ವಂಚನೆ ಪ್ರಕರಣದಲ್ಲಿ ಕಿರ್ಲೋಸ್ಕರ್ ಸೋದರರಿಗೆ ದಂಡ ವಿಧಿಸಿದ ಸೆಬಿ
ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (KBL) ಷೇರು ವ್ಯವಹಾರದಲ್ಲಿ 2010ರಲ್ಲಿ ನಡೆದ ವಂಚನೆ ಕಾರ್ಯಕ್ಕೆ ಸಂಬಂಧಿಸಿದಂತೆ ಮೂವರು ಕಿರ್ಲೋಸ್ಕರ್ ಸೋದರರಿಗೆ ಬುಧವಾರ ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ದಂಡ ವಿಧಿಸಿ ಮೂರು ಆದೇಶ ಹೊರಡಿಸಿದೆ.
ಇನ್ನು ಲಿಸ್ಟಿಂಗ್ ನಿಯಮಾವಳಿಗೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಕಿರ್ಲೋಸ್ಕರ್ ಇಂಡಸ್ಟ್ರೀಸ್ ಲಿಮಿಟೆಡ್ (ಕೆಐಎಲ್) ವಿರುದ್ಧ ಆರೋಪ ಮಾಡಲಾಗಿದೆ. ಕೆಐಎಲ್ ನಿಯಂತ್ರಣವು ಕಿರಿಯ ಸೋದರರಾದ ಅತುಲ್ ಹಾಗೂ ರಾಹುಲ್ ಕಿರ್ಲೋಸ್ಕರ್ ಬಳಿ ಇದೆ. ಇನ್ನು ಕಿರ್ಲೋಸ್ಕರ್ ಬ್ರದರ್ಸ್ ಬಹುಪಾಲು ಹೊಂದಿರುವುದು ಸಂಜಯ್ ಕಿರ್ಲೋಸ್ಕರ್.
ಟ್ರೇಡಿಂಗ್ ವ್ಯವಹಾರ ಸೆ. 1ರಿಂದಲೇ ಬದಲು; ಸೆಬಿಯಿಂದ ಹೊಸ ನಿಯಮಾವಳಿ
ಕೆಐಎಲ್ ಗೆ 5 ಲಕ್ಷ ರುಪಾಯಿ ದಂಡ, ಅತುಲ್ ಹಾಗೂ ರಾಹುಲ್ ಸೇರಿ ಇತರ ಆರು ಮಂದಿಯ ವಾಮಮಾರ್ಗದ ಗಳಿಕೆಗೆ 16.6 ಕೋಟಿ ರುಪಾಯಿ, ಇದರ ಜತೆಗೆ 14.6 ಕೋಟಿ ರುಪಾಯಿ ದಂಡ, ಸಂಜಯ್ ಕಿರ್ಲೋಸ್ಕರ್ ಮತ್ತು ಅವರ ಪತ್ನಿ ವಾಮಮಾರ್ಗದ ಗಳಿಕೆ ಮತ್ತು ದಂಡ 42.7 ಲಕ್ಷ ರುಪಾಯಿ ಇದೆ.
ಏನಿದು ಪ್ರಕರಣ?
ಈ ವಿಚಾರ ದಶಕಗಳಷ್ಟು ಹಳೆಯದು. ಪ್ರವರ್ತಕರ ಗುಂಪು ಕೆಬಿಎಲ್ ನ 13.5% ಪಾಲನ್ನು ಕೆಐಎಲ್ ಗೆ ಮಾರಾಟಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಅಲ್ಪ ಪ್ರಮಾಣದ ಷೇರು ಹೊಂದಿದ ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗಿದೆ. ಕೆಬಿಎಲ್ ಪ್ರವರ್ತಕರ ಗುಂಪು ಅಕ್ಟೋಬರ್ 6, 2010ರಲ್ಲಿ 275 ಕೋಟಿ ರುಪಾಯಿ ಮೌಲ್ಯದ 10.72 ಮಿಲಿಯನ್ ಕೆಬಿಎಲ್ ಷೇರುಗಳನ್ನು ಕಿರ್ಲೋಸ್ಕರ್ ಇಂಡಸ್ಟ್ರೀಸ್ ಗೆ ಮಾರಾಟ ಮಾಡಿತ್ತು.
2010ರ ಸೆಪ್ಟೆಂಬರ್ ನಲ್ಲಿ ಕೆಬಿಎಲ್ ಆರ್ಥಿಕ ಸ್ಥಿತಿ ಎಲ್ಲ ರೀತಿಯಲ್ಲಿ ಹಳ್ಳ ಹಿಡಿದಿತ್ತು. ಪ್ರವರ್ತಕರಾದ ಗೌತಮ್ ಕುಲಕರ್ಣಿ, ರಾಹುಲ್ ಕಿರ್ಲೋಸ್ಕರ್, ಅತುಲ್ ಕಿರ್ಲೋಸ್ಕರ್, ಅಲ್ಪನ ಕಿರ್ಲೋಸ್ಕರ್, ಜ್ಯೋತ್ಸ್ನಾ ಕುಲಕರ್ಣಿ ಮತ್ತು ಆರತಿ ಕಿರ್ಲೋಸ್ಕರ್ ಇವರೆಲ್ಲ ಈ ಮಾರಾಟದಲ್ಲಿ ನೇರ ಫಲಾನುಭವಿಗಳು ಎಂದು ಸೆಬಿ ಹೇಳಿದೆ.
