ಟಿಸಿಎಸ್ ಕಚೇರಿಗಳಿಂದಲೇ 1%ನಷ್ಟು ಸಿಬ್ಬಂದಿ ಈಗಲೂ ಕಾರ್ಯ ನಿರ್ವಹಣೆ
ಭಾರತದ ಸಾಫ್ಟ್ ವೇರ್ ಉದ್ಯದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ಏಪ್ರಿಲ್- ಜೂನ್, 2020ರ ಮೊದಲ ತ್ರೈ ಮಾಸಿಕದಲ್ಲಿ ಕಡಿಮೆ ಲಾಭವನ್ನು ಘೋಷಣೆ ಮಾಡಿದೆ. ಇದು ನಿರೀಕ್ಷೆಗಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಕೊರೊನಾದ ಕಾರಣಕ್ಕೆ ಕಂಪೆನಿಯ ಗ್ರಾಹಕರು ಐ.ಟಿ. ಸೇವೆಗಳ ಮೇಲೆ ಮಾಡುವ ಖರ್ಚು ಕಡಿಮೆ ಆಗಿರುವುದು ಪರಿಣಾಮ ಬೀರಿದೆ.
ಆದರೆ, ಟಿಸಿಎಸ್ ಸಿಬ್ಬಂದಿಯ ಅಭಿಪ್ರಾಯಗಳು ಪ್ರೋತ್ಸಾಹದಾಯಕ ಆಗಿವೆ. ಜೂನ್ 30ಕ್ಕೆ ಕೊನೆಯಾದ ಮೊದಲ ತ್ರೈಮಾಸಿಕಕ್ಕೆ ಕಂಪೆನಿಯ ಲಾಭ 13.8 ಪರ್ಸೆಂಟ್ ಕುಸಿದು, 7008 ಕೋಟಿ ರುಪಾಯಿಗೆ ಬಂದಿದೆ. ಇನ್ನು ಕಂಪೆನಿ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿ 38,322 ಕೋಟಿ ರುಪಾಯಿ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 38,172 ಕೋಟಿ ರುಪಾಯಿ ಆದಾಯ ಇತ್ತು.
ಟಿಸಿಎಸ್ ಸಿಇಒ ವೇತನ 16 ಪರ್ಸೆಂಟ್ ಕಡಿತ: 13.3 ಕೋಟಿ ರುಪಾಯಿ
ಮೊದಲ ತ್ರೈಮಾಸಿಕದಲ್ಲಿ ಹೊಸಬರು ಕೆಲಸಕ್ಕೆ ಸೇರ್ಪಡೆಯಾಗುವುದು ಇಲ್ಲದಿದ್ದರೂ ಸಿಬ್ಬಂದಿಯಲ್ಲಿನ ಕಲಿಕಾ ಚಟುವಟಿಕೆ ಹೆಚ್ಚಳ ಆಗಿದೆ. ಕಳೆದ ಅವಧಿಗೆ ಹೋಲಿಸಿದರೆ 24% ಏರಿಕೆ ಆಗಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಜಾಗತಿಕ ಮಟ್ಟದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಕಚೇರಿಗೆ ಹಿಂತಿರುಗಲು ಕಾತರಿಸುತ್ತಿರುವ ಉದ್ಯೋಗಿಗಳು
ಈಗಿನ ಸನ್ನಿವೇಶವನ್ನು ಟಿಸಿಎಸ್ ಸಿಬ್ಬಂದಿ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಹೊಸಬರು ಕಂಪೆನಿಗೆ ಸೇರ್ಪಡೆ ಆಗಿಲ್ಲ. ಇನ್ನು ನಮ್ಮ ಸಿಬಂದಿಯ ಆರೋಗ್ಯ, ಉತ್ತಮ ಬದುಕು ಆದ್ಯತೆ ಆಗಿದೆ. ಈ ಮೊದಲ ತ್ರೈ ಮಾಸಿಕದಲ್ಲಿ ಕಂಪೆನಿಯೊಳಗೇ ಇರುವ 4500 ಹುದ್ದೆಗಳನ್ನು ಇಲ್ಲಿನ ಪ್ರತಿಭೆಗಳಿಂದಲೇ ತುಂಬಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
2025ರ ಹೊತ್ತಿಗೆ ಕಚೇರಿಯಲ್ಲಿ ಉದ್ಯೋಗಿಗಳ ಕೆಲಸ 25% ಮಾತ್ರ :ಟಿಸಿಎಸ್
ನಮ್ಮ ಸಿಬ್ಬಂದಿ ಕಚೇರಿಗೆ ವಾಪಸಾಗಲು ಕಾತರರಾಗಿದ್ದಾರೆ. ಆದರೆ ನಾವು ಎಚ್ಚರಿಕೆ ವಿಧಾನದಲ್ಲೇ ಮುಂದುವರಿದಿದ್ದೇವೆ. ಉದ್ಯೋಗ ಸ್ಥಳವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಎಲ್ಲ ಮುಂಜಾಗ್ರತೆ ವಹಿಸಿದ್ದೇವೆ. ನಮ್ಮ ಸ್ಥಳದಲ್ಲೇ ಸದ್ಯಕ್ಕೆ ಒಟ್ಟು ಉದ್ಯೋಗಿಗಳ ಪೈಕಿ 1%ನಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತ್ರೈ ಮಾಸಿಕದಲ್ಲಿ ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸಿಕೊಂಡು ಹೋಗಲು ಆಲೋಚಿಸಿದ್ದೇವೆ ಎಂದಿದ್ದಾರೆ.
ದೊಡ್ಡ ಮಟ್ಟದ ಆದಾಯ ಕುಸಿತ ತಡೆಯುವಲ್ಲಿ ಸಫಲ
ಟಿಸಿಎಸ್ ಮೊದಲ ತ್ರೈ ಮಾಸಿಕದ ಫಲಿತಾಂಶದ ಬಗ್ಗೆ ಸಿಒಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಗಣಪತಿ ಸುಬ್ರಹ್ಮಣಿಯಂ ಮಾತನಾಡಿ, ವಿವಿಧ ಸ್ಥಳಗಳಲ್ಲಿ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದರೂ ಫಲಿತಾಂಶ ದೊರೆಯುತ್ತಿದೆ. ದೂರದ ಸ್ಥಳಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಗ್ರಾಹಕರಿಗೆ ಅಗತ್ಯ ನೆರವು ಸಿಗುತ್ತಿದೆ ಎಂದಿದ್ದಾರೆ.
ಮುಖ್ಯ ಹಣಕಾಸು ಅಧಿಕಾರಿ ವಿ.ರಾಮಕೃಷ್ಣನ್ ಮಾತನಾಡಿ, ದೊಡ್ಡ ಮಟ್ಟದಲ್ಲಿ ಆದಾಯ ಕುಸಿತ ಆಗಬಹುದಾದ ಸನ್ನಿವೇಶವನ್ನು ಸಿಬಂದಿ ಮತ್ತಿತರರ ಸಹಾಯದಿಂದ ಮಿತಿಗೊಳಿಸುವುದಕ್ಕೆ ಸಫಲರಾಗಿದ್ದೇವೆ. ಪ್ರಬಲವಾದ ನಗದು ಬ್ಯಾಲನ್ಸ್ ಹಾಗೂ ಸಂಗ್ರಹದ ಕಾರಣಕ್ಕೆ ಇಳಿಕೆಯ ಸನ್ನಿವೇಶದಲ್ಲೂ ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದಿದ್ದಾರೆ.