10 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ 20 ಸಾವಿರ ಕೋಟಿಗೂ ಅಧಿಕ ಹಣ ವರ್ಗಾವಣೆ
ತಳಮಟ್ಟದ ರೈತರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬದ್ಧತೆ ಹಾಗೂ ಸಂಕಲ್ಪವನ್ನು ಮುಂದುವರಿಸುವ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿ ಆರ್ಥಿಕ ನೆರವಿನ 10ನೇ ಕಂತನ್ನು ಬಿಡುಗಡೆ ಮಾಡಿದರು. ಇದರಿಂದಾಗಿ 10 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ.
ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು, ಸುಮಾರು 351 ರೈತ ಉತ್ಪನ್ನ ಸಂಸ್ಥೆಗಳು(ಎಫ್ ಪಿಒ)ಗಳಿಗೆ 14 ಕೋಟಿ ರೂ.ಗಳಿಗೂ ಅಧಿಕ ಈಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದರು. ಇದರಿಂದ 1.24 ಲಕ್ಷಕ್ಕೂ ಅಧಿಕ ರೈತರಿಗೆ ಪ್ರಯೋಜನವಾಗಲಿದೆ.
ಉತ್ತರಾಖಂಡದ ಎಫ್ ಪಿಒದ ಜತೆ ಸಂವಾದ ನಡೆಸಿದ ಪ್ರಧಾನಮಂತ್ರಿ, ರೈತರು ಸಾವಯವ ಕೃಷಿ ಆಯ್ಕೆ ಮಾಡಿಕೊಂಡಿರುವ ಕುರಿತು ವಿಚಾರಿಸಿದರು ಮತ್ತು ಸಾವಯವ ಉತ್ಪನ್ನಗಳ ಪ್ರಮಾಣೀಕರಣ ವಿಧಾನಗಳ ಕುರಿತು ಆಲಿಸಿದರು. ಅಲ್ಲದೆ ಅವರು ಎಫ್ಪಿಒಗಳ ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ಮಾತನಾಡಿದರು. ಎಫ್ಪಿಒ ತಾವು ಹೇಗೆ ರಾಸಾಯನಿಕ ಗೊಬ್ಬರಗಳನ್ನು ಹೊಂದಿಸಿಕೊಳ್ಳುತ್ತೇವೆ ಎಂಬ ಕುರಿತು ಪ್ರಧಾನಿ ಅವರಿಗೆ ವಿವರಿಸಿತು. ಪ್ರಧಾನ ಮಂತ್ರಿ ಅವರು, ಸರ್ಕಾರ ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲು ಪ್ರಯತ್ನಗಳನ್ನು ನಡೆಸುತ್ತಿದೆ. ಏಕೆಂದರೆ ಇದು ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ತಗ್ಗಿಸುವುದರ ಜತೆಗೆ ರೈತರ ಆದಾಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು.
ಕೃಷಿ ತ್ಯಾಜ್ಯವನ್ನು ಸುಡದೆ ಹೇಗೆ ತಾವು ವಿಲೇವಾರಿ ಮಾಡುತ್ತಿದ್ದೇವೆ ಎಂಬ ವಿಧಾನಗಳ ಕುರಿತು ಪಂಜಾಬ್ನ ಎಫ್ ಪಿ ಒ ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ನೀಡಿದರು. ಅಲ್ಲದೆ ಅವರು, ಸೂಪರ್ ಸೀಡರ್ ಮತ್ತು ಸರ್ಕಾರಿ ಸಂಸ್ಥೆಗಳ ಸಹಾಯದ ಕುರಿತು ಮಾತನಾಡಿದರು. ಪ್ರಧಾನಮಂತ್ರಿ ಅವರು, ಕೃಷಿ ತ್ಯಾಜ್ಯ ನಿರ್ವಹಣೆಯ ಅವರ ಅನುಭವ ಎಲ್ಲೆಡೆ ಹರಡಲಿ ಎಂದು ಪ್ರಧಾನಮಂತ್ರಿ ಆಶಿಸಿದರು.
