ಲಕ್ನೋ: ಕೊರೊನಾವೈರಸ್ ಲಾಕ್ಡೌನ್ ಪರಿಣಾಮ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಗ್ರಾಮೀಣ ಪ್ರದೇಶಗಳನ್ನು ತಲುಪಿದ್ದಾರೆ. ಇವರಿಗೆ ಉದ್ಯೋಗ ಒದಗಿಸುವುದು ಸರ್ಕಾರಗಳಿಗೆ ದೊಡ್ಡ ತಲೆನೋವಾಗಿದೆ.
ಆದರೆ, ಉತ್ತರ ಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಲಾಕ್ಡೌನ್ನಿಂದಾಗಿ ನಿರುದ್ಯೋಗಿಗಳಾಗಿರುವ ವಲಸಿಗರು ಮತ್ತು ಗ್ರಾಮೀಣ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಮತ್ತು ಜೀವನೋಪಾಯವನ್ನು ಒದಗಿಸುವ ಪ್ರಯತ್ನದಲ್ಲಿ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಶುಕ್ರವಾರ 1 ಕೋಟಿ ಜನರಿಗೆ ಉದ್ಯೋಗದ ಭರವಸೆ ನೀಡಿದೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಆದಿತ್ಯನಾಥ್ ಅವರ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜಗಾರ್ ಅಭಿಯಾನ'ಕ್ಕೆ ಚಾಲನೆ ನೀಡಿದ್ದಾರೆ.
ಸತತ 125 ದಿನ ಉದ್ಯೋಗ ಒದಗಿಸುವ ಯೋಜನೆ
ಒಂದೇ ಬಾರಿಗೆ ಒಂದು ಕೋಟಿ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರ ಪ್ರದೇಶ ಸರ್ಕಾರ ಪಾತ್ರವಾಗಿದೆ. ಅಲ್ಲದೇ ಇದೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಇದು ಸತತ 125 ದಿನ ಉದ್ಯೋಗ ಒದಗಿಸುವ ಒಂದು ಮಹತ್ವಾಕಾಂಕ್ಷೆ ಅಭಿಯಾನವಾಗಿದೆ. ಲಾಕ್ಡೌನ್ ನಂತರ 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಆಗಮಿಸಿದ್ದಾರೆ.
ನರೇಗಾ ಅಡಿ 50 ಪ್ರತಿ ಶತದಷ್ಟು ಉದ್ಯೋಗ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಅಡಿಯಲ್ಲಿ ಘೋಷಣೆ ಮಾಡಿರುವ 1 ಕೋಟಿ ಉದ್ಯೋಗದಲ್ಲಿ ಸುಮಾರು 50 ಪ್ರತಿ ಶತದಷ್ಟು ಉದ್ಯೋಗಗಳನ್ನು ಒದಗಿಸಲಾಗುತ್ತದೆ.
ಕಾರ್ಮಿಕರ ಕೌಶಲ್ಯಕ್ಕನುಗುಣವಾಗಿ ಕೆಲಸ
ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜಗಾರ್ ಅಭಿಯಾನ್ ಉದ್ಯೋಗಗಳನ್ನು ಒದಗಿಸುವುದು, ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಕೈಗಾರಿಕಾ ಸಂಘಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಸೃಷ್ಟಿಸುವತ್ತ ತೀವ್ರವಾಗಿ ಕೇಂದ್ರೀಕರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿವಿಧ ರಾಜ್ಯಗಳಿಂದ ಹಿಂದಿರುಗಿರುವ ಕಾರ್ಮಿಕರ ಕೌಶಲ್ಯವನ್ನು ಗುರುತಿಸುವಂತೆ ಉತ್ತರ ಪ್ರದೇಶ ಸಿಎಂ ರಾಜ್ಯ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಕಾರ್ಮಿಕರ ಪರಿಣತಿಯ ಪ್ರಕಾರ ಉದ್ಯೋಗ ಒದಗಿಸಲಾಗುತ್ತದೆ.
1.25 ಲಕ್ಷ ಕಾರ್ಮಿಕರಿಗೆ ನೇಮಕಾತಿ ಪತ್ರ
ಶುಕ್ರವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಆರು ಜಿಲ್ಲೆಗಳ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಖಾಸಗಿ ಕಂಪೆನಿಗಳು 1.25 ಲಕ್ಷ ಕಾರ್ಮಿಕರಿಗೆ ಉದ್ಯೋಗದ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. 2.40 ಲಕ್ಷ ಕೈಗಾರಿಕಾ ಘಟಕಗಳಿಗೆ 5,900 ಕೋಟಿ ರೂ. ಮತ್ತು 1.11 ಲಕ್ಷ ಹೊಸ ಕೈಗಾರಿಕಾ ಘಟಕಗಳಿಗೆ 3,226 ಕೋಟಿ ರೂ ಬಿಡುಗಡೆ ಮಾಡಲಾಯಿತು.


Click it and Unblock the Notifications