ಬಿಎಸ್ ಎನ್ ಎಲ್ ಸಿಬ್ಬಂದಿಗೆ ಜೂನ್ ಕೊನೆಗೂ ಮೇ ಸಂಬಳ ಬಂದಿಲ್ಲ
ಬಿಎಸ್ ಎನ್ ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಸಿಬ್ಬಂದಿ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಗಿದೆ. ಆದರೂ ಈಗಿರುವ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮೇ ತಿಂಗಳ ವೇತನ ಜೂನ್ ತಿಂಗಳ ಆರಂಭದಲ್ಲೇ ನೀಡಬೇಕಿತ್ತು. ಆದರೆ ಇನ್ನೂ ಪಾವತಿಸಿಲ್ಲ. ಇದೊಂಥರ ಮಾಮೂಲಿ ಆಗಿಬಿಟ್ಟಿದೆ ಎನ್ನುತ್ತಾರೆ ಸಿಬ್ಬಂದಿ.
ಬಿಎಸ್ ಎನ್ ಎಲ್ ಸಿಬ್ಬಂದಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ. ಅಭಿಮನ್ಯು ಮಾತನಾಡಿ, ವೇತನದ ತಿಂಗಳ ವೆಚ್ಚ ಈ ಹಿಂದೆ 950 ಕೋಟಿ ರುಪಾಯಿ ಇತ್ತು. ಅದೀಗ 350 ಕೋಟಿ ರುಪಾಯಿಗೆ ಇಳಿದಿದೆ. ಆದರೂ ಹಣ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ವಾಲಂಟರಿ ರಿಟೈರ್ ಮೆಂಟ್ ಸ್ಕೀಮ್ ನಲ್ಲಿ (ವಿಆರ್ ಎಸ್) 79 ಸಾವಿರ ಸಿಬ್ಬಂದಿ ಕಂಪೆನಿ ಬಿಟ್ಟಿದ್ದಾರೆ. ಸದ್ಯಕ್ಕೆ 70 ಸಾವಿರ ಉದ್ಯೋಗಿಗಳು ಮಾತ್ರ ಇದ್ದಾರೆ. ಆದರೂ ಮೇ ತಿಂಗಳ ಸಂಬಳ ಬಂದಿಲ್ಲ ಎನ್ನುತ್ತಾರೆ.
4G ಸಲಕರಣೆ ಖರೀದಿಗಾಗಿ ಕರೆದಿದ್ದ ಟೆಂಡರ್ ಗೆ ತಡೆ
ಬಿಎಸ್ ಎನ್ ಎಲ್ 1400 ಕೋಟಿ ರುಪಾಯಿಯನ್ನು ಗಳಿಸಿದೆ. ಆದರೂ ಸಿಬ್ಬಂದಿಗೆ ವೇತನ ಪಾವತಿ ಮಾಡುವುದು ಆಡಳಿತ ಮಂಡಳಿಗೆ ಕೊನೆ ಆದ್ಯತೆ ಎನ್ನುತ್ತಾರೆ ಅಭಿಮನ್ಯು. "ಗುತ್ತಿಗೆ ಸಿಬ್ಬಂದಿಗೆ ಒಂದು ವರ್ಷದಿಂದ ವೇತನ ಪಾವತಿಸಿಲ್ಲ. ಈಗಾಗಲೇ ಹನ್ನೆರಡು ಮಂದಿ ಗುತ್ತಿಗೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ವೇತನ ವಿಚಾರವಾಗಿ ಕಾರ್ಮಿಕ ಹಾಗೂ ಆರ್ಥಿಕ ಸಚಿವಾಲಯ ನೀಡಿದ್ದ ಸೂಚನೆಯನ್ನು ಆಡಳಿತ ಮಂಡಳಿ ಉಲ್ಲಂಘಿಸಿದೆ" ಎನ್ನುತ್ತಾರೆ. ಬಿಎಸ್ ಎನ್ ಎಲ್ ನಿಂದ 4G ಸೇವೆ ವಿಳಂಬ ಮಾಡುತ್ತಿರುವುದರ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಸಿಬ್ಬಂದಿ ಒಕ್ಕೂಟ ಆರೋಪಿಸಿದೆ. ಇನ್ನು ಬಿಎಸ್ ಎನ್ ಎಲ್ ನಿಂದ 4G ಸಲಕರಣೆ ಖರೀದಿಗಾಗಿ ಕರೆದಿದ್ದ ಟೆಂಡರ್ ಗೆ ಸರ್ಕಾರ ತಡೆ ನೀಡಿದೆ. ಅದಕ್ಕೆ ಕಾರಣವಾಗಿರುವುದು ಟೆಲಿಕಾಂ ಎಕ್ವಿಪ್ ಮೆಂಟ್ ಮತ್ತು ಸರ್ವೀಸಸ್ ಪ್ರಮೋಷನ್ ಕೌನ್ಸಿಲ್ (ಟಿಇಪಿಸಿ) ದೂರು.
ಭಾರತದಲ್ಲಿ ಮಾರಾಟಗಾರರಿಗೆ ಅನುಭವ ಇಲ್ಲ
ಬಿಎಸ್ ಎನ್ ಎಲ್ ನಿಂದ ಮೇಕ್ ಇನ್ ಇಂಡಿಯಾ ನಿಯಮ ಪಾಲನೆ ಆಗುತ್ತಿಲ್ಲ ಎಂದು ಟಿಇಪಿಸಿ ದೂರಿತ್ತು. ಇತರ ಖಾಸಗಿ ಆಪರೇಷರ್ ಗಳು ಅಂತರರಾಷ್ಟ್ರೀಯ ಮಾರಾಟಗಾರರಿಂದ ವಿಶ್ವ ದರ್ಜೆಯ 4G ಸಲಕರಣೆಗಳನ್ನು ಖರೀದಿಸುತ್ತಿವೆ. ಆದರೆ ಬಿಎಸ್ ಎನ್ ಎಲ್ ಗೆ ಮಾತ್ರ ದೇಶೀಯ ಮಾರಾಟಗಾರರಿಂದಲೇ ಸಲಕರಣೆಗಳನ್ನು ಖರೀದಿಸಬೇಕು ಎಂದು ಒತ್ತಡ ಹಾಕುವುದು ಎಷ್ಟು ಸರಿ ಎಂಬುದು ಪತ್ರವೊಂದರಲ್ಲಿ ಸಿಬ್ಬಂದಿಯ ಒಕ್ಕೂಟ ಕೇಳಿರುವ ಪ್ರಶ್ನೆ. 4G ತಂತ್ರಜ್ಞಾನದಲ್ಲಿ ಭಾರತೀಯ ಮಾರಾಟಗಾರರು ಸಾಮರ್ಥ್ಯ ಸಾಬೀತು ಮಾಡಿಕೊಂಡಿಲ್ಲ. ಇನ್ನು ದೊಡ್ಡ ನೆಟ್ ವರ್ಕ್ ಗಳನ್ನು ನಿಭಾಯಿಸಿದ ಅನುಭವ ಕೂಡ ಅವರಿಗಿಲ್ಲ. ಇಂಥ ಸನ್ನಿವೇಶದಲ್ಲಿ ಭಾರತದ ಮಾರಾಟಗಾರರಿಂದಲೇ 4G ಸಲಕರಣೆ ಖರೀದಿಸಬೇಕು ಎಂದು ಬಿಎಸ್ ಎನ್ ಎಲ್ ಗೆ ಒತ್ತಾಯಿಸುವುದು ಸೂಕ್ತ ವೇದಿಕೆಯನ್ನು ನಿರಾಕರಿಸಿದಂತೆ ಎಂದು ಒಕ್ಕೂಟ ಹೇಳಿದೆ.
ಬಿಎಸ್ ಎನ್ ಎಲ್ ವಿರುದ್ಧ ಪಿತೂರಿ ಎಂಬ ಅನುಮಾನ
ಅಭಿಮನ್ಯು ಹೇಳುವಂತೆ, ಬಿಎಸ್ ಎನ್ ಎಲ್ ನಿಂದ 4G ಸೇವೆ ಆರಂಭವಾಗಬಾರದು ಎಂದು ಪಿತೂರಿ ನಡೆಸಲಾಗುತ್ತಿದೆ ಎಂಬ ಗುಮಾನಿ ಬರುವುದಕ್ಕೆ ಕಾರಣಗಳಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಬಿಎಸ್ ಎನ್ ಎಲ್ ನಿಂದ 4G ಸೇವೆ ಶುರುವಾಗಬಾರದು. ಅಂಥವರಿಗೆ ಸರ್ಕಾರದ ಆಶೀರ್ವಾದವೂ ಇದೆ. ಇಲ್ಲದಿದ್ದರೆ ಟಿಇಪಿಸಿ ನೀಡಿದ ದೂರಿನ ಆಧಾರದಲ್ಲೇ ಬಿಎಸ್ ಎನ್ ಎಲ್ 4G ಟೆಂಡರ್ ಅನ್ನು ಸರ್ಕಾರ ತಡೆಯುತ್ತಿತ್ತಾ ಎನ್ನುವ ಪ್ರಶ್ನೆ ಕೇಳಲಾಗುತ್ತದೆ. ಇನ್ನು ವಿಆರ್ ಎಸ್ ಹೊರತುಪಡಿಸಿ ಪುನಶ್ಚೇತನ ಪ್ಯಾಕೇಜ್ ಅನ್ನು ಕಳೆದ ವರ್ಷದಲ್ಲೇ ಘೋಷಣೆ ಮಾಡಲಾಯಿತು. ಆದರೆ ಈ ತನಕ ಏನೂ ಆಗಿಲ್ಲ. ಬಿಎಸ್ ಎನ್ ಎಲ್ ನಿಂದ 4G ಸೇವೆ ಶುರು ಮಾಡುವುದು, ಮಾರ್ಕೆಟ್ ನಿಂದ ಹಣ ಸಂಗ್ರಹಕ್ಕೆ ಬಿಎಸ್ ಎನ್ ಎಲ್ ಗೆ ಸವರನ್ ಗ್ಯಾರಂಟಿ ನೀಡುವುದು, ಆಸ್ತಿ ಮಾರಿ ಹಣ ಸಂಗ್ರಹಿಸುವುದು ಇತ್ಯಾದಿ ಯಾವುದೂ ಆಗಿಲ್ಲ ಎಂದು ಅಭಿಮನ್ಯು ಆರೋಪಿಸುತ್ತಾರೆ.