ಟೊಮೆಟೊ ದರ ಇನ್ನೂ 2 ತಿಂಗಳು ಇಳಿಕೆಯಾಗಲ್ಲ: Crisil ಸಂಶೋಧನೆ
ನಿರಂತರವಾಗಿ ಅಕಾಲಿಕ ಮಳೆ ಸುರಿಯುತ್ತಲೇ ಇರುವ ಕಾರಣದಿಂದಾಗಿ ಟೊಮೆಟೊ ದರವು ಸದ್ಯಕ್ಕೆ ಇಳಿಕೆ ಕಾಣಲ್ಲ ಎಂದು ಕ್ರಿಸಿಲ್ (Crisil) ಸಂಶೋಧನೆ ಹೇಳಿದೆ. ತರಕಾರಿ ಬೆಲೆಯು ಪ್ರಸ್ತುತ ಅತಿಯಾದ ಅಕಾಲಿಕ ಮಳೆಯ ಕಾರಣದಿಂದಾಗಿ ಏರಿಕೆ ಆಗಿದೆ ಎಂದು ಅಭಿಪ್ರಾಯ ಪಟ್ಟಿರುವ ಈ ಸಂಶೋಧನೆಯು ಟೊಮೆಟೊಗಳ ಬೆಲೆ ಇನ್ನೂ ಎರಡು ತಿಂಗಳವರೆಗೆ ಇಳಿಕೆ ಕಾಣುವುದಿಲ್ಲ, ಹೆಚ್ಚಾಗಿಯೇ ಇರಲಿದೆ ಎಂದಿದೆ.
ಈ ಬಗ್ಗೆ ಸಂಶೋಧನೆ ನಡೆಸಿರುವ ಕ್ರಿಸಿಲ್ (Crisil) ಸಂಸ್ಥೆಯು ಟೊಮೆಟೊ ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಕರ್ನಾಟಕದಲ್ಲಿ ಸ್ಥಿತಿಯು ಗಂಭೀರವಾಗಿದೆ. ಮಹಾರಾಷ್ಟ್ರದ ನಾಸಿಕ್ನಿಂದ ಟೊಮೆಟೊವನ್ನು ತರಿಸಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ನವೆಂಬರ್ ತಿಂಗಳಿನಲ್ಲಿ ಟೊಮೆಟೊ ದರವು ಶೇಕಡ 142 ರಷ್ಟಿ ಏರಿಕೆ ಕಂಡಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಜನವರಿಯಲ್ಲಿ ಕೊಯ್ಲು ಮಾರುಕಟ್ಟೆಗೆ ತಲುಪಲು ಆರಂಭ ಆಗುವವರೆಗೂ ಅಂದರೆ ಇನ್ನೂ ಸುಮಾರು 45-50 ದಿನಗಳವರೆಗೆ ಟೊಮೆಟೊ ದರವು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಗಳು ಇದೆ.
ಟೊಮೆಟೊ, ಹಾಲು ಬೆಲೆ ಏರಿಕೆ: ಮಧ್ಯಮ ವರ್ಗದ ಮೇಲೆ ಹಣದುಬ್ಬರ ಪ್ರಭಾವ ಹೀಗಿದೆ
ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ಪ್ರಮುಖ ಟೊಮೆಟೊ ಸರಬರಾಜು ಮಾಡುವ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಬೆಳೆಗೆ ಹಾನಿ ಉಂಟಾಗಿದೆ. ಇದರಿಂದಾಗಿ ಈ ಟೊಮೆಟೊ ಬೆಲೆಯು ಏರಿಕೆ ಆಗಿದೆ ಎಂದು ಸಂಶೋಧನೆಯು ಉಲ್ಲೇಖ ಮಾಡಿದೆ.
ಹೆಚ್ಚಿನ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆಗಳು ಹಾನಿ ಉಂಟಾಗಿದೆ. ರಾಜ್ಯದಲ್ಲಿ ವಾಡಿಕೆಗಿಂತಲೂ ಶೇಕಡ 105 ರಷ್ಟು ಮಳೆ ಆಗಿದೆ. ಆಂಧ್ರ ಪ್ರದೇಶದಲ್ಲಿ ಶೇಕಡ 40, ಮಹಾರಾಷ್ಟ್ರದಲ್ಲಿ ಶೇಕಡ 22 ಕ್ಕೂ ಅಧಿಕ ಮಳೆಯಾಗಿದೆ. ಈ ಭಾಗಗಳು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಟೊಮೆಟೊ ಪ್ರಮುಖ ಪೂರೈಕೆದಾರ ರಾಜ್ಯಗಳು ಆಗಿದೆ.
