ದೇಶವೇ ಲಾಕ್ಡೌನ್ ಆದ್ರೂ, ಈ ಏಕೈಕ ಬಿಲಿಯನೇರ್ ಸಂಪತ್ತು ಮಾತ್ರ ಏರುತ್ತಲೇ ಇದೆ!
ವಿಶ್ವದಾದ್ಯಂತ ಕೊರೊನಾವೈರಸ್ನಿಂದಾಗಿ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದು, ಸೋಂಕಿತರ ಸಂಖ್ಯೆಯು ಮಿಲಿಯನ್ ದಾಟಿದೆ. ದೇಶವೂ ಲಾಕ್ಡೌನ್ಗೆ ಒಳಪಟ್ಟಿದ್ದು ಎಲ್ಲಾ ಉದ್ಯಮ ನೆಲಕಚ್ಚಿದೆ.
ಹೀಗೆ ಕೊರೊನಾವೈರಸ್ನಿಂದ ಉದ್ಯಮದ ನಷ್ಟದೊಂದಿಗೆ ಭಾರತದ ಶ್ರೀಮಂತ ಉದ್ಯಮಿಗಳೆಲ್ಲಾ ನಷ್ಟ ಅನುಭವಿಸಿದ್ದಾರೆ. ಆದರೆ ಕೊರೊನಾವೈರಸ್ ಮಾರುಕಟ್ಟೆ ಮೇಲೆ ಅಬ್ಬರಿಸಿದರೂ, ಕೊರೊನಾಯಿಂದ ಪಾರಾಗಿ ಲಾಭ ಗಳಿಸುತ್ತಿರುವ ಏಕೈಕ ಭಾರತೀಯ ಉದ್ಯಮಿ ಅಂದ್ರೆ ಅದು ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ ಮಾಲೀಕ ರಾಧಾಕಿಶನ್ ದಮಾನಿ.
2020ರಲ್ಲಿ ದಮಾನಿ ನಿವ್ವಳ ಆಸ್ತಿ 5 ಪರ್ಸೆಂಟ್ ಏರಿಕೆ
ಕೊರೊನಾಯಿದಾಗಿ ವಿಶ್ವದ ಎಲ್ಲಾ ಉದ್ಯಮಗಳು ಭಾರೀ ನಷ್ಟ ಅನುಭವಿಸುತ್ತಿವೆ. ಇದರಿಂದ ಭಾರತ ದೇಶ ಕೂಡ ಹೊರತಾಗಿಲ್ಲ. ಭಾರತದ ಶ್ರೀಮಂತ ವ್ಯಕ್ತಿಗಳಾದ ಅಂಬಾನಿಯಿಂದ ಅದಾನಿವರೆಗೂ ಕೊರೊನ ಕಾಟಕ್ಕೆ ನಷ್ಟ ಕಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಮಾರುಕಟ್ಟೆ ಕುಸಿತದಿಂದ 3.62 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ.
ಹೀಗೆ ಭಾರತದ ಎಲ್ಲಾ ಉದ್ಯಮಿಗಳು ನಷ್ಟ ಅನುಭವಿಸಿದ್ದರು, ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರ ನಿವ್ವಳ ಆಸ್ತಿ ಮೌಲ್ಯವು ಈ ವರ್ಷ 5 ಪರ್ಸೆಂಟ್ನಷ್ಟು ಹೆಚ್ಚಳವಾಗಿ 10.2 ಶತಕೋಟಿ ಡಾಲರ್ಗೆ ತಲುಪಿದೆ.
ಸಂಪತ್ತು ಹೆಚ್ಚಿಸಿಕೊಂಡ ಭಾರತದ ಏಕೈಕ ಬಿಲಿಯನೇರ್
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಭಾರತದ ಅಗ್ರ 12 ಶ್ರೀಮಂತರಲ್ಲಿ ಹೆಚ್ಚು ಲಾಭ ಗಳಿಸಿರುವ ಬಿಲಿಯನೇರ್ ಅಂದ್ರೆ ಅದು ರಾಧಾಕಿಶನ್ ದಮಾನಿ ಮಾತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಮಾನಿಯ ನಿವ್ವಳ ಮೌಲ್ಯಕ್ಕೆ ಬಹುತೇಕ ಎಲ್ಲಾ ಸಂಪತ್ತನ್ನು ಕೊಡುಗೆ ನೀಡುವ ಅವೆನ್ಯೂ ಸೂಪರ್ಮಾರ್ಟ್ಗಳ ಷೇರುಗಳು ಈ ವರ್ಷ 18 ಪರ್ಸೆಂಟ್ನಷ್ಟು ಮುನ್ನಡೆ ಸಾಧಿಸಿವೆ
ಮುಂಬೈನ ಒಂದೇ ರೂಮ್ ಅಪಾರ್ಟ್ಮೆಂಟ್ನಲ್ಲಿ ಬೆಳೆದಿದ್ದ ದಮಾನಿ
ಮುಂಬೈ ಟೆನೆಮೆಂಟ್ ಬ್ಲಾಕ್ನ ಒಂದು ರೂಮ್ ಇದ್ದ ಅಪಾರ್ಟ್ಮೆಂಟ್ನಲ್ಲಿ ಬೆಳೆದ ದಮಾನಿ, ತನ್ನ ಬಿಲಿಯನೇರ್ ಸ್ಪರ್ಧಿಗಳಾದ ಮುಖೇಶ್ ಅಂಬಾನಿ ಮತ್ತು ಉದಯ್ ಕೊಟಕ್ ಅವರನ್ನು ಹಿಂದೆ ಹಾಕಿ ಸಂಪತ್ತು ಗಳಿಸಿದ್ದಾರೆ. ಅಂಬಾನಿ, ಹಾಗೂ ಉದಯ್ ಕೊಟಕರ್ ಷೇರುಗಳ ನಿವ್ವಳ ಮೌಲ್ಯ 32 ಪರ್ಸೆಂಟ್ಗಿಂತಳೂ ಹೆಚ್ಚು ನಷ್ಟ ಅನುಭವಿಸಿದರೂ, ದಮಾನಿ ಸಂಪತ್ತು ಮಾತ್ರ ಉಬ್ಬಿಕೊಳ್ಳುತ್ತಲೇ ಸಾಗಿದೆ.
