ಸವಾಲುಗಳನ್ನು ಬಗೆಹರಿಸಲು ಬಜೆಟ್ ತನಕ ಕಾಯುವುದಿಲ್ಲ: ಸಚಿವೆ ನಿರ್ಮಲಾ
ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ, ಬಜೆಟ್ ತನಕ ಕಾಯುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಹೇಳಿದ್ದಾರೆ. ಕಳೆದ ಎರಡು ತಿಂಗಳಿಂದ ಜಿಎಸ್ ಟಿ ಸಂಗ್ರಹ ಒಂದು ಲಕ್ಷ ಕೋಟಿ ರುಪಾಯಿ ದಾಟಿದೆ. ಅದು ಮುಂದಿನ ದಿನಗಳಲ್ಲೂ ಹೀಗೇ ಉತ್ತಮವಾಗಿರಲಿದೆ ಎಂದಿದ್ದಾರೆ.
"ಸವಾಲುಗಳನ್ನು ಎದುರಿಸುತ್ತಿರುವ ವಲಯಗಳ ನೆರವಿಗಾಗಿ ಸರ್ಕಾರವು ನಿರಂತರವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ಬಜೆಟ್ ಗಾಗಿ ಕಾಯದೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ ಆರಂಭ ಸಾಧ್ಯತೆ
ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳು ಹಾಗೂ ಇಲ್ಲದಿರುವ ರಾಜ್ಯಗಳು ಎಂದು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿಲ್ಲ. ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಹಣವನ್ನು ತಡೆದಿಲ್ಲ. ಹದಿನಾಲ್ಕನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಣವನ್ನು ನೀಡಿದ್ದೇವೆ ಎಂದಿದ್ದಾರೆ.
ನವರಾತ್ರಿ ಮತ್ತು ದೀಪಾವಳಿ ಹಬ್ಬದ ವೇಳೆಯಲ್ಲಿ ಬ್ಯಾಂಕಿಂಗೇತರ ಸಂಸ್ಥೆಗಳು ಮತ್ತು ಬ್ಯಾಂಕ್ ಗಳ ಮೂಲಕ ಜನರಿಗೆ ಸಾಲ ದೊರೆಯುವಂತೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.