ಮದ್ಯದ ದೊರೆ ವಿಜಯ್ ಮಲ್ಯ ಇನ್ನೇನು ಭಾರತಕ್ಕೆ ಹಸ್ತಾಂತರ ಆಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನುವಷ್ಟರಲ್ಲಿ ಮಲ್ಯ ಹಸ್ತಾಂತರ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯು ಎದುರಾಗಿದೆ. ಇದಕ್ಕೆ ಕಾರಣ ಮಲ್ಯ ಮುಂದಿರುವ ಆಶ್ರಯದ ಆಯ್ಕೆ.
ಮಲ್ಯ ಮುಂದಿನ ಕಾನೂನು ಆಯ್ಕೆಗಳು ಮುಗಿದು ಹೋದವು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ವಿಜಯ್ ಮಲ್ಯ ಮುಂದೆ 'ರಾಜಾಶ್ರಯ'ದ ಆಯ್ಕೆ ಇದೆ ಎನ್ನಲಾಗಿದೆ.
ಮಲ್ಯ ಗಡಿಪಾರು ಮತ್ತಷ್ಟು ವಿಳಂಬ ಸಾಧ್ಯತೆ?
ವಿಜಯ್ ಮಲ್ಯರನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಿಸಲು 28 ದಿನಗಳಲ್ಲಿ ಹಸ್ತಾಂತರಿಸಬಹುದು ಎಂದೇ ಹೇಳಲಾಗಿತ್ತು. ಆದರೆ ಉದ್ಯಮಿ ಮಲ್ಯ ಬ್ರಿಟನ್ನ ರಾಜಾಶ್ರಯ ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಇವರ ಅರ್ಜಿ ವಿಚಾರಣೆಗೆ ಅಂಗೀಕರಿಸಿದರೆ, ಭಾರತಕ್ಕೆ ಆತನನ್ನು ಗಡಿಪಾರು ಮಾಡುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಮದ್ಯದ ದೊರೆಯ ಅರ್ಜಿಯನ್ನ ತಳ್ಳಿಹಾಕಿದ್ದ ಲಂಡನ್ ಸುಪ್ರಿಂಕೋರ್ಟ್
ಭಾರತಕ್ಕೆ ಹಸ್ತಾಂತರಕ್ಕೆ ಕುರಿತಾದ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿ ಇತ್ತೀಚೆಗಷ್ಟೇ ವಜಾಗೊಂಡಿತ್ತು. ಗೃಹ ಸಚಿವೆ ಪ್ರೀತಿ ಪಟೇಲ್ ಅವರ ಮುಂದಿನ ಆದೇಶದ ಅನುಸಾರ 28 ದಿನದೊಳಗೆ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿತ್ತು.
ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಪ್ರೇಟ್ ಕೋರ್ಟ್ ನೀಡಿದ್ದ ಹಸ್ತಾಂತರ ಆದೇಶ ಪ್ರಶ್ನಿಸಿ ಮಲ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಏ. 20ರಂದು ಕೋರ್ಟ್ ವಜಾಗೊಳಿಸಿತ್ತು. ಇದಾದ ನಂತರ ಅವರಿಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು 14 ದಿನಗಳ ಕಾಲಾವಕಾಶ ನೀಡಲಾಗಿತ್ತು. ಮಲ್ಯ ಅವರು ಈ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಮಲ್ಯಗೆ ಭಾರತಕ್ಕೆ ಹಸ್ತಾಂತರವಾಗದೇ ಬೇರೆ ದಾರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.
ಮಲ್ಯ ಮುಂದಿದೆ 'ರಾಜಾಶ್ರಯ' ಆಯ್ಕೆ
ಮಲ್ಯ ಮುಂದೆ ರಾಜಾಶ್ರಯದ ಆಯ್ಕೆ ಇದೆ ಎನ್ನಲಾಗಿದೆ. 'ರಾಜಾಶ್ರಯ ಎನ್ನುವುದು ಕಾನೂನಾತ್ಮಕ ಕಾರ್ಯತಂತ್ರವಾಗಿದೆ. ಮಲ್ಯ ಒಂದು ವೇಳೆ ರಾಜಾಶ್ರಯಕ್ಕೆ ಅರ್ಜಿ ಸಲ್ಲಿಸಿದರೆ, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ರಾಜಾಶ್ರಯ ಸಂಬಂಧಿ ಅರ್ಜಿಯನ್ನು ವಜಾಗೊಳಿಸಿದರೂ, ನಾನಾ ಹಂತಗಳಲ್ಲಿ ಮರು ಅರ್ಜಿಗಳನ್ನು ಸಲ್ಲಿಸಬಹುದು. ಈ ಪ್ರಕ್ರಿಯೆಯು ವರ್ಷಾನುಗಟ್ಟಲೆ ತೆಗೆದುಕೊಳ್ಳಬಹುದು''. ಎಂದು ಲಂಡನ್ ವಕೀಲರಾದ ಕರಿಷ್ಮಾ ವೋರಾ ಹೇಳಿದ್ದಾರೆ.
ಭಾರತದ ಆರ್ಥಿಕ ಪ್ಯಾಕೇಜ್ ಕುರಿತು ವ್ಯಂಗ್ಯವಾಡಿದ್ದ ಮಲ್ಯ
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ನಷ್ಟವನ್ನು ತಗ್ಗಿಸಲು 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಈ ಕುರಿತು ಟ್ವೀಟ್ ಮಾಡಿದ್ದ ಮಲ್ಯ ಆರ್ಥಿಕ ಪ್ಯಾಕೇಜ್ ಕುರಿತು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರಿಗೆ ಎಷ್ಟು ಹಣ ಬೇಕೋ ಅಷ್ಟು ಮುದ್ರಿಸಬಹುದು. ಆದರೆ ಸ್ಟೇಟ್ ಬ್ಯಾಂಕ್ನಿಂದ ಪಡೆದ ಸಾಲವನ್ನು ಹಿಂದಿರುಗಿಸಲು ಬಯಸುವ ನನ್ನಂತಹ ಸಣ್ಣ ಕೊಡುಗೆದಾರನನ್ನು ನಿರ್ಲಕ್ಷಿಸಬೇಕೇ? ಸಾಲವನ್ನು ವಾಪಸ್ ಪಡೆದು ಪ್ರಕರಣಕ್ಕೆ ಅಂತ್ಯ ಹಾಡುವಂತೆ ಮನವಿ ಮಾಡಿದ್ದರು.


Click it and Unblock the Notifications