ಕೆಐಎಲ್ ಹಿತ ಕಾಪಾಡುವಂತೆ ನಡೆದುಕೊಳ್ಳುವುದಕ್ಕೆ ಅದರ ನಿರ್ದೇಶಕರು ವಿಫಲರಾಗಿದ್ದಾರೆ. ಅವರ ಜವಾಬ್ದಾರಿಯನ್ನು ನಿರ್ವಹಿಸದ ಕಾರಣಕ್ಕೆ ವಂಚನೆ ಆಗಿದೆ ಎಂದು ಸೆಬಿ ತನ್ನ ಆದೇಶದಲ್ಲಿ ಹೇಳಿದೆ. ಕೆಐಎಲ್ ಗೆ ಹಾಗೂ ಕೆಐಎಲ್ ಅಲ್ಪ ಪ್ರಮಾಣದಲ್ಲಿ ಇರುವ ಷೇರುದಾರರಿಗೆ ಅನನುಕೂಲ ಆಗುವ ಸನ್ನಿವೇಶ ಇರುವಾಗ ಕೆಬಿಎಲ್ ಷೇರುಗಳನ್ನು ಖರೀದಿಸುವಂತೆ ಕಂಪೆನಿಯ ನಿರ್ದೇಶಕರು ಪ್ರೇರೇಪಣೆ ನೀಡಿದ್ದಾರೆ ಎಂದಿದೆ.
ನಿರ್ದೇಶಕರು ಹಾಗೂ ಪ್ರವರ್ತಕರು ಕೆಐಎಲ್ ನ ಅಲ್ಪ ಪ್ರಮಾಣದ ಷೇರುದಾರರ ಜತೆ ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ. ಆ ಮೂಲಕ ತಮ್ಮ ಪಾಲಿನ ಜವಾಬ್ದಾರಿಯನ್ನು ಮೀರಿ, ವಂಚಿಸುವ ರೀತಿ ನಡೆದುಕೊಂಡಿದ್ದಾರೆ ಎಂದು ಸೆಬಿ ಹೇಳಿದೆ.
ಒಳ ವ್ಯವಹಾರದ ಆರೋಪ
ಇನ್ನು ಸಂಜಯ್ ಕಿರ್ಲೋಸ್ಕರ್ ಮತ್ತು ಅವರ ಪತ್ನಿ ವಿರುದ್ಧ "ಒಳ ವ್ಯವಹಾರ" (ಇನ್ ಸೈಡರ್ ಟ್ರೇಡಿಂಗ್) ಆರೋಪ ಮಾಡಲಾಗಿದೆ.
ಕೆಬಿಎಲ್ ಷೇರುಗಳನ್ನು ಅಕ್ಟೋಬರ್ 10, 2010ರಲ್ಲಿ ಮಾರಲಾಗಿದೆ. ಅದಕ್ಕೂ ಮುಂಚೆ, ಅಂಗಸಂಸ್ಥೆಯಾದ ಕಿರ್ಲೋಸ್ಕರ್ ಕನ್ ಸ್ಟ್ರಕ್ಷನ್ ಅಂಡ್ ಎಂಜಿನಿಯರಿಂಗ್ ಲಿಮಿಟೆಡ್ ಗೆ ಕೆಬಿಎಲ್ ನೀಡಿದ್ದ 67.47 ಕೋಟಿ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ಅದನ್ನು ಹೂಡಿಕೆ/ಮುಂಗಡದ ಬಂಡವಾಳ ನಷ್ಟ ಎಂದು ತೋರಿಸಲಾಗಿದೆ. ಇನ್ನು ಈ ಮಾಹಿತಿಯನ್ನು 2011ರ ಏಪ್ರಿಲ್ ನಲ್ಲಿ ಬಹಿರಂಗ ಮಾಡಲಾಗಿದೆ.
ಷೇರುಗಳನ್ನು ಪ್ರಕರ್ ಇನ್ವೆಸ್ಟ್ ಮೆಂಟ್ಸ್ ಪೈವೇಟ್ ಲಿಮಿಟೆಡ್ ಗೆ ಮಾರಾಟ ಮಾಡಲಾಗಿದೆ. ಆ ಕಂಪೆನಿಯಲ್ಲಿ ಸಂಜಯ್ ಕಿರ್ಲೋಸ್ಕರ್ ಹಾಗೂ ಅವರ ಹೆಂಡತಿ ಪ್ರತಿಮಾ ಮಾಲೀಕರು. ಹಾಗೂ ಜತೆಗೆ ಸಂಜಯ್ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು.
ಇನ್ನು ಈಗಿನ ಬೆಳವಣಿಗೆ ಬಗ್ಗೆ ಕೆಐಎಲ್ ಹಾಗೂ ಕೆಬಿಎಲ್ ವಕ್ತಾರರು ಯಾವುದೇ ಪ್ರತಿಕ್ರಿಯೆಯನ್ನು ತಕ್ಷಣ ನೀಡಿಲ್ಲ. ಇತ್ತ ಮೂವರು ಸೋದರರ ಮಧ್ಯೆ 2018ರಿಂದ ಕಾನೂನು ಸಮರ ನಡೆಯುತ್ತಿದೆ. ಅತುಲ್ ಹಾಗೂ ರಾಹುಲ್ ಕಂಪೆನಿ ಅರ್ಜಿ ಹಾಕಿದ್ದಾರೆ. ಕೆಬಿಎಲ್ ನಲ್ಲಿ ತಮ್ಮ ಪಾಲು ಹೆಚ್ಚಿಸಲು ಅವಕಾಶ ನೀಡಿಲ್ಲ. ಅಲ್ಲಿ ಅಸಮರ್ಪಕ ನಿರ್ವಹಣೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ.