ಬಿಸಿ ಮುಟ್ಟಲಿದೆ..! ಎಲ್ಪಿಜಿ (LPG) ಸಬ್ಸಿಡಿ ರದ್ದು, ಪ್ರತಿ ತಿಂಗಳು ಸಿಲಿಂಡರ್ ಬೆಲೆ ಏರಿಕೆ
ಅಡುಗೆ ಅನಿಲಕ್ಕೆ(ಎಲ್ಪಿಜಿ) ಸಹಾಯಧನ ಇನ್ನುಮುಂದೆ ಇರುವುದಿಲ್ಲ ಹಾಗೂ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇನ್ನುಮುಂದೆ ಅಡುಗೆ ಮನೆಯಲ್ಲಿ ಬಿಸಿ ಏರಲಿದೆ! ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಹೆಚ್ಚು ಸದ್ದು ಮಾಡಲಿದೆ!! ಬಡವರಿಗೆ, ಮಧ್ಯಮ ವರ್ಗದವರಿಗೆ ಹೆಚ್ಚೆಚ್ಚು ಆಡಿಸಲಿದೆ!!!
ಅಡುಗೆ ಅನಿಲಕ್ಕೆ(ಎಲ್ಪಿಜಿ) ಸಹಾಯಧನ ಇನ್ನುಮುಂದೆ ಇರುವುದಿಲ್ಲ ಹಾಗೂ ಪ್ರತಿ ತಿಂಗಳು ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮುಂದಿನ 2018ರ ಮಾರ್ಚ್ ವೇಳೆಗೆ ಸಿಲಿಂಡರ್ ಗ್ಯಾಸ್ ಮೇಲಿನ ಸಹಾಯಧನ(ಸಬ್ಸಿಡಿ) ಸಂಪೂರ್ಣ ರದ್ದುಪಡಿಸುವಂತೆ ಹಾಗೂ ಎಲ್ಪಿಜಿ ದರ ಏರಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಸರ್ಕಾರ ಆದೇಶ ನೀಡಿದೆ ಎಂದರು.
'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ
ಸಿಲಿಂಡರ್ ಬೆಲೆ ಎಷ್ಟು ಏರಿಕೆ
ಬರುವ ಮಾರ್ಚ್ 2018ರ ನಂತರ ಪ್ರತಿ ತಿಂಗಳು ಸಿಲಿಂಡರ್ ದರವನ್ನು ರೂ. 4ರಂತೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕನುಗುಣವಾಗಿ ತೈಲ ಪೂರೈಕೆ ಸಂಸ್ಥೆಗಳಿಗೆ ಸರ್ಕಾರ ಸೂಚನೆ ರವಾನಿಸಿದೆ. ಎಲ್ಪಿಜಿ ಬೆಲೆ ಏರಿಕೆ ಸಿಲಿಂಡರ್ ತೂಕ ಆಧರಿಸಿ ನಿರ್ಧರಿಸಲಾಗುತ್ತದೆ. ರೂ. 4 ಏರಿಕೆ 14.2 ಕೆ.ಜಿ ತೂಕದ ಗ್ಯಾಸ್ ಗೆ ಅನ್ವಯವಾಗುತ್ತದೆ.
ಈಗಿನ ಸೌಲಭ್ಯವೇನು
ಕುಟುಂಬ ಒಂದಕ್ಕೆ ವರ್ಷಕ್ಕೆ 12 ಅಡುಗೆ ಅನಿಲ(ಎಲ್ಪಿಜಿ) ಸಿಲಿಂಡರ್ ಗಳನ್ನು ಸಹಾಯಧನದೊಂದಿಗೆ ನೀಡಲಾಗುತ್ತಿದೆ. 12ಕ್ಕಿಂತ ಹೆಚ್ಚು ಸಿಲಿಂಡರ್ ಖರೀದಿಸಬೇಕಿದ್ದರೆ ಮಾರುಕಟ್ಟೆಯ ದರದಲ್ಲಿ ಪಡೆಯಬೇಕಾಗುತ್ತದೆ.
