ಎಲ್ಐಸಿ ಮುಖ್ಯಸ್ಥರಾಗಿ ಖಾಸಗಿ ವಲಯದ ವೃತ್ತಿಪರರ ನೇಮಕಾತಿಗೆ ಕೇಂದ್ರ ಚಿಂತನೆ!
ಭಾರತದ ಅತೀ ದೊಡ್ಡ ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮುಖ್ಯಸ್ಥರ ಸ್ಥಾನಕ್ಕೆ ಖಾಸಗಿ ವಲಯದ ವೃತ್ತಿಪರರನ್ನು ನೇಮಕ ಮಾಡಲು ಸರ್ಕಾರವು ಚಿಂತನ ನಡೆಸಿದೆ. ಈ ಆಧುನಿಕ ಯುಗಕ್ಕೆ ತಕ್ಕುದಾಗಿ ಎಲ್ಐಸಿ ಕಾರ್ಯನಿರ್ವಹಣೆ ಅಗತ್ಯವಾಗಿದೆ ಎಂಬ ಕಾರಣಕ್ಕೆ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ. ಷೇರುಪೇಟೆಯಲ್ಲಿ ಎಲ್ಐಸಿಯು ಭಾರೀ ನಷ್ಟವನ್ನು ಕಾಣುತ್ತಿರುವ ನಡುವೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ದೇಶದ ಪ್ರಮುಖ ವಿಮಾ ಸಂಸ್ಥೆಯನ್ನು ಖಾಸಗಿ ವಲಯದ ತಜ್ಞರು ನಿರ್ವಹಣೆ ಮಾಡಲಿದ್ದಾರೆ. ಎಲ್ಐಸಿಯು ಸುಮಾರು 41 ಲಕ್ಷ ಕೋಟಿ ರೂಪಾಯಿ (500.69 ಬಿಲಿಯನ್ ಡಾಲರ್) ಆಸ್ತಿಯನ್ನು ಹೊಂದಿದ್ದು, ಸುಮಾರು 66 ವರ್ಷದ ಇತಿಹಾಸವನ್ನು ಹೊಂದಿರುವ ಸಂಸ್ಥೆಯಾಗಿದೆ.
LIC Q2 Results: ಎಲ್ಐಸಿ Q2 ವರದಿ: 15,952 ಕೋಟಿ ರೂ ನಿವ್ವಳ ಲಾಭ
"ಎಲ್ಐಸಿಯ ಸಿಇಒ ಸ್ಥಾನಕ್ಕೆ ಖಾಸಗಿ ವಲಯದ ತಜ್ಞರುಗಳು ಅರ್ಜಿ ಸಲ್ಲಿಸಲು ಸರಳವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರವು ಈ ಸ್ಥಾನಕ್ಕೆ ಅರ್ಹತಾ ಮಾನದಂಡವನ್ನು ಹೆಚ್ಚಿಸಲು ಮುಂದಾಗಿದೆ," ಎಂದು ಈ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಎಲ್ಐಸಿಯನ್ನು ನಿರ್ವಹಣೆ ಮಾಡುವ ಕೇಂದ್ರದ ವಿತ್ತ ಸಚಿವಾಲಯವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಷೇರುಪೇಟೆ ಹೂಡಿಕೆದಾರರಿಗೆ ಪಾಸಿಟಿವ್ ಬೆಳವಣಿಗೆ
ವಿಮಾ ಸಂಸ್ಥೆಯನ್ನು ಪ್ರಸ್ತುತ ಚೇರ್ಮನ್ ನಿರ್ವಹಣೆ ಮಾಡುತ್ತಾರೆ. ಆದರೆ ಮಾರ್ಚ್ನಲ್ಲಿ ಅವರ ಅಧಿಕಾರ ಅವಧಿ ಕೊನೆಯಾಗಲಿದೆ. ಅದಾದ ಬಳಿಕ ಸರ್ಕಾರವು ಖಾಸಗಿ ವಲಯದ ತಜ್ಞರನ್ನು ಸಂಸ್ಥೆಯ ಸಿಇಒ ಆಗಿ ನೇಮಕಾತಿ ಮಾಡಲಿದ್ದಾರೆ. "ಈ ಕ್ರಮವು ಷೇರುಪೇಟೆಯಲ್ಲಿ ಹೂಡಿಕೆ ಮಾಡುವುವರಿಗೆ ಪಾಸಿಟಿವ್ ಆಗಿ ಕಾಣಲಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾವ ಖಾಸಗಿ ಸಂಸ್ಥೆಯ ತಜ್ಞರನ್ನು ನೇಮಕಾತಿ ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಷ್ಟದೊಂದಿಗೆ ಷೇರುಪೇಟೆಗೆ ಇಳಿದಿದ್ದ ಎಲ್ಐಸಿ
ಕಳೆದ ಮೇ ತಿಂಗಳಿನಿಂದ ಎಲ್ಐಸಿ ಷೇರು ನಿರಂತರವಾಗಿ ಇಳಿಕೆಯಾಗುತ್ತಿದೆ. ಐಪಿಒ ಮೂಲಕ ಎಲ್ಐಸಿ ಷೇರುಪೇಟೆಗೆ ಎಂಟ್ರಿ ನೀಡಿದ್ದು, ಆರಂಭದಲ್ಲೇ ಕಡಿಮೆ ಬೆಲೆಗೆ ಲೀಸ್ಟಿಂಗ್ ಆಗಿದೆ. ಅದಾದ ಬಳಿಕ ನಿರಂತರವಾಗಿ ನಷ್ಟವನ್ನೇ ಕಾಣುತ್ತಿದೆ. ಷೇರು ಮೂಲ ಬೆಲೆಗಿಂತ ಸುಮಾರು ಶೇಕಡ 30ರಷ್ಟು ಕಡಿಮೆ ಬೆಲೆಯಲ್ಲಿ ಲೀಸ್ಟಿಂಗ್ ಆಗಿತ್ತು. ಹೂಡಿಕೆದಾರರು ಸುಮಾರು 2 ಲಕ್ಷ ಕೋಟಿ ರೂಪಾಯಿ ಅಥವಾ 24.31 ಬಿಲಿಯನ್ ಡಾಲರ್ ನಷ್ಟವನ್ನು ಅನುಭಿಸಿದ್ದಾರೆ.
ಮಾಜಿ ಹಣಕಾಸು ಕಾರ್ಯದರ್ಶಿ ಹೇಳುವುದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, "ಈ ಯೋಜನೆಗೆ ನಾನು ಒಪ್ಪುತ್ತೇನೆ. ಇದರಿಂದಾಗಿ ಸಂಸ್ಥೆಯಲ್ಲಿ ವೃತ್ತಿಪರತೆ ಹೆಚ್ಚಾಗುತ್ತದೆ. ಇದರಿಂದಾಗಿ ಯಾವುದೇ ನಷ್ಟ ಉಂಟಾಗಲಾರದು. ಇದು ಸೂಕ್ಷ್ಮವಾದ ನಡೆಯಾಗಿದೆ," ಎಂದು ತಿಳಿಸಿದ್ದಾರೆ. ಕಾನೂನಿನಲ್ಲಿನ ಬದಲಾವಣೆಯ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸರ್ಕಾರಿ ಸೆಕ್ಟರ್ಗಳಿಗಿಂತ ಖಾಸಗಿ ವಲಯದಲ್ಲಿ ಅಧಿಕ ವೇತನವನ್ನು ನೀಡಲಾಗುತ್ತದೆ. ಆದ್ದರಿಂದಾಗಿ ಈಗ ನೇಮಕಾತಿ ಕೊಂಚ ವಿಳಂಬವಾಗಬಹುದು. ಇನ್ನು ಈ ಹಿಂದೆಯೂ ಸರ್ಕಾರ ಖಾಸಗಿ ವಲಯದವರನ್ನು ನೇಮಕಾತಿ ಮಾಡಿಕೊಂಡಿದೆ. ಪ್ರಮುಖವಾಗಿ ಬ್ಯಾಂಕ್ಗಳಿಗೆ ಈ ನೇಮಕಾತಿ ಮಾಡಲಾಗಿದೆ.