ವಿಶ್ವದ ಶ್ರೀಮಂತ ದೇಗುಲ ತಿರುಪತಿ ದೇವಸ್ಥಾನದ ಆರ್ಥಿಕ ಸ್ಥಿತಿ ಹೇಗಿದೆ?
ಕೊರೊನಾ ಲಾಕ್ ಡೌನ್ ಪರಿಣಾಮವಾಗಿ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ನಿಲ್ಲಿಸಿ ಹತ್ತಿರ ಹತ್ತಿರ ಎರಡು ತಿಂಗಳಾಯಿತು. ಆದಾಯ ಏನೇನೂ ಇಲ್ಲದಂತಾಗಿದೆ. ಆದರೂ ವಿಶ್ವದ ಈ ಶ್ರೀಮಂತ ದೇವಾಲಯದ ನಿರ್ವಹಣೆಗೆ ಏನೂ ಸಮಸ್ಯೆ ಇಲ್ಲ. ಇಲ್ಲಿನ ಸಿಬ್ಬಂದಿಯ ಮೇ ತಿಂಗಳ ಸಂಬಳ ಕೊಡುವಷ್ಟು ಮೀಸಲು ಹಣ ಇದೆ ಎಂದು ಆಡಳಿತಮಂಡಳಿ ತಿಳಿಸಿದೆ.
ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಅಧ್ಯಕ್ಷ ವೈ.ಎಸ್. ಸುಬ್ಬಾರೆಡ್ಡಿ ಮಾತನಾಡಿ, ಈ ಬಿಕ್ಕಟ್ಟಿನ ಮಧ್ಯೆಯೂ ಮೇ ತಿಂಗಳ ವೇತನ ಪಾವತಿಗೆ ಹಣದ ಸಮಸ್ಯೆ ಏನಿಲ್ಲ. ಅಷ್ಟೇ ಅಲ್ಲ, ದೇವಾಲಯದ ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಇತರ ಖರ್ಚುಗಳನ್ನು ಜೂನ್ ತಿಂಗಳಿಗೂ ನಿರ್ವಹಿಸಬಹುದಾದಷ್ಟು ಹಣ ಇದೆ ಎಂದಿದ್ದಾರೆ.
ಉದ್ಯೋಗಿಗಳಿಗೆ 2 ಲಕ್ಷ ಉಚಿತ 'ತಿರುಪತಿ ಲಡ್ಡು' ವಿತರಿಸಿದ TTD
ಫಿಕ್ಸೆಡ್ ಡೆಪಾಸಿಟ್ ಹಣ ತೆಗೆಯುವುದು ಅಥವಾ ಬ್ಯಾಂಕ್ ನಿಂದ ಗೋಲ್ಡ್ ಡೆಪಾಸಿಟ್ ತೆಗೆಯುವ ಅಗತ್ಯ ಬರುವುದಿಲ್ಲ ಎಂದು ರೆಡ್ಡಿ ಹೇಳಿದ್ದಾರೆ. "ನಮ್ಮ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಸೂಚನೆ ನೀಡಿದ್ದು, ಇದು ಭಾವನಾತ್ಮಕ ವಿಷಯ. ಆದ್ದರಿಂದ ಯಾವ ಡೆಪಾಸಿಟ್ ಮುಟ್ಟಬಾರದು ಎಂದಿದ್ದಾರೆ. ಚಿನ್ನ ಹಾಗೂ ಡೆಪಾಸಿಟ್ ಅನ್ನು ದೇಶದಾದ್ಯಂತ ಇರುವ ಭಕ್ತರು ನೀಡಿರುವುದು. ಅದು ಭಾವನಾತ್ಮಕ ವಿಚಾರ. ಹುಂಡಿ ಮತ್ತು ಇತರ ಸಂಗ್ರಹ ನಿಧಿಗೆ ಹೋಗುತ್ತದೆ" ಎಂದಿದ್ದಾರೆ ಸುಬ್ಬಾ ರೆಡ್ಡಿ.
ಒಂಬತ್ತು ಸಾವಿರ ಕೇಜಿ ಚಿನ್ನ ಹಾಗೂ 1400 ಕೋಟಿ ಎಫ್.ಡಿ.
