ಎಪಿಎಂಸಿ ಕಾಯ್ದೆ ತಿದ್ದುಪಡಿ ನಂತರ ಮೊದಲ ಬಾರಿಗೆ ಕರ್ನಾಟಕದಲ್ಲಿ ದೊಡ್ಡ ವಹಿವಾಟು
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಇದೇ ಮೊದಲ ಬಾರಿಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆ ಹಾಗೂ ರೈತರ ಮಧ್ಯೆ ಅತಿ ದೊಡ್ಡ ವಹಿವಾಟು ನಡೆಯುತ್ತಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ನಿಂದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ರೈತರಿಂದ 1000 ಕ್ವಿಂಟಲ್ ಸೋನಾ ಮಸೂರಿ ಭತ್ತವನ್ನು ಖರೀದಿ ಮಾಡಲಾಗುತ್ತಿದೆ.
ಹದಿನೈದು ದಿನಗಳ ಹಿಂದೆ ರಿಲಯನ್ಸ್ ಜತೆ ನೋಂದಣಿ ಮಾಡಿರುವ ಏಜೆಂಟರು ಸ್ವಾಸ್ಥ್ಯ ಫಾರ್ಮರ್ಸ್ ಪ್ರೊಡ್ಯೂಸಿಂಗ್ ಕಂಪೆನಿ (SFPC) ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಂದ ಹಾಗೆ ಎಸ್ ಎಫ್ ಪಿಸಿ ಮೂಲಭೂತವಾಗಿ ತೈಲದ ವ್ಯವಹಾರ ನಡೆಸುತ್ತದೆ. ಅದೀಗ ಭತ್ತದ ಸಂಗ್ರಹ ಮತ್ತು ಮಾರಾಟದಲ್ಲಿ ತೊಡಗಿದೆ.
ಹತ್ತಿರ ಹತ್ತಿರ ಸಾವಿರದ ನೂರು ಭತ್ತದ ಬೆಳೆಗಾರರು ಅದರ ಬಳಿ ನೋಂದಣಿ ಮಾಡಿದ್ದಾರೆ. ಬೆಳೆಯಲ್ಲಿ 16%ಗಿಂತ ಕಡಿಮೆ ತೇವಾಂಶ ಇರಬೇಕು ಎಂದು ರಿಲಯನ್ಸ್ ರೀಟೇಲ್ ಹೇಳಿತ್ತು. ಇನ್ನು ಕಂಪೆನಿಯಿಂದ ಒಂದು ಕ್ಬಿಂಟಲ್ ಸೋನಾ ಮಸೂರಿಗೆ ರು. 1950 ನಿಗದಿ ಮಾಡಲಾಗಿತ್ತು. ಈ ಮೊತ್ತವು ಸರಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆ ರು. 1868ಕ್ಕಿಂತ 82 ರುಪಾಯಿ ಹೆಚ್ಚು.
ಕರ್ನಾಟಕದಲ್ಲಿ 24X7X365 ಮಳಿಗೆ, ವಾಣಿಜ್ಯ ಸಂಸ್ಥೆ ತೆರೆಯಲು ಒಪ್ಪಿಗೆ; ಷರತ್ತುಗಳು ಅನ್ವಯ
ಎಸ್ ಎಫ್ ಪಿಸಿ ಹಾಗೂ ರೈತರ ಸಂಸ್ಥೆಗಳ ಜತೆ ಒಪ್ಪಂದವಾಗಿದೆ. ಆ ಪ್ರಕಾರ ರೈತರು ಪ್ರತಿ 100 ರುಪಾಯಿಗೆ 1.5 ರು. ಕಮಿಷನ್ ನೀಡಬೇಕು. ಇನ್ನು ಬೆಳೆಯ ಪ್ಯಾಕ್ ಗೆ ಮತ್ತು ಅದನ್ನು ಸಿಂಧನೂರಿಗೆ ಸಾಗಿಸಲು ಆಗುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಮಾತಾಗಿದೆ.
ಎಸ್ ಎಫ್ ಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ್ ವಲ್ಕಲ್ ದಿನ್ನಿ ಮಾತನಾಡಿ, ಗೋದಾಮಿನಲ್ಲಿ ಸಂಗ್ರಹವಾಗಿರುವ ಭತ್ತದ ಗುಣಮಟ್ಟವನ್ನು ಮೂರನೇ ವ್ಯಕ್ತಿಗಳು ಪರೀಕ್ಷಿಸುತ್ತಾರೆ. ಒಂದು ಸಲ ಗುಣಮಟ್ಟವು ಸಮಾಧಾನಕರವಾಗಿದ್ದಲ್ಲಿ ರಿಲಯನ್ಸ್ ಏಜೆಂಟರು ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಸದ್ಯಕ್ಕೆ ಐನೂರು ಕ್ವಿಂಟಲ್ ಭತ್ತ ಗೋದಾಮಿನಲ್ಲಿ ಸಂಗ್ರಹವಾಗಿದೆ. ಯಾವುದೇ ಸಮಯದಲ್ಲಿ ಖರೀದಿ ಆಗಬಹುದು. ಒಂದು ಸಲ ಬೆಳೆ ಸಂಗ್ರಹ ಪಡೆದ ಮೇಲೆ ರಿಲಯನ್ಸ್ ನಿಂದ ಎಸ್ ಎಫ್ ಪಿಸಿಗೆ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಆ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಹಂತದಲ್ಲಿ ಬೆಳೆಯಲ್ಲಿ ಬದಲಾವಣೆ ಮಾಡಬಾರದು ಎಂಬ ಕಾರಣಕ್ಕೆ ಭತ್ತ ಸಾಗಿಸುವ ವಾಹನಕ್ಕೆ ಜಿಪಿಎಸ್ ಬಳಸಲಾಗುವುದು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಪೊರೇಟ್ ಕಂಪೆನಿಗಳು ಮೊದಮೊದಲಿಗೆ ಸರಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಮೊತ್ತ ನೀಡಿ, ಎಪಿಎಂಸಿ ಮಂಡಿಗೆ ಹೊಡೆತ ನೀಡುತ್ತದೆ. ಆ ನಂತರ ರೈತರ ಶೋಷಣೆ ಮಾಡುತ್ತವೆ. ಈ ತಂತ್ರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದೆ.