ಕಾರ್ಮಿಕರ ಧರಣಿ ಮುಂದುವರಿಕೆ; ಟೊಯೊಟಾದಲ್ಲಿ ಉತ್ಪಾದನಾ ಚಟುವಟಿಕೆ ಬಂದ್
ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಸೋಮವಾರದಿಂದ (ನವೆಂಬರ್ 23, 2020) ಟೊಯೊಟಾ ಮೋಟಾರ್ ಕಾರ್ಪೊರೇಷನ್ ನಿಂದ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಲಾಗಿದೆ. ಕಾರ್ಮಿಕರ ಒಕ್ಕೂಟದ ಬಹುತೇಕ ಸದಸ್ಯರು ಧರಣಿ ಮುಂದುವರಿಸಿದ ಬೆಳವಣಿಗೆ ವರದಿ ಆಗಿದೆ.
ಬಿಡದಿಯಲ್ಲಿನ ಟೊಯೊಟಾ ಕಿರ್ಲೋಸ್ಕರ್ ನ ಎರಡೂ ಕೈಗಾರಿಕೆ ಘಟಕಗಳನ್ನು ನವೆಂಬರ್ ಹತ್ತರಂದು "ಲಾಕ್ ಔಟ್" ಘೋಷಣೆ ಮಾಡಲಾಗಿತ್ತು ಅದಕ್ಕೂ ಮುನ್ನ, ನೌಕರನ ಅಮಾನತು ಹಿಂಪಡೆಯಬೇಕು ಎಂಬ ಬೇಡಿಕೆ ಪೂರೈಸಲಿಲ್ಲ ಎಂದು ನೌಕರರ ಒಕ್ಕೂಟವು ಧರಣಿ ಆರಂಭಿಸಿತ್ತು.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ನ 1200 ಸಿಬ್ಬಂದಿ ಧರಣಿ
ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ನೌಕರರ ಧರಣಿಯನ್ನು ಹಾಗೂ ಆಡಳಿತದಿಂದ ಘೋಷಿಸಿದ್ದ "ಕಾನೂನುಬದ್ಧ ಲಾಕ್ ಔಟ್" ಎರಡನ್ನೂ ನವೆಂಬರ್ ಹತ್ತೊಂಬತ್ತರಂದು ನಿಷೇಧಿಸಿತು ಮತ್ತು ಕಾರ್ಯ ನಿರ್ವಹಣೆ ಆರಂಭಿಸುವುದಕ್ಕೆ ನಿರ್ದೇಶನ ನೀಡಿತು ಎಂದು ಟೊಯೊಟಾ ವಕ್ತಾರರು ತಿಳಿಸಿದ್ದಾರೆ.
ಟೊಯೊಟಾ ಕಿರ್ಲೋಸ್ಕರ್ ಲಾಕ್ ಔಟ್ ತೆರವು ಮಾಡಿದ ಮೇಲೆ ಕೆಲವೇ ತಂಡದ ಸದಸ್ಯರು ಕೆಲಸಕ್ಕೆ ಹಾಜರಾಗಿದ್ದರು ಎಂದು ಕಂಪೆನಿ ಹೇಳಿದೆ. "ಘಟಕದಲ್ಲಿ ಕಾರ್ಯ ನಿರ್ವಹಣೆ ಪರಿಣಾಮಕಾರಿಯಾಗಿ ಹಾಗೂ ಸಲೀಸಾಗಿ ನಡೆಯಬೇಕು ಎಂದಿದ್ದಲ್ಲಿ ಪ್ರತಿ ಪಾಳಿಯಲ್ಲಿ ಶೇಕಡಾ ತೊಂಬತ್ತರಷ್ಟು ಸಿಬ್ಬಂದಿ ಅಗತ್ಯ. ಈಗಿನ ಸನ್ನಿವೇಶದಲ್ಲಿ ಉತ್ಪಾದನಾ ಚಟುವಟಿಕೆ ನಡೆಸಲು ಸಾಧ್ಯವಿಲ್ಲ."