ವಿಶ್ವವಿಖ್ಯಾತ ತಿರುಮಲ ದೇವಸ್ಥಾನಕ್ಕೆ ಸೇರಿದ ಒಂಬತ್ತು ಟನ್ ಅಂದರೆ, ಒಂಬತ್ತು ಸಾವಿರ ಕೇಜಿ ಚಿನ್ನ ಹಾಗೂ 1400 ಕೋಟಿ ರುಪಾಯಿ ಫಿಕ್ಸೆಡ್ ಡೆಪಾಸಿಟ್ ವಿವಿಧ ಬ್ಯಾಂಕ್ ಗಳಲ್ಲಿ ಇವೆ. "ಡೆಪಾಸಿಟ್ ನಿಂದ ಹಣ ತೆಗೆಯುವ ಸ್ಥಿತಿ ಉದ್ಭವಿಸಿಲ್ಲ. ಆದರೆ ಭವಿಷ್ಯದಲ್ಲಿ ಏನಾಗುತ್ತದೋ ಗೊತ್ತಿಲ್ಲ. ಇದು ಆಗದಿರುವಂತೆ ನೋಡ್ತೀವಿ. ಎಲ್ಲ ನಿಯಮ ಹಾಗೂ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡ್ತೀವಿ" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಗೆ ಸಂಬಂಧಿಯೂ ಆಗಿರುವ ಸುಬ್ಬಾ ರೆಡ್ಡಿ ಅವರು ತಿಳಿಸಿದ್ದಾರೆ. ಲಾಕ್ ಡೌನ್ ಘೋಷಣೆಗೂ ಮುಂಚೆಯೇ, ಮಾರ್ಚ್ 19ನೇ ತಾರೀಕು ದೇವಾಲಯವನ್ನು ಭಕ್ತರ ದರ್ಶನಕ್ಕೆ ಮುಚ್ಚಲಾಯಿತು. ಹೀಗೆ ಮುಚ್ಚಿರುವುದರಿಂದ ಟಿಟಿಡಿಗೆ ಪ್ರತಿ ತಿಂಗಳು ಹತ್ತಿರ ಹತ್ತಿರ 200 ಕೋಟಿ ರುಪಾಯಿ ಆದಾಯ ಇಲ್ಲದಂತಾಗಿದೆ.
ಪ್ರತಿ ವರ್ಷ ಹುಂಡಿ ಹಣದ ಮೊತ್ತ 1000ದಿಂದ 1200 ಕೋಟಿ ರು.
"ಹುಂಡಿ, ಅರ್ಜಿತ ಸೇವೆ, ಕೂದಲು ಹರಾಜು, ಕೊಠಡಿಗಳಿಗೆ ಬಾಡಿಗೆಗೆ ಕೊಡುವುದು ಮತ್ತಿತರ ಮೂಲಗಳಿಂದ ನಮಗೆ ಆದಾಯ ಬರುತ್ತದೆ. ಕೊಠಡಿ ಬಾಡಿಗೆ, ಕೂದಲು ಹರಾಜು ಮತ್ತಿತರ ಆದಾಯವು ಅಲ್ಲಿಂದ ಅಲ್ಲೇ ಖರ್ಚಿಗೆ ಸರಿ ಹೋಗುತ್ತದೆ. ದೇವಾಲಯದ ಮುಖ್ಯ ಆದಾಯ ಹುಂಡಿ ಹಣ" ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ. ಪ್ರತಿ ವರ್ಷ ಭಕ್ತರು ನೀಡುವ ದೇಣಿಗೆ ಹಾಗೂ ಹುಂಡಿ ಹಣದ ಮೊತ್ತವು 1000ದಿಂದ 1200 ಕೋಟಿ ರುಪಾಯಿ ಆಗುತ್ತದೆ. "ನಾವು ಮಾತ್ರ ಕಷ್ಟದ ಸಮಯದಲ್ಲಿ ಇಲ್ಲ. ಇಡೀ ದೇಶ ಹಾಗೂ ವಿಶ್ವವೇ ಕಷ್ಟವನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ಭಕ್ತರ ದರ್ಶನಕ್ಕೆ ದೇವಾಲಯದಲ್ಲಿ ಅವಕಾಶ ಇಲ್ಲ ಅಷ್ಟೇ. ಆದರೆ ದೇಗುಲ ನಿರ್ವಹಣೆ, ಪೂಜಾ ಕಾರ್ಯಕ್ರಮಗಳು ದೇವಾಲಯದ ರೀತಿ- ರಿವಾಜುಗಳಂತೆಯೇ ನಡೆದುಕೊಂಡು ಹೋಗುತ್ತಿದೆ. ನಾವು ದೇವಾಲಯಗಳ ನಿರ್ವಹಣೆ ಮಾಡಬೇಕು. ಪೂಜೆ ಆಯೋಜಿಸಬೇಕು. ಪೂರ್ವ ನಿಗದಿಯಂತೆ ಕಾರ್ಯಕ್ರಮಗಳು ನಡೆಯಬೇಕು. ಕೆಲಸ ಇರಲಿ, ಬಿಡಲಿ ಸಿಬ್ಬಂದಿಗೆ ವೇತನ ಪಾವತಿಸಬೇಕು. ನಾವು ಈಗಾಗಲೇ ಎರಡು ತಿಂಗಳು ನಿಭಾಯಿಸಿದ್ದೇವೆ" ಎಂದು ಸುಬ್ಬಾರೆಡ್ಡಿ ಮಾಹಿತಿ ನೀಡಿದ್ದಾರೆ.
