ಡಿಸೆಂಬರ್ 31 ಡೆಡ್ ಲೈನ್, ಈ 7 ಸೇವೆಗಳಿಗಾಗಿ ತಪ್ಪದೇ ಆಧಾರ್ ಲಿಂಕ್ ಮಾಡಿ
ಸರ್ಕಾರದ ಆದೇಶದ ಪ್ರಕಾರ, ಸರ್ಕಾರದ ಕೆಲ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು. ಆಧಾರ್ ಜೋಡಣೆ ಮಾಡಲು ಇರುವು ಗಡುವು ಕೂಡ ತುಂಬಾ ಕಡಿಮೆ ಇದೆ.
ಸರ್ಕಾರದ ಆದೇಶದ ಪ್ರಕಾರ, ಸರ್ಕಾರದ ಕೆಲ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು. ಆಧಾರ್ ಜೋಡಣೆ ಮಾಡಲು ಇರುವು ಗಡುವು ಕೂಡ ತುಂಬಾ ಕಡಿಮೆ ಇದೆ.
ಹೀಗಾಗಿ 2018ರ ಸಾಲಿನಲ್ಲಿ ಆಗಬಹುದಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಆಧಾರ್ ಕಾರ್ಡ್ ಜೋಡಣೆ ಮಾಡುವ ಕೊನೆ ಗಡುವಿನ ಬಗ್ಗೆ ತಿಳಿದಿರಬೇಕಾಗುತ್ತದೆ. ಸರ್ಕಾರ ಡಿಸೆಂಬರ್ 31, 2017ರವರೆಗೆ ಗಡುವು ನೀಡಿದೆ. ಆದರೆ ಕೆಲ ಯೋಜನೆಗಳಿಗೆ ಮಾರ್ಚ್ 31, 2018ರವರೆಗೆ ಗಡುವು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?
12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯ ಕುರಿತಂತೆ ಸರ್ಕಾರವು ನಿಗದಿಪಡಿಸಿದ ವಿವಿಧ ಅಂತಿಮ ಗಡುವುಗಳ ಪಟ್ಟಿ ಇಲ್ಲಿ ಒದಗಿಸಲಾಗಿದೆ.
1. ಪ್ಯಾನ್ ನೊಂದಿಗೆ ಆಧಾರ್ ಜೋಡಣೆ
ಆದಾಯ ತೆರಿಗೆ ವೆಬ್ಸೈಟ್ ಗೆ ಭೇಟಿ ನೀಡಿ, ನಿಮ್ಮ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ತುಂಬಬೇಕು. ನಂತರ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಈ ಹಿಂದೆ ತೆರಿಗೆ ಸಲ್ಲಿಸಲು ಆಗಸ್ಟ್ 5, 2017ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಪ್ಯಾನ್ ಹಾಗೂ ಆಧಾರ್ ನಲ್ಲಿನ ಕಾಗುಣಿತ ದೋಷ, ತಪ್ಪು ವಿವರ, ಮಾಹಿತಿ ಹೊಂದಾಣಿಕೆಯಾಗದಿರುವ ಕಾರಣಗಳಿಂದ ಪಾನ್ ಜೊತೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದಿದ್ದಕ್ಕೆ ರಿಯಾಯಿತಿ ನೀಡಿತ್ತು.
ಇದೀಗ ಡಿಸೆಂಬರ್ 31, 2017ರವರೆಗೆ ನೀಡಿದ್ದ ಗಡುವನ್ನು ಮಾರ್ಚ್ 31, 2018ರವರೆಗೆ ವಿಸ್ತರಿಸಿದೆ.
ಸರ್ಕಾರ ಕಳೆದ ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ತರುವ ಮೂಲಕ (ಮೇ 11, 2017 ರ ಅಧಿಸೂಚನೆಯ ಮೂಲಕ ಕೆಲವು ವರ್ಗಗಳನ್ನು ಹೊರತುಪಡಿಸಿ) ಪ್ಯಾನ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
2. ಬ್ಯಾಂಕ್ ಖಾತೆ
ಗ್ರಾಹಕರು ಬ್ಯಾಂಕ್ ಶಾಖೆಗೆ ತೆರಳಿ ಇಲ್ಲವೆ ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು. ಆನ್ಲೈಲ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ ಅಪ್ಡೇಟ್ ಆಧಾರ್ (update aadhar) ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ವಿವರ ತುಂಬಿ ಸಬ್ಮಿಟ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಕಳುಹಿಸಲ್ಪಡುವ ಒಟಿಪಿ ಬಳಸಿ ಪಕ್ರಿಯೆ ಪೂರ್ಣಗೊಳಿಸಿ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಲು ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ.
3. ಮೊಬೈಲ್ ಫೋನ್
ಗ್ರಾಹಕರು ಆಧಾರ್ ಆಧಾರಿತ ಇ-ಕೆವೈಸಿ ಪರಿಶೀಲನೆ ಫೆಬ್ರವರಿ 6, 2018 ರೊಳಗೆ ಮಾಡಬೇಕು. ಮೊಬೈಲ್ ಸೇವಾ ಕೇಂದ್ರ ಅಥವಾ ಸ್ಟೋರ್ ಗಳಿಗೆ ಬೇಟಿ ನೀಡಿ ಇಲ್ಲವೆ ಗ್ರಾಹಕ ಸೇವಾ ಕೇಂದ್ರಗಳಿಗೆ ಕರೆ ಮಾಡಿ ಆಧಾರ್ ಲಿಂಕ್ ಮಾಡಬೇಕು.
2017 ರ ಫೆಬ್ರುವರಿ 6 ರ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ದೂರಸಂಪರ್ಕ ಇಲಾಖೆಯು (ಡಿಒಟಿ) ಆಧಾರ್ ಆಧಾರಿತ ಇ-ಕೆವೈಸಿ ಮೂಲಕ ಅಸ್ತಿತ್ವದಲ್ಲಿರುವ ಎಲ್ಲ ಮೊಬೈಲ್ ಚಂದಾದಾರರನ್ನು (ಪ್ರಿಪೇಡ್ ಮತ್ತು ಪೋಸ್ಟ್-ಪೇಡ್) ಮರು ಪರಿಶೀಲಿಸಲು ಟೆಲಿಕಾಂ ಆಪರೇಟರ್ ಗಳನ್ನು ಕೇಳಿದೆ. ಹೊಸ ಮೊಬೈಲ್ ಸಿಮ್ ಸಂಪರ್ಕಗಳನ್ನು ಖರೀದಿಸುವಾಗ ಆಧಾರ್ ವಿವರಗಳು ಒದಗಿಸುವುದು ಕಡ್ಡಾಯವಾಗಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಎಲ್ಲಾ ಅಸ್ತಿತ್ವದಲ್ಲಿರುವ ಮೊಬೈಲ್ ಚಂದಾದಾರರ ಮರು ಪರಿಶೀಲನೆಯ ಪ್ರಕ್ರಿಯೆಯು ಫೆಬ್ರವರಿ 6, 2018 ರೊಳಗೆ ಪೂರ್ಣಗೊಳ್ಳಬೇಕು. ಆಧಾರ್ ಲಿಂಕ್ ಮಾಡದ ಮೊಬೈಲ್ ಸಂಖ್ಯೆಗಳು ನಿಷ್ಕ್ರಿಯವಾಗುತ್ತವೆ ಎಂದು ಪತ್ರಿಕಾ ವರದಿಗಳು ಬಂದಿವೆ.
4. ವಿಮಾ ಪಾಲಿಸಿ (ಹಣಕಾಸು ಸೇವೆಗಳು)
ಹಣಕಾಸು/ವಿಮಾ ಸೇವಾ ಸಂಸ್ಥೆಗಳಿಗೆ ಆಧಾರ್ ಒದಗಿಸಲು ಡಿಸೆಂಬರ್ 31, 2017ರವರೆಗೆ ಗಡುವು ನೀಡಲಾಗಿದೆ. ನಿಮ್ಮ ಆಧಾರ್ ನ್ನು ಬ್ಯಾಂಕ್ ಖಾತೆಗಳು, ಕ್ರೆಡಿಟ್ ಕಾರ್ಡ್ಗಳು, ವಿಮಾ ಪಾಲಿಸಿಗಳು, ಎಲ್ಐಸಿ, ಸಣ್ಣ ಉಳಿತಾಯ ಯೋಜನೆಗಳಾದ ಸಾರ್ವಜನಿಕ ಪ್ರಾವಿಡೆಂಟ್ ಫಂಡ್, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದವುಗಳಿಗೆ ಜೋಡಿಸಬೇಕಾಗುತ್ತದೆ.
ನೀವು ಬ್ಯಾಂಕ್, ಗೃಹನಿರ್ಮಾಣ ಹಣಕಾಸು ಸಂಸ್ಥೆ, ಅಥವಾ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿಯಿಂದ ಸಾಲವನ್ನು ತೆಗೆದುಕೊಂಡರೆ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕು.
5. ಮ್ಯೂಚುವಲ್ ಫಂಡ್ ಪೊಲಿಯೋ
ಕ್ಯಾಮ್ಸ್ (CAMS) ಮತ್ತು ಕಾರ್ವಿ (Karvy) ಕಂಪ್ಯೂಟರ್ ಶೇರ್ ಮ್ಯೂಚುವಲ್ ಫಂಡ್/ಇಕ್ವಿಟಿ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಲು ಆನ್ಲೈನ್ ಸೌಲಭ್ಯ ಒದಗಿಸಿದೆ. ಡಿಸೆಂಬರ್ 31, 2017ರ ಒಳಗಾಗಿ ಆಧಾರ್ ಜೋಡಣೆಗೆ ಗಡುವು ನೀಡಲಾಗಿದೆ.
6. ಸಾಮಾಜಿಕ ಭದ್ರತೆ ಯೋಜನೆ
ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಆಧಾರ್ ವಿವರಗಳನ್ನು ಸಲ್ಲಿಸಲು ಡಿಸೆಂಬರ್ 31, 2017ರವರೆಗೆ ಗಡುವು ನೀಡಿದೆ. ಈ ಈ ಹಿಂದೆ 2017ರ ಸೆಪ್ಟೆಂಬರ್ 30 ರವರೆಗೆ ಗಡುವು ನೀಡಲಾಗಿತ್ತು.
ಎಲ್ಪಿಜಿ ಸಬ್ಸಿಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿವೇತನ ಯೋಜನೆಗಳು, ಪಿಂಚಣಿ ಸೌಲಭ್ಯ ಮತ್ತುಪಡಿತರ ಯೋಜನೆಯಡಿ ಆಹಾರ ಮುಂತಾದ ವಿವಿಧ ಪ್ರಯೋಜನಗಳಿಗೆ ಆಧಾರ್ ವಿವರ ಒದಗಿಸಬೇಕಾಗುತ್ತದೆ.
7. ಪೋಸ್ಟ್ ಆಫೀಸ್ ಯೋಜನೆ
ಪೋಸ್ಟ್ ಆಫೀಸ್ ಖಾತೆಯನ್ನು ತೆರೆಯಲು ಅಥವಾ ಈಗಾಗಲೇ ಇರುವ ಅಥವಾ ಎನ್ಎಸ್ಸಿ ಮತ್ತು ಪಿಪಿಎಫ್ ನಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಸಂಪರ್ಕವು ಕಡ್ಡಾಯವಾಗಿದೆ. ಇದಕ್ಕಾಗಿ ಇಂಡಿಯಾ ಪೋಸ್ಟ್ ವೆಬ್ಸೈಟ್ ಗೆ ಲಾಗಿನ್ ಆಗಿ. ಆಧಾರ್ ಸಂಪರ್ಕ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಬೇಕು. ನಂತರ ನೀವು ಖಾತೆಯನ್ನು ಹೊಂದಿರುವ ಪೋಸ್ಟ್ ಆಫೀಸಿಗೆ ಸಲ್ಲಿಸಬೇಕು.