830 ಕೋಟಿ ರುಪಾಯಿ ತೆರಿಗೆ ವಂಚನೆ ಪತ್ತೆ ಮಾಡಿದ ಜಿಎಸ್ ಟಿ ಅಧಿಕಾರಿಗಳು
ಕಾನೂನುಬಾಹಿರ ಪಾನ್ ಮಸಾಲ ಉತ್ಪಾದಕ ಘಟಕದಿಂದ 830 ಕೋಟಿ ರುಪಾಯಿ ತೆರಿಗೆ ವಂಚನೆ ಆಗಿರುವುದನ್ನು ಜಿಎಸ್ ಟಿ ಅಧಿಕಾರಿಗಳು ದೆಹಲಿಯಲ್ಲಿ ಪತ್ತೆ ಹಚ್ಚಿದ್ದು, ಈ ಸಂಬಂಧವಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಯಾವುದೇ ನೋಂದಣಿ ಮತ್ತು ಸುಂಕ ಪಾವತಿ ಮಾಡದೆ ಗುಟ್ಕಾ/ಪಾನ್ ಮಸಾಲ/ತಂಬಾಕು ಉತ್ಪಾದನೆ ಹಾಗೂ ಪೂರೈಸುತ್ತಾ ಆ ಸಂಸ್ಥೆಯು ಜಿಎಸ್ ಟಿ ಪಾವತಿಯನ್ನು ತಪ್ಪಿಸುತ್ತಿತ್ತು ಎಂದು ತಿಳಿಸಲಾಗಿದೆ. ಈ ಕಾನೂನು ಬಾಹಿರ ಕಾರ್ಖಾನೆಯಲ್ಲಿ 65 ಕಾರ್ಮಿಕರಷ್ಟು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಸಾರ್ವಕಾಲಿಕ ಗರಿಷ್ಠ GST 1.15 ಲಕ್ಷ ಕೋಟಿ ರು. ಡಿಸೆಂಬರ್ ನಲ್ಲಿ ಸಂಗ್ರಹ
ಶೋಧ ನಡೆಸಿದ ವೇಳೆ ಅಂದಾಜು 4.14 ಕೋಟಿ ರುಪಾಯಿ ಮೌಲ್ಯದ ಗುಟ್ಕಾ, ಕಚ್ಚಾ ವಸ್ತುಗಳಾದ ಸುಣ್ಣ, ತಂಬಾಕು ಎಲೆ ಮುಂತಾದವು ಪತ್ತೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಸಾಕ್ಷ್ಯಗಳು ಸಿಕ್ಕಿರುವ ಆಧಾರದಲ್ಲಿ, ಸರಕು ವಶಪಡಿಸಿಕೊಂಡಿರುವುದು ಮತ್ತು ತಪ್ಪೊಪ್ಪಿಕೊಂಡಿರುವ ಹೇಳಿಕೆ ಎಲ್ಲವೂ ಗಮನಿಸಿದಲ್ಲಿ ಅಂದಾಜು 831.72 ಕೋಟಿ ರುಪಾಯಿ ಒಟ್ಟು ಸುಂಕ ಕಟ್ಟದಿರುವ ಸಾಧ್ಯತೆ ಇದೆ. ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ," ಎಂದು ಹೇಳಲಾಗಿದೆ.
ಈ ಘಟಕದಿಂದ ಗುಟ್ಕಾವನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು. ತೆರಿಗೆ ತಪ್ಪಿಸುವ ಉದ್ದೇಶದಿಂದ ಯಾವುದೇ ಇನ್ ವಾಯ್ಸ್ ಇಲ್ಲದೆ ಸರಕು ಉತ್ಪಾದಿಸಿ, ಪೂರೈಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಯಾವ ಹಂತದಲ್ಲೂ ಜಿಎಸ್ ಟಿ ಬಾರದಂತೆ ನೋಡಿಕೊಳ್ಳುತ್ತಿದ್ದ. ಸ್ಥಳೀಯ ಕೋರ್ಟ್ ನಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೆಹಲಿಯ ಬುದ್ಧ ವಿಹಾರ್ ಪ್ರದೇಶದ ಮುಖ್ಯ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4327 ಕೋಟಿ ರುಪಾಯಿ ಮೌಲ್ಯದ ಜಿಎಸ್ ಟಿ ತೆರಿಗೆ ವಂಚನೆ ಪ್ರಕರಣ ಪತ್ತೆಯಾಗಿದೆ.