ತಿಂಗಳಿಗೆ 125 ಕೋಟಿ ರುಪಾಯಿ ಖರ್ಚಾಗುತ್ತದೆ
ಟಿಟಿಡಿಯಿಂದ ದೇವಾಲಯದ ಭದ್ರತೆ, ನಿರ್ವಹಣೆ, ವೇತನ ಪಾವತಿಗೆ ತಿಂಗಳಿಗೆ 125 ಕೋಟಿ ರುಪಾಯಿ ಖರ್ಚಾಗುತ್ತದೆ. "ನಾವು ಮಾರ್ಚ್- ಏಪ್ರಿಲ್ ಗೆ ವೇತನ ಪಾವತಿ ಮಾಡಿದ್ದೀವಿ. ಮೇ ತಿಂಗಳ ಖರ್ಚು ನಿಭಾಯಿಸಲು ಸ್ವಲ್ಪ ಮೀಸಲು ಹಣ ಇದೆ. ಜೂನ್ ತಿಂಗಳಿಗೆ ಬೇರೆ ಆದಾಯ ಮೂಲದಿಂದ ಹಣ ಸಂಗ್ರಹಿಸ ಬೇಕಾಗುತ್ತದೆ. ಕೆಲವು ಸೂತ್ರ ಕಂಡುಕೊಂಡು, ಹಣಕ್ಕೆ ದಾರಿ ಮಾಡುತ್ತೇವೆ ಎಂಬ ನಂಬಿಕೆ ಇದೆ. ಈ ತನಕ ನಾವೇನು ಮಾಡಬಹುದು ಎಂಬ ಬಗ್ಗೆ ನನಗೂ ಗೊತ್ತಿಲ್ಲ. ಅದನ್ನು ಹೇಳಲಾರೆ. ಆ ದೇವರು ಅಲ್ಲಿಯ ತನಕ ಸನ್ನಿವೇಶವನ್ನು ತೆಗೆದುಕೊಂಡು ಹೋಗಲಾರ" ಎಂದಿರುವ ಅವರು, ಆಂಧ್ರಪ್ರದೇಶ ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.
2020- 21ನೇ ಸಾಲಿಗೆ 3310 ಕೋಟಿ ರುಪಾಯಿ ಬಜೆಟ್
ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರತಿ ದಿನ ಐವತ್ತು ಸಾವಿರದಿಂದ ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದರು. ವಾರ್ಷಿಕ ಬ್ರಹ್ಮೋತ್ಸವದಂಥ ವಿಶೇಷ ಸಂದರ್ಭದಲ್ಲಿ ನಾಲ್ಕರಿಂದ ಐದು ಲಕ್ಷ ಜನ ಸೇರುತ್ತಿದ್ದರು. ಭಕ್ತರು ನಗದು, ಚಿನ್ನ ಮತ್ತು ಬೆಳ್ಳಿ, ಆಭರಣ, ಆಸ್ತಿ ಮತ್ತು ಕೆಲವರು ಡಿಮ್ಯಾಟ್ ಷೇರುಗಳನ್ನು ಸಹ ನೀಡುತ್ತಿದ್ದರು. 2020- 21ನೇ ಸಾಲಿಗೆ ಟಿಟಿಡಿಯಿಂದ 3310 ಕೋಟಿ ರುಪಾಯಿ ಬಜೆಟ್ ಮಂಡಿಸಲಾಗಿದೆ. ಅದರಲ್ಲಿ ಭಕ್ತರಿಂದ ಅಂದಾಜು ಮಾಡಿರುವ ನಗದು ದೇಣಿಗೆ 1351 ಕೋಟಿ ರುಪಾಯಿ. ದೇವಾಲಯ ಟ್ರಸ್ಟ್ ನಿರೀಕ್ಷೆ ಮಾಡಿರುವ ಪ್ರಕಾರ, ಬ್ಯಾಂಕ್ ಗಳಲ್ಲಿನ ಡೆಪಾಸಿಟ್ ಮೇಲೆ ಬಡ್ಡಿ 706 ಕೋಟಿ ರುಪಾಯಿ. ವಿವಿಧ ಪೂಜೆಗಳ ಟಿಕೆಟ್ ಮಾರಾಟದಿಂದ 302 ಕೋಟಿ ರುಪಾಯಿ ಹಾಗೂ ಲಾಡು ಪ್ರಸಾದದ ಮಾರಾಟದಿಂದ 400 ಕೋಟಿ ರುಪಾಯಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಇನ್ನು ಹರಕೆ ತೀರಿಸಲು ಭಕ್ತರು ನೀಡುವ ತಲೆಗೂದಲಿನ ಹರಾಜಿನಿಂದ 106 ಕೋಟಿ ರುಪಾಯಿ ಆದಾಯ ನಿರೀಕ್ಷೆ ಇತ್ತು.