ಕಳೆದ ವರ್ಷಕ್ಕಿಂತ ಕಡಿಮೆ ಟೊಮೆಟೊ ಬೆಳೆ ಕೊಯ್ಲು
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ 70.12 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಬೆಳೆಯನ್ನು ಉತ್ಪಾದನೆ ಮಾಡಲಾಗಿತ್ತು. ಆದರೆ ಈ ವರ್ಷದಲ್ಲಿ 69.52 ಲಕ್ಷ ಮೆಟ್ರಿಕ್ ಟನ್ ಟೊಮೆಟೊ ಬೆಳೆ ಉತ್ಪಾದನೆಯಾಗಿದೆ. ನವೆಂಬರ್ನಲ್ಲಿ 19.62 ಲಕ್ಷ ಟನ್, ಅಕ್ಟೋಬರ್ನಲ್ಲಿ 14.79 ಲಕ್ಷ ಟನ್, ಡಿಸೆಂಬರ್ನಲ್ಲಿ 17.21 ಲಕ್ಷ ಟನ್ ಟೊಮೆಟೊ ಕೊಯ್ಲು ಆಗಲಿದೆ. ಕಳೆದ ವರ್ಷಕ್ಕಿಂತ ಸುಮಾರು 2 ಲಕ್ಷ ಟನ್ ನಷ್ಟು ಟೊಮೊಟೊ ಕಡಿಮೆ ಆಗಿರುವುದು ಬೆಲೆ ಏರಿಕೆ ಕಾರಣ ಎಂದು ಕೃಷಿ ಇಲಾಖೆ ಹೇಳಿದೆ.
ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಟೊಮೆಟೊ ಬೆಲೆ ರೂ. ಪ್ರತಿ ಕೆಜಿಗೆ 75, ಆದರೆ ಇತರ ಕೆಲವು ದಕ್ಷಿಣದ ನಗರಗಳಲ್ಲಿ ಬೆಲೆಯು ಇದಕ್ಕಿಂತ ಕೊಂಚ ಕಡಿಮೆ ಆಗಿದೆ. ಆದರೆ ಇನ್ನು ಕೆಲವು ಪ್ರದೇಶಗಳಲ್ಲಿ, ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅತೀ ಅಧಿಕವಾಗಿದೆ. ಒಂದು ಕಡೆ ಕಡೆಮೆ ಇಳುವರಿಯಿಂದ ರೈತರು ನಷ್ಟ ಅನುಭವಿಸಿದರೆ, ಮತ್ತೊಂದು ಕಡೆ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ರಾಜ್ಯಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದೊಂದು ತಿಂಗಳಿನಿಂದ ನಿರಂತವಾಗಿ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ.
ಹಬ್ಬದ ಸೀಸನ್: ಈರುಳ್ಳಿ, ಟೊಮೆಟೊ ಬೆಲೆ ಭಾರೀ ಏರಿಕೆ
ನೆರೆಯ ಮಹಾರಾಷ್ಟ್ರದಲ್ಲಿ ಟೊಮೆಟೊ ಬೆಳೆ ಸಿಕ್ಕರೆ ಮಾತ್ರ ದರ ಇಳಿಕೆಯಾಗಲಿದೆ. ಇಲ್ಲದಿದ್ದರೆ ಇನ್ನಷ್ಟು ದಿನ ದರ ಏರುವ ಸಾಧ್ಯತೆಯಿದೆ. ಸದ್ಯ ಹೋಲ್ಸೇಲ್ 60 ರೂ.ನಿಂದ 80 ರೂ. ಟೊಮೆಟೊ ಮಾರಾಟವಾದರೆ, ರೀಟೇಲ್ 100ರಿಂದ 120 ರೂ.ವರೆಗೂ ಮಾರಾಟವಿದೆ. ಹೀಗಾಗಿ ಜನರ ಬಾಯಿ ಕಹಿ ಮಾಡುತ್ತಿರುವ ಟೊಮೆಟೊ ಜೊತೆಗೆ ಇತರೆ ತರಕಾರಿಗಳ ಬೆಲೆವೂ ದುಬಾರಿಯಾಗಿದೆ.