ಕೊರೊನೊಯಿಂದ ಕರಗಿತು ಮುಕೇಶ್ ಅಂಬಾನಿಯ 3.65 ಲಕ್ಷ ಕೋಟಿ ಸಂಪತ್ತು: ಶ್ರೀಮಂತರ ಪಟ್ಟಿಯಲ್ಲಿ ಚೀನಿಯರಿಗೆ ಬಡ್ತಿ
ಲಾಕ್ಡೌನ್ ಆದ ಮೇಲೆ ದಮಾನಿ ಸಂಪತ್ತು ಏರಿಕೆ!
ದೇಶವೇ ಲಾಕ್ಡೌನ್ ಆದ್ಮೇಲೆ ದಮಾನಿ ಸಂಪತ್ತು ಅದು ಹೇಗೆ ಏರಿಕೆಯಾಯ್ತು ಎಂದು ನೀವು ಅಂದುಕೊಳ್ಳಬಹುದು. ಆದರೆ ಇದೇ ಲಾಕ್ಡೌನ್ ದಮಾನಿಗೆ ವರವಾಗಿದೆ. ಇದಕ್ಕೆ ಕಾರಣ ದೇಶದ 21ದಿನಗಳ ಲಾಕ್ಡೌನ್. ದೇಶದ 130 ಕೋಟಿ ಜನತೆಯು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾದಾಗ ಎಲ್ಲಿ ದಿನಬಳಕೆಯ ವಸ್ತುಗಳು ಸಿಗುವುದಿಲ್ಲವೂ ಎಂದು ಗಾಬರಿಗೊಂಡು ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಿದ್ದಾರೆ. ಇದು ಲಾಕ್ಡೌನ್ ಸಂದರ್ಭದಲ್ಲೂ ಕಂಪನಿಯ ಷೇರುಗಳ ಮೌಲ್ಯವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೊರೊನಾ ಹೋರಾಟಕ್ಕೆ 100 ಕೋಟಿ ದೇಣಿಗೆ ನೀಡಿರುವ ದಮಾನಿ
ಅವೆನ್ಯೂ ಸೂಪರ್ ಮಾರ್ಟ್ಸ್ ನ ಪ್ರವರ್ತಕ ರಾಧಾಕಿಶನ್ ದಮಾನಿ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ PM- CARES ಫಂಡ್ ಗೆ 100 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಜತೆಗೆ ಹಲವು ರಾಜ್ಯಗಳ ಪರಿಹಾರ ನಿಧಿಗೆ 55 ಕೋಟಿ ರುಪಾಯಿ ನೀಡಿದ್ದಾರೆ. ತಮ್ಮ ಬ್ರೈಟ್ ಸ್ಟಾರ್ ಇನ್ವೆಸ್ಟ್ ಮೆಂಟ್ಸ್ ಗ್ರೂಪ್ ಕಂಪೆನಿ ಮೂಲಕ ಈ ದೇಣಿಗೆ ನೀಡಿದ್ದಾರೆ.
ಮಹಾರಾಷ್ಟ್ರ, ಗುಜರಾತ್ ಗೆ ತಲಾ 10 ಕೋಟಿ ರುಪಾಯಿ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಪಂಜಾಬ್ ಮತ್ತು ಕರ್ನಾಟಕಕ್ಕೆ ತಲಾ 5 ಕೋಟಿ ರುಪಾಯಿ ಹಾಗೂ ತಮಿಳು, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಕ್ಕೆ ತಲಾ 2.5 ಕೋಟಿ ರುಪಾಯಿಯನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.
ಒಟ್ಟಾರೆ ದೇಶದ ಎಲ್ಲಾ ಉದ್ಯಮಿಗಳು ಲಾಕ್ಡೌನ್ ಎಫೆಕ್ಟ್ ಆದ್ರೂ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ ಸಂಸ್ಥಾಪಕ ರಾಧಾಕಿಶನ್ ದಮಾನಿಯ ಸಂಪತ್ತು ಏರಿಕೆಗೆ ಕಾರಣವಾಗಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ.