1,000 ಕೋಟಿಯ ಬಂಗಲೆ 400 ಕೋಟಿಗೆ ಖರೀದಿ; ಅದಾನಿ ಗ್ರೂಪ್ ಬಂಪರ್
ಇದು ವಿಲಾಸಿ ದಿವಾಳಿ ಇತ್ಯರ್ಥ ಪ್ರಕರಣವೊಂದರ ವರದಿ. 3.4 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 25,000 ಚದರಡಿಗೂ ಹೆಚ್ಚಿರುವ ಕಟ್ಟಡದ ಖರೀದಿ ವ್ಯವಹಾರ. ಆರು ಲಿವಿಂಗ್ ಮತ್ತು ಡೈನಿಂಗ್ ರೂಮ್ ಗಳಿವೆ. ಸ್ಟಡಿ ರೂಮ್ ಇದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿಯೇ 7000 ಚದರಡಿಯ ಕ್ವಾರ್ಟರ್ಸ್ ಇದೆ. ಸುತ್ತಲೂ ಹಸಿರೋ ಹಸಿರು. ಇನ್ನು ಈ ಆಸ್ತಿ ಇರುವುದು ದೆಹಲಿಯ ಅತ್ಯಂತ ಶ್ರೀಮಂತ ಲ್ಯೂಟೆನ್ಸ್ ಪ್ರದೇಶದಲ್ಲಿ.
-ಇಂಥ ಆಸ್ತಿಯೊಂದು ಕೇವಲ 400 ಕೋಟಿ ರುಪಾಯಿಗೆ. ಗೌತಮಿ ಅದಾನಿ ನೇತೃತ್ವದ ಅದಾನಿ ಗ್ರೂಪ್ ನ ಭಾಗವಾದ ಅದಾನಿ ಪ್ರಾಪರ್ಟೀಸ್ ಈ ಅದ್ಭುತ ಬಂಗಲೆಯ ಹೊಸ ಮಾಲೀಕತ್ವ ವಹಿಸಲಿದೆ. ಶತಮಾನಕ್ಕಿಂತ ಹಳೆಯದಾದ, ಎರಡಂತಸ್ತಿನ ಈ ಬಂಗಲೆ ಇರುವುದು ದೆಹಲಿಯ ಭಗವಾನ್ ದಾಸ್ ರಸ್ತೆಯಲ್ಲಿ.
ಆದಿತ್ಯ ಎಸ್ಟೇಟ್ಸ್ ದಿವಾಳಿ ಪ್ರಕರಣ
ಆದಿತ್ಯ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ದಿವಾಳಿ ಪ್ರಕರಣ ನಡೆಯುತ್ತಿರುವ ವೇಳೆ ಅದಾನಿ ಗ್ರೂಪ್ ಪಾಲಿಗೆ ಈ ಆಸ್ತಿಯು ಬಹುಮಾನದ ರೀತಿಯಲ್ಲಿ ಸಿಕ್ಕಿದೆ. ಆದರೆ ಈ ಆಸ್ತಿ ವ್ಯವಹಾರದ ಬಗ್ಗೆ ಅದಾನಿ ಗ್ರೂಪ್ ಆಗಲೀ ಆದಿತ್ಯ ಎಸ್ಟೇಟ್ಸ್ ನಿಂದಾಗಲೀ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.ರಾಷ್ಟ್ರೀಯ ಕಂಪೆನಿ ನ್ಯಾಯ ಮಂಡಳಿ (ಎನ್ ಸಿಎಲ್ ಟಿ) ಅದಾನಿಯ ಆಫರ್ ಒಪ್ಪಿಕೊಂಡಿದೆ. ಆದಿತ್ಯ ಎಸ್ಟೇಟ್ಸ್ ಗೆ ಸಾಲ ನೀಡಿದ್ದ 93 ಪರ್ಸೆಂಟ್ ಮಂದಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಕನ್ವರ್ಷನ್ ಶುಲ್ಕವಾಗಿ 135 ಕೋಟಿ ರುಪಾಯಿ
ಅದಾನಿ ಗ್ರೂಪ್ ನಿಂದ ಮೊದಲಿಗೆ ಖಾತ್ರಿ ಹಣವಾಗಿ 5 ಕೋಟಿ ಹಾಗೂ ಕನ್ವರ್ಷನ್ ಶುಲ್ಕವಾಗಿ 135 ಕೋಟಿ ರುಪಾಯಿಯನ್ನು ಪಾವತಿಸಬೇಕು. ಈ ಶುಲ್ಕವನ್ನು ಮಾಲೀಕತ್ವದ ಸ್ಥಾನಮಾನವನ್ನು ಫೀ ಹೋಲ್ಡ್ ನಿಂದ ಲೀಸ್ ಹೋಲ್ಡ್ ಗೆ ಬದಲಿಸಲು ಹಾಕಲಾಗುತ್ತದೆ. ತನ್ನ ಆದೇಶದಲ್ಲಿ ಎನ್ ಸಿಎಲ್ ಟಿ ಹೇಳಿರುವ ಪ್ರಕಾರ, ಇಬ್ಬರು ಪ್ರತ್ಯೇಕ ಮೌಲ್ಯಮಾಪಕರು ಆಸ್ತಿಯ ಮೌಲ್ಯಮಾಪನ ನಡೆಸಿದ್ದಾರೆ. ಆಸ್ತಿಯ ಸರಾಸರಿ ಮೌಲ್ಯ 306 ಕೋಟಿ ರುಪಾಯಿ ಬಂದಿದೆ.
ಬ್ರಿಟಿಷರ ಕಾಲದ ಬಂಗಲೆ
ಭಗವಾನ್ ದಾಸ್ ರಸ್ತೆಯಲ್ಲಿ ಇರುವ ಈ ಬಂಗಲೆಯು ಬ್ರಿಟಿಷರ ಕಾಲದ್ದು. 1921ರಲ್ಲಿ ಲಾಲಾ ಸುಖ್ ಬೀರ್ ಸಿಂಗ್ ಇದನ್ನು ಖರೀದಿಸಿದರು. 1985ರಿಂದ ಆದಿತ್ಯ ಎಸ್ಟೇಟ್ಸ್ ಈ ಬಗಲೆಯ ಮಾಲೀಕತ್ವ ಹೊಂದಿದೆ. ಕನ್ವರ್ಷನ್ ಶುಲ್ಕವೇ ಹೆಚ್ಚಾಗಿದ್ದರಿಂದ 400 ಕೋಟಿ ಪಾವತಿಸಬೇಕಾಗಿದೆ. ಕೆಲ ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಆಸ್ತಿಯನ್ನು ಮಾರಾಟಕ್ಕೆ ಇಟ್ಟಾಗ 1,000 ಕೋಟಿಗೂ ಹೆಚ್ಚು ಮೊತ್ತವನ್ನು ಹೇಳಲಾಗಿತ್ತು. ಆದರೆ ಕ್ರಮೇಣ ಇದರ ಬೆಲೆ ಇಳಿಯುತ್ತಾ ಬಂದಿದೆ. ಈಗ ಎನ್ ಸಿಎಲ್ ಟಿ ಮೂಲಕ ಮಾರಾಟ ಆಗುತ್ತಿರುವುದರಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಬಿಕರಿ ಆಗಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ಬಿಡ್ ಹಾಕಿದ್ದರು
ಐಸಿಐಸಿಐ ಬ್ಯಾಂಕ್ ಯುಕೆ ಪಿಎಲ್ ಸಿ ಆದಿತ್ಯ ಎಸ್ಟೇಟ್ಸ್ ವಿರುದ್ಧ ದಿವಾಳಿ ವಿಚಾರಣೆಗೆ ಅರ್ಜಿ ಹಾಕಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅರ್ಜಿ ಸ್ವೀಕರಿಸಲಾಗಿತ್ತು. ಆದಿತ್ಯ ಎಸ್ಟೇಟ್ಸ್ ನ ಸಾಲಗಾರರ ಸಮಿತಿಯ ಜತೆ ಚರ್ಚಿಸಿದ ನಂತರ ಆಸಕ್ತಿ ವ್ಯಕ್ತಪಡಿಸುವವರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದಾನಿ ಪ್ರಾಪರ್ಟೀಸ್ ಹೊರತುಪಡಿಸಿ ಹ್ಯಾವೆಲ್ಸ್ ಇಂಡಿಯಾದ ಅನಿಲ್ ರಾಯ್ ಗುಪ್ತಾ, ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಸೇರಿ ಒಂಬತ್ತು ಬಿಡ್ಡರ್ ಗಳು ಇದ್ದರು. ಎನ್ ಸಿಎಲ್ ಟಿಯ ಅಂತಿಮ ವಿಚಾರಣೆಯಲ್ಲಿ ಸಾಳಗಾರರು ಆಕ್ಷೇಪ ಎತ್ತಿದ್ದರು. 400 ಕೋಟಿಯಿಂದ 265 ಕೋಟಿಗೆ ಇಳಿಸಿದ್ದಕ್ಕೆ ತಕರಾರು ಮಾಡಿದ್ದರು. ಆದರೆ ಅದಾನಿ ಗ್ರೂಪ್ ನ ಆಫರ್ ಗೆ ಎನ್ ಸಿಎಲ್ ಟಿ ಒಪ್ಪಿಗೆ ಸೂಚಿಸಿತು.