ಭಾರತದ ಆರ್ಥಿಕತೆ ಉತ್ತಮವಾಗಿದೆ
ದೇಶದ ಆರ್ಥಿಕತೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಹಲವು ಮಾನದಂಡಗಳಲ್ಲಿ ಭಾರತದ ಆರ್ಥಿಕತೆ ಕೋವಿಡ್ಗೆ ಮುನ್ನಾ ದಿನಗಳಲ್ಲಿ ಇದ್ದ ಸ್ಥಿತಿಗಿಂತಲೂ ಉತ್ತಮವಾಗಿದೆ ಎಂದರು. "ಇಂದು ನಮ್ಮ ಆರ್ಥಿಕತೆಯ ಪ್ರಗತಿ ದರ ಶೇ.8ಕ್ಕಿಂತಲೂ ಹೆಚ್ಚಾಗಿದೆ. ದಾಖಲೆಯ ವಿದೇಶಿ ಬಂಡವಾಳ ಭಾರತಕ್ಕೆ ಹರಿದುಬಂದಿದೆ. ನಮ್ಮ ಫಾರೆಕ್ಸ್ ರಿಸರ್ವ್ ದಾಖಲೆಯ ಮಟ್ಟ ತಲುಪಿದೆ. ಜಿಎಸ್ ಟಿ ಸಂಗ್ರಹದಲ್ಲಿ ಹಿಂದಿನ ದಾಖಲೆಗಳನ್ನೆಲ್ಲಾ ಅಳಿಸಿ ಹಾಕಲಾಗಿದೆ. ರಫ್ತು ವಿಚಾರದಲ್ಲಿ ವಿಶೇಷವಾಗಿ ಕೃಷಿಯಲ್ಲಿ ನಾವು ಹೊಸ ದಾಖಲೆಗಳನ್ನು ನಿರ್ಮಿಸಿದ್ದೇವೆ" ಎಂದು ಹೇಳಿದರು. ಯುಪಿಐ ಮೂಲಕ 2021ರಲ್ಲಿ 70 ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆಸಲಾಗಿದೆ. 50 ಸಾವಿರಕ್ಕೂ ಅಧಿಕ ನವೋದ್ಯಮಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ 10 ಸಾವಿರ ನವೋದ್ಯಮಗಳು ಕಳೆದ ಆರು ತಿಂಗಳಲ್ಲಿ ಆರಂಭವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಪಿಎಂ ಕಿಸಾನ್ ನಿಧಿ ಭಾರತೀಯ ರೈತರಿಗೆ ದೊಡ್ಡ ಬೆಂಬಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ವರ್ಗಾವಣೆ ಮಾಡಲಾದ ಹಣವನ್ನೂ ಸೇರಿಸಿದರೆ ದೇಶಾದ್ಯಂತ ರೈತರಿಗೆ ಈವರೆಗೆ 1.80 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಎಫ್ಪಿಒಗಳ ಮೂಲಕ ಸಣ್ಣ ರೈತರಿಗೆ ಸಾಮೂಹಿಕ ಸಂಘಟನಾ ಶಕ್ತಿಯ ಅನುಭವವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಣ್ಣ ರೈತರಿಗೆ ಎಫ್ಪಿಒಗಳ ಮೂಲಕ ಐದು ಬಗೆಯ ಅನಕೂಲಗಳಾಗುತ್ತಿವೆ ಎಂದು ಅವರು ಹೇಳಿದರು. ಆ ಅನುಕೂಲಗಳೆಂದರೆ ಖರೀದಿ ಶಕ್ತಿ ಹೆಚ್ಚಳ, ವ್ಯಾಪ್ತಿ ಹೆಚ್ಚಳ, ಆವಿಷ್ಕಾರ, ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವುದು. ಎಫ್ ಪಿಒಗಳ ಅನುಕೂಲಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಪ್ರತಿಯೊಂದು ಹಂತದಲ್ಲೂ ಅವುಗಳನ್ನು ಉತ್ತೇಜಿಸುತ್ತಿದೆ. ಈ ಎಫ್ ಪಿಒಗಳಿಗೆ 15 ಲಕ್ಷ ರೂ.ಗಳ ವರೆಗೆ ನೆರವು ಸಿಗುತ್ತಿದೆ. ಅದರ ಪರಿಣಾಮವಾಗಿ ಸಾವಯವ ಎಫ್ ಪಿಒಗಳು, ತೈಲಬೀಜ ಎಫ್ಪಿಒಗಳು, ಬಿದಿರು ಕ್ಲಸ್ಟರ್ ಮತ್ತು ಜೇನು ಸಾಕಾಣಿಕೆ ಎಫ್ಪಿಒಗಳು ದೇಶಾದ್ಯಂತ ಆರಂಭವಾಗಿವೆ. "ಇಂದು ನಮ್ಮ ರೈತರು 'ಒಂದು ಜಿಲ್ಲೆ ಒಂದು ಉತ್ಪನ್ನ' ಮೊದಲಾದ ಯೋಜನೆಗಳ ಮೂಲಕ ಲಾಭ ಪಡೆಯುತ್ತಿದ್ದಾರೆ ಮತ್ತು ಜಾಗತಿಕ ಹಾಗೂ ರಾಷ್ಟ್ರೀಯ ಮಾರುಕಟ್ಟೆಗಳು ಅವರಿಗೆ ತೆರೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 11 ಸಾವಿರ ಕೋಟಿ ರೂ. ಮೊತ್ತದ ರಾಷ್ಟ್ರೀಯ ತಾಳೆಎಣ್ಣೆ ಮಿಷನ್ ನಂತಹ ಯೋಜನೆಗಳು ಆಮದನ್ನು ತಗ್ಗಿಸಿ, ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅವರು, ಕೃಷಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಹಲವು ಮೈಲುಗಲ್ಲುಗಳ ಕುರಿತು ಮಾತನಾಡಿದರು. ಆಹಾರ ಧಾನ್ಯಗಳ ಉತ್ಪಾದನೆ 300 ಮಿಲಿಯನ್ ಟನ್ ತಲುಪಿದೆ ಅಂತೆಯೇ ತೋಟಗಾರಿಕಾ ಮತ್ತು ಪುಷ್ಪೋದ್ಯಮ ಉತ್ಪಾದನೆ 330 ಮಿಲಿಯನ್ ಟನ್ ತಲುಪಿದೆ. ಹೈನು ಉತ್ಪಾದನೆ ಕಳೆದ 6.7 ತಿಂಗಳಿಗಿಂತ ಶೇ.45ರಷ್ಟು ಹೆಚ್ಚಳವಾಗಿದೆ. ಸುಮಾರು 60 ಲಕ್ಷ ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಂದು ಲಕ್ಷ ಕೋಟಿಗೂ ಅಧಿಕ ಪರಿಹಾರ ವಿತರಿಸಲಾಗಿದೆ. ಆದರೆ ಪ್ರೀಮಿಯಂ ಮೊತ್ತ ಸ್ವೀಕರಿಸಿರುವುದು ಕೇವಲ 21 ಸಾವಿರ ಕೋಟಿ ರೂ. ಎಥೆನಾಲ್ ಉತ್ಪಾದನೆ ಕೇವಲ 7 ವರ್ಷಗಳಲ್ಲಿ 40 ಕೋಟಿ ಲೀಟರ್ ನಿಂದ 340 ಕೋಟಿ ಲೀಟರ್ ಗೆ ಹೆಚ್ಚಳವಾಗಿದೆ. ಗೋಬರ್ಧನ್ ಯೋಜನೆಯಡಿ ಜೈವಿಕ ಅನಿಲ ಉತ್ತೇಜಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಗಣಿಗೆ ಮೌಲ್ಯ ಇದೆ ಎಂದಾದರೆ ಹಾಲು ನೀಡದಂತಹ ಜಾನುವಾರುಗಳೂ ಕೂಡ ರೈತರಿಗೆ ಹೊರೆಯಾಗುವುದಿಲ್ಲ ಎಂದರು. ಸರ್ಕಾರ, ಕಾಮಧೇನು ಕಮಿಷನ್ ಸ್ಥಾಪಿಸಿದೆ ಮತ್ತು ಹೈನು ವಲಯದ ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.