Union Budget 2020: ದೇಶದ ಪ್ರಮುಖ ಉದ್ಯಮಿಗಳ ಜತೆ ಪ್ರಧಾನಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಮುಖ ಉದ್ಯಮಿಗಳ ಜತೆಗೆ ಸಭೆ ನಡೆಸಿದರು. ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ, ಅದಾನಿ ಗ್ರೂಪ್ ಸ್ಥಾಪಕ ಗೌತಮ್ ಅದಾನಿ, ಜೆಎಸ್ ಡಬ್ಲ್ಯು ಗ್ರೂಪ್ ನ ಅಧ್ಯಕ್ಷ ಸಜ್ಜನ್ ಜಿಂದಾಲ್, ರಿಲಯನ್ಸ್ ಇಂಡಸ್ಟ್ರೀ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತಿತರರು ಪಾಲ್ಗೊಂಡಿದ್ದರು. 2020-21ರ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಈ ಸಭೆ ನಡೆಸಿದರು.
ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ನೇ ತಾರೀಕು ಪ್ರಸ್ತುತ ಪಡಿಸಲಾಗುತ್ತದೆ. ದೇಶದ ಆರ್ಥಿಕ ಹಿಂಜರಿತ, ಹೂಡಿಕೆ ಕೊರತೆ ಮತ್ತು ನಿರುದ್ಯೋಗದ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಮಹತ್ತರವಾದದ್ದಾಗಿದೆ. ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರುವುದೂ ಸೇರಿ ವಿವಿಧ ಕ್ರಮಗಳನ್ನು ಕೈಗೊಂಡರೂ ಆರ್ಥಿಕತೆಯಲ್ಲಿ ಚೇತರಿಕೆ ಕಾಣುತ್ತಿಲ್ಲ.
ವಿವಿಧ ವಲಯಗಳ ಉದ್ಯಮಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಿದರು. ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ. ಕಳೆದ ವಾರ ಪ್ರಧಾನಿ ಮೋದಿ ಅವರು ಕೊಟಕ್ ಮಹೀಂದ್ರಾ ಬ್ಯಾಂಕ್ ನ ಉದಯ್ ಕೊಟಕ್, ಎಸ್ ಬಿಐನ ಅಧ್ಯಕ್ಷ ರಜನೀಶ್ ಕುಮಾರ್ ಮತ್ತಿತರರನ್ನು ಭೇಟಿಯಾಗಿ, ವ್ಯಾಪಾರದ ವಾತಾವರಣ ಉತ್ತಮಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ಬಗ್ಗೆ ಚರ್ಚೆ ನಡೆಸಿದ್ದರು.