ತಿರುಮಲ ವೆಂಕಟೇಶ್ವರ ದೇಗುಲದ ಹುಂಡಿಗೆ ಒಂದೇ ದಿನದಲ್ಲಿ 1 ಕೋಟಿಗೂ ಹೆಚ್ಚು ಹಣ
ಲಾಕ್ ಡೌನ್ ತೆರವುಗೊಂಡ ನಂತರ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ತಿರುಮಲ ವೆಂಕಟೇಶ್ವರ ದೇವಾಲಯದ ಹುಂಡಿ ಆದಾಯ 1.02 ಕೋಟಿ ಮುಟ್ಟಿದೆ. ಶನಿವಾರದಂದು (ಸೆಪ್ಟೆಂಬರ್ 5, 2020) ಇಷ್ಟು ಮೊತ್ತದ ಹಣ ಸಂಗ್ರಹ ಆಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿಳಿಸಿದೆ.
ತಿರುಪತಿ ತಿಮ್ಮಪ್ಪನಿಗೆ 2 ಕೇಜಿಯ 20 ಚಿನ್ನದ ಬಿಸ್ಕೆಟ್ ಅರ್ಪಿಸಿದ ಅಪರಿಚಿತ ಭಕ್ತರು
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತಿಂಗಳುಗಟ್ಟಲೆ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ನಿಷೇಧವಿತ್ತು. ಆ ನಂತರ ಜೂನ್ 11ನೇ ತಾರೀಕಿನಂದು ದೇವಾಲಯವನ್ನು ಪುನರಾರಂಭ ಮಾಡಲಾಗಿತ್ತು. ಹೀಗೆ ದೇವಾಲಯ ಮತ್ತೆ ಆರಂಭವಾದ ಮೇಲೆ ಮೊದಲ ಬಾರಿಗೆ ಒಂದೇ ದಿನದಲ್ಲಿ ಹುಂಡಿಯ ಆದಾಯ 1 ಕೋಟಿ ರುಪಾಯಿ ಮೊತ್ತ ದಾಟಿದೆ.
13,486 ಭಕ್ತರು ದೇಗುಲಕ್ಕೆ ಭೇಟಿ
13,486 ಭಕ್ತರು ಶನಿವಾರದಂದು ದೇವಾಲಯಕ್ಕೆ ದರ್ಶನಕ್ಕೆ ತೆರಳಿದ್ದರು. ಅವರು ನೀಡಿದ ದೇಣಿಗೆಯನ್ನು ಭಾನುವಾರ ಎಣಿಕೆ ಮಾಡಲಾಯಿತು ಎಂದು ತಿಳಿಸಲಾಗಿದೆ. ಇನ್ನು ಆಗಸ್ಟ್ 28ನೇ ತಾರೀಕಿನಂದು ಟಿಟಿಡಿ ನಿರ್ಧಾರವೊಂದನ್ನು ಕೈಗೊಂಡಿದ್ದು, ವೆಂಕಟೇಶ್ವರ ದೇವಾಲಯವನ್ನೇ ಹೋಲುವ ದೇಗುಲವೊಂದನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ನಿರ್ಮಿಸಲು ತೀರ್ಮಾನಿಸಿದೆ.
ಎರಡು ಬ್ರಹ್ಮೋತ್ಸವ ನಡೆಯಲಿದೆ
ಕೊರೊನಾ ನಿಯಂತ್ರಣಕ್ಕೆ ಬಂದು, ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಮೇಲೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಇಂಥದ್ದೇ ದೇಗುಲವನ್ನು ಜಮ್ಮು ಮತ್ತು ಕಾಶ್ಮೀರ, ಮುಂಬೈ ಹಾಗೂ ಚೆನ್ನೈನಲ್ಲಿ ಕೂಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.ಈ ವರ್ಷ ಅಧಿಕ ಮಾದ ಬಂದಿರುವುದರಿಂದ ಎರಡು ಬ್ರಹ್ಮೋತ್ಸವ ನಡೆಯಲಿದೆ. ಒಂದು ಸೆಪ್ಟೆಂಬರ್ ನಲ್ಲಿ ಹಾಗೂ ಮತ್ತೊಂದು ಅಕ್ಟೋಬರ್ ನಲ್ಲಿ ನಡೆಯಲಿದೆ.
ಭಕ್ತರಿಗೆ ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ
ಲಾಕ್ ಡೌನ್ ಇರುವುದರಿಂದ ಮೊದಲ ಬ್ರಹ್ಮೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಎರಡನೆಯದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಟಿಟಿಡಿ ತಿಳಿಸಿದೆ. ಎರಡೂ ಬ್ರಹ್ಮೋತ್ಸವವು ತಲಾ ಒಂಬತ್ತು ದಿನಗಳ ಕಾಲ ನಡೆಯಲಿದೆ ಎಂದು ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅಧ್ಯಕ್ಷತೆಯ ಆಡಳಿತ ಮಂಡಲಿ ಮಾಹಿತಿ ನೀಡಿದೆ.