ಹಿಂದಿನ ಆದೇಶ
ಈ ಹಿಂದಿನ ಯೋಜನೆಯಂತೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ ರೂ. 2 ಏರಿಕೆ ಮಾಡಲು ಆದೇಶಿಸಲಾಗಿತ್ತು. ಆದರೆ ಈ ಪ್ರಮಾಣದ ಏರಿಕೆಯಿಂದ ಸಬ್ಸಿಡಿ ರದ್ದಾಗುವುದಿಲ್ಲ. ಹೀಗಾಗಿ ಮಾರ್ಚ್ 2018ರ ಹೊತ್ತಿಗೆ ಏರಿಕೆ ಪ್ರಮಾಣವನ್ನು ರೂ. 4 ಏರಿಸಲು ಸೂಚಿಸಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಜಿಎಸ್ಟಿ ಮತ್ತು ಜಾಗತಿಕ ಪರಿಣಾಮ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಾಗುವ ಮುನ್ನ ಎಲ್ಪಿಜಿ ಸಿಲಿಂಡರ್ ಮೇಲೆ ತೆರಿಗೆ ಇರಲಿಲ್ಲ. ಆದರೆ ಜಿಎಸ್ಟಿ ಜಾರಿ ನಂತರ ಶೇ. 5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಅಡುಗೆ ಅನಿಲ ಸಿಲಿಂಡರ್ ದರ ಜಾಗತಿಕ ತೈಲ ದರಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.
ಬಡವರಿಗೆ ಬಿಸಿ ಮುಟ್ಟಲಿದೆ
ಎಲ್ಪಜಿ ಸಬ್ಸಿಡಿ ರದ್ದು ಹಾಗೂ ಪ್ರತಿ ತಿಂಗಳು ನಾಲ್ಕು ಏರಿಕೆ ಬಡವರಿಗೆ, ಮಧ್ಯಮ ವರ್ಗದವರಿಗೆ ಬಿಸಿ ಮುಟ್ಟಿಸಲಿದೆ. ಈಗಾಗಲೇ ಸಿಲಿಂಡರ್ ಗೆ ರೂ. 2 ದರದಂತೆ ಹತ್ತು ಬಾರಿ ಬೆಲೆ ಏರಿಸಲಾಗಿದೆ. ಇದೀಗ ರೂ. 4 ಏರಿಸುವಂತೆ ಆದೇಸ ಹೊರಡಿಸಲಾಗಿದೆ. ಸರ್ಕಾರದ ಸಬ್ಸಿಡಿ ಸಂಪೂರ್ಣ ರದ್ದಾಗುವವರೆಗೆ ಇಲ್ಲವೇ ಮುಂದಿನ ಆದೇಶದವರೆಗೆ ಎಲ್ಪಿಜಿ ದರ ಏರಿಕೆ ಜಾರಿಯಲ್ಲಿರಲಿದೆ.
ಕೇಂದ್ರದ ಉಜ್ವಲ ರಾಜ್ಯದ ಅನಿಲಭಾಗ್ಯ..?
ಕೇಂದ್ರ ಸರ್ಕಾರ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುತ್ತಿದೆ. ಕೇಂದ್ರದ ಉಜ್ವಲ ಯೋಜನೆ ಮಾದರಿಯಲ್ಲಿ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ(ಗ್ಯಾಸ್) ಪೂರೈಸಲಿದೆ. ಸಬ್ಸಿಡಿ ಅಡಿ ಎಲ್ಪಿಜಿ ಸಿಲಿಂಡರ್ ಬಳಸುತ್ತಿರುವವರ ಒಟ್ಟು ಸಂಖ್ಯೆ 18.11 ಕೋಟಿ ಆಗಿದ್ದು,
ಕೇಂದ್ರದ ಉಜ್ವಲ ಯೋಜನೆ ಅಡಿ 2.5 ಕೋಟಿ ಮಹಿಳೆಯರು ಉಚಿತ ಎಲ್ಪಿಜಿ ಸಿಲಿಂಡರ್ ಪಡೆಯುತ್ತಿದ್ದಾರೆ. ಆದರೆ ಮುಂದಿನ ಪರಿಸ್ಥಿತಿ ಕೊಂಚ ಗಂಭೀರವಾಗಿರಲಿದೆ.
ಜನಸಾಮಾನ್ಯರಿಗೆ ಹೊರೆ
ಈಗಾಗಲೇ ಜಿಎಸ್ಟಿ ಜಾರಿಯಿಂದಾಗಿ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ ಸಿಲಿಂಡರ್ ಮೇಲಿನ ಸಹಾಯಧನ ರದ್ದುಪಡಿಸಿದರೆ ಬಡವರಿಗೆ ಇನ್ನಷ್ಟು ಹೊರೆಯಾಗಲಿದೆ. ಬಡಜನರ ದಿನನಿತ್ಯದ ಖರ್ಚುಗಳು ಏರಿಕೆಯಾಗಲಿವೆ.
ಕೇಂದ್ರ ಸರ್ಕಾರ ಎಲ್ಪಿಜಿ ಸಬ್ಸಿಡಿ ರದ್ದುಪಡಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ.