ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರಕಾರದ ಬಜೆಟ್ ಇದೇ ಜುಲೈ 5 ರಂದು ಮಂಡನೆಯಾಗಲಿದೆ. ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಪ್ರಥಮ ಬಜೆಟ್ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರಕಾರದ ಬಜೆಟ್-2019 ಇದೇ ಜುಲೈ 5 ರಂದು ಮಂಡನೆಯಾಗಲಿದೆ. ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಪ್ರಥಮ ಬಜೆಟ್ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಮೋದಿ ನೇತೃತ್ವದ ಹಿಂದಿನ ಸರಕಾರದ ಅವಧಿಯಲ್ಲಿ, ಕಳೆದ ಫೆಬ್ರವರಿ ತಿಂಗಳಲ್ಲಿ ಮಧ್ಯಂತರ ಬಜೆಟ್ ಮಂಡನೆಯಾಗಿತ್ತು. ಆ ಸಂದರ್ಭದಲ್ಲಿ ಕೆಲ ಆದಾಯ ತೆರಿಗೆ ವಿನಾಯಿತಿಗಳನ್ನು ಘೋಷಣೆ ಮಾಡಲಾಗಿತ್ತು. ಆದರೂ ಈಗ ಮಂಡನೆಯಾಗಲಿರುವ ಪೂರ್ಣ ಪ್ರಮಾಣದ ಬಜೆಟ್ನಲ್ಲಿ ಮತ್ತಷ್ಟು ಆದಾಯ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಬಹುದೆಂಬ ನಿರೀಕ್ಷೆ ದೇಶದಲ್ಲಿ ಮನೆ ಮಾಡಿದೆ.
ಅಭಿವೃದ್ಧಿಗೆ ಪೂರಕ ಬಜೆಟ್ ನಿರೀಕ್ಷೆ
ಕಳೆದೊಂದು ವರ್ಷದ ಅವಧಿಯಲ್ಲಿ ವೇಗ ಕಳೆದುಕೊಂಡಿರುವ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಪೂರಕವಾಗುವಂಥ ಕ್ರಮಗಳನ್ನು ಹಾಗೂ ತೆರಿಗೆ ವಿನಾಯಿತಿಗಳನ್ನು ಈ ಬಾರಿ ಘೋಷಿಸಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
"ವೈಯಕ್ತಿಕ ತೆರಿಗೆದಾರರಿಗೆ ಮಧ್ಯಂತರ ಬಜೆಟ್ನಲ್ಲಿ ಹಲವಾರು ವಿನಾಯಿತಿಗಳನ್ನು ಈಗಾಗಲೇ ಘೋಷಿಸಲಾಗಿದೆ. ಹೀಗಾಗಿ ಈ ಬಜೆಟ್ನಲ್ಲಿ ಮತ್ತೆ ಅದೇ ರೀತಿಯ ವಿನಾಯಿತಿಗಳ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ." ಎನ್ನುತ್ತಾರೆ ಅಶೋಕ ಮಹೇಶ್ವರಿ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಟ್ಯಾಕ್ಸ್ ಹಾಗೂ ರೆಗ್ಯುಲೇಟರಿ ನಿರ್ದೇಶಕ ಸಂದೀಪ ಸೆಹಗಲ್.
ಬಜೆಟ್ನಲ್ಲಿ ನಿರೀಕ್ಷಿಸಬಹುದಾದ ಆದಾಯ ತೆರಿಗೆ ವಿನಾಯಿತಿ
ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ
ಪ್ರಸ್ತುತ ಇರುವ 2.5 ಲಕ್ಷ ರೂ. ವಾರ್ಷಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿತ್ತು.
"ಹೊಸ ಹಣಕಾಸು ಸಚಿವೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರೂ.ಗಳಿಗೆ ಹೆಚ್ಚಿಸಬಹುದು. ಇದರಿಂದ ತೆರಿಗೆದಾರರಿಗೆ ಕನಿಷ್ಠ 2,500 ರೂ.ಗಳಷ್ಟು ತೆರಿಗೆ ಉಳಿತಾಯವಾಗಬಹುದು" ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಓ ಅರ್ಚಿತ್ ಗುಪ್ತಾ.
2014 ರಲ್ಲಿ ಪೂರ್ಣ ಬಹುಮತದೊಂದಿಗೆ ಪ್ರಥಮ ಬಾರಿಗೆ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಅದರ ಪ್ರಥಮ ಬಜೆಟ್ನಲ್ಲಿ ಆಗಿನ ಹಣಕಾಸು ಸಚಿವ ಅರುಣ ಜೈಟ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದರು. ಈಗಲೂ ಎರಡನೇ ಅವಧಿಯ ಪ್ರಥಮ ಬಜೆಟ್ನಲ್ಲಿ ಮತ್ತೊಂದಿಷ್ಟು ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆ ಇದೆ.
ಎನ್ಪಿಎಸ್ ವಿತ್ಡ್ರಾವಲ್ ತೆರಿಗೆ ವಿನಾಯಿತಿ
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ನಲ್ಲಿ ಜಮೆಯಾದ ಒಟ್ಟು ಮೊತ್ತದ ಶೇ.60 ರಷ್ಟನ್ನು ಒಂದೇ ಬಾರಿಗೆ ಹಿಂಪಡೆದಲ್ಲಿ ಅದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಕೈಗೊಂಡಿತ್ತು. ಪ್ರಸ್ತುತ ನಿವೃತ್ತಿ ನಂತರ ಅಥವಾ 60 ವರ್ಷ ವಯಸ್ಸಾದ ನಂತರ ಎನ್ಪಿಎಸ್ ಚಂದಾದಾರರು ಹಿಂಪಡೆಯಬಹುದಾದ ಒಟ್ಟು ಮೊತ್ತದ ಶೇ.60 ರಲ್ಲಿ ಶೇ.40ಕ್ಕೆ ತೆರಿಗೆ ವಿನಾಯಿತಿ ಇದೆ ಹಾಗೂ ಇನ್ನುಳಿದ ಶೇ.20 ರಷ್ಟು ಮೊತ್ತಕ್ಕೆ ತೆರಿಗೆ ಪಾವತಿಸಬೇಕಿದೆ. ಈ ಯೋಜನೆಯಲ್ಲಿ ಇನ್ನುಳಿದ ಶೇ.40 ರಷ್ಟು ಮೊತ್ತವನ್ನು ಪಿಂಚಣಿಗಾಗಿ ಖಾತೆಯಲ್ಲಿಯೇ ಬಿಡಬೇಕಿರುತ್ತದೆ ಹಾಗೂ ಈ ಮೊತ್ತವು ಈಗಾಗಲೇ ಸಂಪೂರ್ಣ ತೆರಿಗೆ ವಿನಾಯಿತಿಗೆ ಒಳಪಟ್ಟಿದೆ.
ಈಗ ತೆರಿಗೆಗೆ ಒಳಪಟ್ಟಿರುವ ಶೇ.20 ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಘೋಷಣೆಯಾದಲ್ಲಿ ಎನ್ಪಿಎಸ್ ಮೂರು ಹಂತದ ತೆರಿಗೆ ವಿನಾಯಿತಿಗೆ ಒಳಪಟ್ಟ ಆಕರ್ಷಕ ಯೋಜನೆಯಾಗಲಿದೆ. ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹಾಗೂ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಮಾದರಿಯಲ್ಲಿ ಹೂಡಿಕೆ, ಸಂಗ್ರಹ ಹಾಗೂ ಹಿಂಪಡೆಯುವಿಕೆಯ ಮೂರೂ ಹಂತಗಳಲ್ಲಿನ ಮೊತ್ತಗಳು ತೆರಿಗೆ ಮುಕ್ತವಾಗಿರುತ್ತವೆ.
"ಎನ್ಪಿಎಸ್ ಹಿಂಪಡೆತಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ಸಂಪುಟದ ಪ್ರಸ್ತಾವನೆಯ ಬಗ್ಗೆ ಈವರೆಗೂ ಅಧಿಸೂಚನೆ ಹೊರಡಿಸಲಾಗಿಲ್ಲ. ಬಹುತೇಕ ಈ ಬಾರಿಯ ಬಜೆಟ್ನಲ್ಲಿ ಇದರ ಘೋಷಣೆಯಾಗಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆಯ ಅತ್ಯುತ್ತಮ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದ್ದು, ಅತಿ ಜನಪ್ರಿಯ ಯೋಜನೆಯೂ ಆಗಿದೆ. ಸರಕಾರ ಈ ಯೋಜನೆಯನ್ನು ಮತ್ತಷ್ಟು ಆಕರ್ಷಕವಾಗಿ ಮಾಡಲಿದೆ ಎಂಬುದು ಎಲ್ಲರ ನಿರೀಕ್ಷೆ. ಈ ಯೋಜನೆಯಡಿ ಪ್ರಸ್ತುತ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿಸಿಡಿ (1ಬಿ) ಅಡಿ 50 ಸಾವಿರ ರೂ. ಗಳವರೆಗೆ ತೆರಿಗೆ ವಿನಾಯಿತಿ ಇದೆ. ಇದನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿದರೆ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ." ಎನ್ನುತ್ತಾರೆ ಕ್ಲಿಯರ್ ಟ್ಯಾಕ್ಸ್ನ ಅರ್ಚಿತ್ ಗುಪ್ತಾ.
ಸೆಕ್ಷನ್ 80ಸಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಬರುವ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಪರಿಶೀಲನೆ ನಡೆಸುತ್ತಿದೆ ಎಂದು ಬ್ಲೂಮಬರ್ಗ್ ವರದಿ ಮಾಡಿತ್ತು. ಸದ್ಯಕ್ಕೆ ಈ ಮಿತಿ 1.5 ಲಕ್ಷ ರೂ.ಗಳಾಗಿದೆ.
"ಇತ್ತೀಚೆಗೆ ಹೆಚ್ಚುತ್ತಿರುವ ಹಣದುಬ್ಬರ ಪ್ರಮಾಣ ಹಾಗೂ ವೈದ್ಯಕೀಯ ವೆಚ್ಚಗಳ ಹಿನ್ನೆಲೆಯಲ್ಲಿ ಪ್ರಸ್ತುತ 80ಡಿ ಅಡಿಯಲ್ಲಿನ ತೆರಿಗೆ ವಿನಾಯಿತಿ ಮಿತಿಯನ್ನು 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳಿಗೆ ಹೆಚ್ಚಿಸಿದರೆ ಎಲ್ಲ ವರ್ಗದ ಜನರಿಗೆ ವೈದ್ಯಕೀಯ ವೆಚ್ಚ ನಿಭಾಯಿಸಲು ಅನುಕೂಲವಾಗಲಿದೆ ಎಂದು ಡೆಲಾಯ್ಟ್ ಹ್ಯಾಸ್ಕಿನ್ಸ್ ಆಂಡ್ ಸೆಲ್ಸ್ ಎಲ್ಎಲ್ಪಿ ಸಂಸ್ಥೆಯ ಡೈರೆಕ್ಟರ್ ನಿತಿನ್ ಬೈಜಲ್ ಹೇಳುತ್ತಾರೆ.
