ಸರ್ಕಾರವಿರಬಹುದು , ಸಂಸ್ಥೆಗಳಿರಬಹುದು ಅಥವಾ ವ್ಯಕ್ತಿ , ಒಮ್ಮೆ ಒಂದು ಮಟ್ಟದ ಆದಾಯಕ್ಕೆ ಒಗ್ಗಿಕೊಂಡು ಬಿಟ್ಟರೆ ಮತ್ತೆ ಆದಾಯವನ್ನ ಕಳೆದುಕೊಳ್ಳಲು ಯಾರೂ ಒಪ್ಪುವುದಿಲ್ಲ. ರಾಜ್ಯ ಸರ್ಕಾರಗಳು ಹೆಚ್ಚಿನ ಯಾವುದೇ ಕೆಲಸವನ್ನೂ ಮಾಡದೆ ತೈಲದ ಮೇಲೆ 30 ರಿಂದ 32 ಪ್ರತಿಶತ ತೆರಿಗೆಯನ್ನ ವಿಧಿಸುತ್ತಾ ಬಂದಿವೆ. ಹೀಗಾಗಿ ಕೇಂದ್ರ ಸರಕಾರ ತೈಲವನ್ನ ಜಿಎಸ್ಟಿ ಅಡಿಯಲ್ಲಿ ತರುತ್ತೇವೆ ಎಂದ ತಕ್ಷಣ ಎಲ್ಲಾ ರಾಜ್ಯ ಸರಕಾರಗಳು ಇದಕ್ಕೆ ವಿರೋಧಿಸಿವೆ.
ನೂರು ರೂಪಾಯಿ ಪೆಟ್ರೋಲ್ ಬೆಲೆಯಲ್ಲಿ 30 ರೂಪಾಯಿ ರಾಜ್ಯದ ತೆರಿಗೆಯಿದೆ. ಜಿಎಸ್ಟಿ ಗೆ ತೈಲವನ್ನ ಸೇರಿಸಿದರೆ ರಾಜ್ಯ ಸರ್ಕಾರಗಳಿಗೆ ನೇರವಾಗಿ ಆದಾಯದಲ್ಲಿ ಕುಸಿತ ಉಂಟಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಆದಾಯವನ್ನ ಮತ್ತೆ ಹೊಂದಿಸಿಕೊಳ್ಳುವುದು ಹೇಗೆ ? ಕೇಂದ್ರ ಸರಕಾರಕ್ಕೆ ಇದು ಗೊತ್ತಿಲ್ಲದ ವಿಷಯವೇನಲ್ಲ , ಪ್ರತಿ ಬಾರಿ ತೈಲ ಬೆಲೆ ಏರಿಕೆ ವಿಷಯ ಬಂದಾಗ ಜಿಎಸ್ಟಿ ವಿಷಯವನ್ನ ತೇಲಿಸಿ , ನಾವು ಸಿದ್ದ , ರಾಜ್ಯಗಳು ಸಿದ್ದವಿಲ್ಲ ಎನ್ನುತ್ತಾರೆ. ಕೇಂದ್ರ ಸರಕಾರ ತನ್ನ ತೆರಿಗೆಯಲ್ಲಿ ಒಂದಷ್ಟು ಕಡಿತವನ್ನ ಮಾಡಿ ನಂತರ ರಾಜ್ಯಗಳಿಗೆ ಕೂಡ ಒಂದಷ್ಟು ತೆರಿಗೆ ಕಡಿಮೆ ಮಾಡುವಂತೆ ಕೇಳಬಹುದು ಅಲ್ಲವೇ ? ಹಾವು ಸಾಯಬಾರದು , ಕೋಲು ಮುರಿಯಬಾರದು ಎನ್ನುವ ನೀತಿಯಿಂದ ಜನತೆ ಕೆಂಗಟ್ಟಿದ್ದಾರೆ.

ಇಲ್ಲಿಯವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಕಡಿಮೆಯಿತ್ತು . ಈಗ ಅದು ಹೆಚ್ಚಾಗತೊಡಗಿದೆ , ಹೀಗಾಗಿ ಇದು ಜನ ಸಾಮಾನ್ಯನ ಜೇಬನ್ನ ಸುಡಲು ಶುರು ಮಾಡಿದೆ. ಯಾವಾಗ ಅದು ಜನ ಸಾಮಾನ್ಯನನ್ನ ಸುಡಲು ಶುರು ಮಾಡುತ್ತದೆ, ಆಗ ನೋಡಿ ಎಲ್ಲಾ ಬೆಲೆಗಳ ಬ್ರೇಕ್ ಅಪ್ ಏನು ಎನ್ನುವುದನ್ನ ನೋಡಲು ಶುರು ಮಾಡುತ್ತಾರೆ. ಭಾರತ ಜಗತ್ತಿನಲ್ಲಿ ತೈಲದ ಮೇಲೆ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ರಾಷ್ಟ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ನಾವು ನೀಡುವ ಹಣದ 60 ಪ್ರತಿಶತ ತೆರಿಗೆ ಎಂದರೆ ನಿಜಕ್ಕೂ ಇದು ವಿಷಾದನೀಯ.
ಕೇಂದ್ರ ಸರಕಾರ ಸಬ್ಸಿಡಿ ಜಾರಿ ಮಾಡಿ ತೈಲ ಬೆಲೆ ಕಡಿಮೆ ಮಾಡಿ , ಜೊತೆಗೆ ಇತರ ವಸ್ತುಗಳ ಬೆಲೆಯನ್ನು ಕೂಡ ನಿಯಂತ್ರಣದಲ್ಲಿರಿಸಬಹುದು. ರಾಜ್ಯ ಸರಕಾರಗಳು ಜಿಎಸ್ಟಿಗೆ ಒಪ್ಪಲು ಸಾಧ್ಯವಿಲ್ಲ . ಕೇಂದ್ರ ಸರಕಾರಕ್ಕೆ ಸದ್ಯದ ಮಟ್ಟಿಗೆ ಸಬ್ಸಿಡಿ ನೀಡುವುದು ಉಳಿದಿರುವ ಮಾರ್ಗ. ಕೇಂದ್ರ ಸರ್ಕಾರ ಯಾವಾಗ ಸಬ್ಸಿಡಿಗೆ ಅಸ್ತು ಎನ್ನುತ್ತದೆ ಎನ್ನುವುದನ್ನ ಕಾಯ್ದು ನೋಡಬೇಕು.


Click it and Unblock the Notifications