷ ರುಪಾಯಿ ಲಾಭ ಆಗಬಹುದು ಎಂಬ ಲೆಕ್ಕಾಚಾರದಲ್ಲಿ 15 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದರು ಮಲ್ಲಿಕಾರ್ಜುನ. ಆದರೆ ಅವರ ಪಾಲಿಗೆ ಜಾಕ್ ಪಾಟ್ ಹೊಡೆಯಿತು.
"ನನ್ನ ಸಾಲವನ್ನು ತೀರಿಸಿದ್ದೇನೆ. ನಾನೀಗ ಮನೆ ಖರೀದಿ ಮಾಡಬೇಕು ಅಂತಿದ್ದೀನಿ. ಮುಂಬರುವ ವರ್ಷಗಳಲ್ಲಿ ಕೃಷಿ ಚಟುವಟಿಕೆ ವಿಸ್ತರಣೆ ಮಾಡುವ ಸಲುವಾಗಿ ಇನ್ನಷ್ಟು ಭೂಮಿ ಖರೀದಿ ಮಾಡಬೇಕು ಅಂತಿದ್ದೇನೆ" ಎಂದು ಮಲ್ಲಿಕಾರ್ಜುನ ಅವರು ಹೇಳಿಕೊಂಡಿದ್ದು, ಈಗ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ.

ಮಲ್ಲಿಕಾರ್ಜುನ ಅವರಿಗೆ ಹತ್ತು ಎಕರೆ ಭೂಮಿ ಇತ್ತು. ಈರುಳ್ಳಿ ಬೆಳೆಯುವ ಸಲುವಾಗಿ ಹೆಚ್ಚುವರಿ ಹತ್ತು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದಿದ್ದಾರೆ. ಜತೆಗೆ ಐವತ್ತು ಕೂಲಿ ಕಾರ್ಮಿಕರನ್ನು ನೇಮಿಸಿದ್ದಾರೆ. "ಇಲ್ಲಿ ನೀರಿಗೆ ಕೊರತೆ ಇದೆ. ಅಂತರ್ಜಲದ ಮೇಲೆ ಅವಲಂಬನೆ ಹೆಚ್ಚು. ಆ ಕಾರಣಕ್ಕೆ ಬರದ ಪರಿಸ್ಥಿತಿ ಇರುವ ಈ ಭಾಗದ ಹಲವು ರೈತರು ಕೃಷಿಯನ್ನೇ ಕೈ ಬಿಟ್ಟಿದ್ದಾರೆ" ಎನ್ನುತ್ತಾರೆ.
ಕಳೆದ ಹದಿನೈದು ವರ್ಷಗಳಿಂದ ಮಲ್ಲಿಕಾರ್ಜುನ ಮಳೆಗಾಲದಲ್ಲಿ ಈರುಳ್ಳಿ ಬೆಳೆಯುತ್ತಿದ್ದಾರೆ. ಕಳೆದ ವರ್ಷ ಐದು ಲಕ್ಷ ರುಪಾಯಿಯಷ್ಟು ಲಾಭ ಬಂದಿತ್ತು. ಆದರೆ ಈ ಸಲ ಮಲ್ಲಿಕಾರ್ಜುನ ಸ್ಥಿತಿ ಸಲೀಸಾಗಿರಲಿಲ್ಲ. "ಅಕ್ಟೋಬರ್ ತನಕ ಈರುಳ್ಳಿ ಬೆಲೆ ಕಡಿಮೆಯೇ ಇತ್ತು. ನವೆಂಬರ್ ಮೊದಲ ವಾರದಲ್ಲಿ ಕ್ವಿಂಟಲ್ ಗೆ ಏಳು ಸಾವಿರ ಇತ್ತು. ಅದಾಗಿ ಕೆಲವೇ ದಿನಕ್ಕೆ ಕ್ವಿಂಟಲ್ ಈರುಳ್ಳಿ ಹನ್ನೆರಡು ಸಾವಿರ ತಲುಪಿತು" ಎನ್ನುತ್ತಾರೆ ಮಲ್ಲಿಕಾರ್ಜುನ.
ಕಳ್ಳರಿಂದ ಈರುಳ್ಳಿ ಫಸಲನ್ನು ರಕ್ಷಿಸಿಕೊಳ್ಳಲು ಮಲ್ಲಿಕಾರ್ಜುನ ಅವರ ಕುಟುಂಬವೇ ಕಾವಲು ಕಾದಿದೆ.


Click it and Unblock the Notifications