ಟ್ಯಾಕ್ಸ್ ಫ್ರೀ ಬಾಂಡ್ ಮತ್ತೆ ಜಾರಿ
ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಹಣ ಸಂಗ್ರಹಿಸುವ ಸಲುವಾಗಿ 2019-20ನೇ ಸಾಲಿನ ಬಜೆಟ್ನಲ್ಲಿ ಟ್ಯಾಕ್ಸ್ ಫ್ರೀ ಬಾಂಡ್ಗಳನ್ನು ಮರು ಜಾರಿ ಮಾಡುವ ಸಾಧ್ಯತೆಗಳಿವೆ. ಈ ಬಾಂಡ್ಗಳ ಮೇಲೆ ಗಳಿಸಲಾಗುವ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲವಾದ್ದರಿಂದ ಇವನ್ನು ಟ್ಯಾಕ್ಸ್ ಫ್ರೀ ಬಾಂಡ್ ಎಂದು ಕರೆಯಲಾಗುತ್ತದೆ. ಈ ರೀತಿಯ ಟ್ಯಾಕ್ಸ್ ಫ್ರೀ ಬಾಂಡ್ಗಳು ಸಾಮಾನ್ಯವಾಗಿ ದೀರ್ಘಾವಧಿಯ ಅಂದರೆ 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಪಕ್ವತಾ ಅವಧಿಯನ್ನು ಹೊಂದಿರುತ್ತವೆ. ಪ್ರಸ್ತುತ ಹೆದ್ದಾರಿಗಳ ನಿರ್ಮಾಣಕ್ಕೆ ಸರಕಾರ ಆದ್ಯತೆ ನೀಡಿರುವುದರಿಂದ ಈ ಬಾಂಡ್ ಮರು ಜಾರಿಯಾದಲ್ಲಿ ಇದರ ಮೊದಲ ಲಾಭ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾಗೆ ಸಿಗಲಿದೆ.
ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ (ಎಲ್ಟಿಸಿಜಿ) ತೆರಿಗೆ ವಿನಾಯಿತಿ ಮಿತಿ ಹೆಚ್ಚಳ
ಲಿಸ್ಟೆಡ್ ಇಕ್ವಿಟಿ ಶೇರುಗಳು ಹಾಗೂ ಇಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ ಯುನಿಟ್ಗಳ ಮಾರಾಟದ ಮೇಲಿನ ಎಲ್ಟಿಸಿಜಿ ಮಿತಿಯನ್ನು ಈಗಿನ ಹಣಕಾಸು ವರ್ಷವೊಂದಕ್ಕೆ ನಿಗದಿಪಡಿಸಲಾದ ಮಿತಿ 1 ಲಕ್ಷ ರೂ.ಗಳಿಂದ ಹೆಚ್ಚಿಸುವ ನಿರೀಕ್ಷೆ ಇದೆ. ಲಿಸ್ಟೆಡ್ ಇಕ್ವಿಟಿ ಶೇರುಗಳು ಹಾಗೂ ಇಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ ಯುನಿಟ್ಗಳ ಮಾರಾಟಕ್ಕೆ 2018 ಕ್ಕೂ ಮುನ್ನ ಯಾವುದೇ ಎಲ್ಟಿಸಿಜಿ ಇರಲಿಲ್ಲ. 2018 ರಲ್ಲಿ ಜಾರಿಗೊಳಿಸಲಾದ ಹಣಕಾಸು ಕಾಯ್ದೆಯನ್ವಯ ಸರಕಾರ 1 ಲಕ್ಷ ರೂ. ಮೀರಿದ ಎಲ್ಟಿಸಿಜಿ ಆದಾಯಕ್ಕೆ ತೆರಿಗೆ ವಿಧಿಸಲಾರಂಭಿಸಿತು. ಈ ಬದಲಾವಣೆಯು ಫೆಬ್ರವರಿ 1, 2019 ರಿಂದ ಜಾರಿಗೆ ಬಂದಿತು. ಅಂದರೆ ಜನೇವರಿ 31, 2018 ರವರೆಗಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಆದಾಯಗಳು ತೆರಿಗೆಯಿಂದ ಮುಕ್ತ ಎಂದರ್ಥ.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications