ಹಣದುಬ್ಬರದ ನಡುವೆಯೂ ಧನತ್ರಯೋದಶಿ ದಿನದಂದು ದೇಶಾದ್ಯಂತ 39 ಟನ್ ಚಿನ್ನ ಸೇಲ್!
ದೇಶದಲ್ಲಿ ಹಣದುಬ್ಬರ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಎಲ್ಲ ವಸ್ತುಗಳ ಬೆಲೆಯು ಭಾರೀ ಏರಿಕೆಯಾಗುತ್ತಿದೆ. ಆರ್ಬಿಐ ಕೂಡಾ ರೆಪೋ ದರ ಹೆಚ್ಚಳ ಮಾಡಿದ್ದು ಇದರಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೂ ಧನತ್ರಯೋದಶಿ ದಿನ ಚಿನ್ನದ ಖರೀದಿಯು ಭರದಿಂದ ಸಾಗಿದೆ. ಹಣದುಬ್ಬರದ ಒತ್ತಡದ ನಡುವೆಯೂ ಕಳೆದ ವರ್ಷಕ್ಕಿಂತ ಈ ಧನತ್ರಯೋದಶಿಯಲ್ಲಿ ಶೇಕಡ 35ರಷ್ಟು ಚಿನ್ನದ ಮಾರಾಟ ಏರಿಕೆಯಾಗಿದೆ. ದೇಶಾದ್ಯಂತ 39 ಟನ್ ಅಂದರೆ ಸುಮಾರು 19500 ಕೋಟಿ ರೂಪಾಯಿ ಮೌಲ್ಯದ ಚಿನ್ನ ಸೇಲ್ ಆಗಿದೆ.
ಈ ವರ್ಷದ ಧನತ್ರಯೋದಶಿ ಸಮಯದಲ್ಲಿ ಹೆಚ್ಚಾಗಿ ಹಗುರವಾದ ಹಾಗೂ ಹೆಚ್ಚು ತೂಕದ ಚಿನ್ನ ಆಭರಣವನ್ನು ಜನರು ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಎರಡು ದಿನ ಚಿನ್ನ ಭಾರಿ ಖರೀದಿಯಾಗಿದೆ.
Dhanteras : ಧನತ್ರಯೋದಶಿ ದಿನವೇ ಜನರು ಚಿನ್ನ ಖರೀದಿಸುವುದೇಕೆ?
ನವೆಂಬರ್ 15 ರಿಂದ ಡಿಸೆಂಬರ್ 15 ರವರೆಗೆ ನಡೆಯಲಿರುವ ಮದುವೆ ಸೀಸನ್ಗಾಗಿ ವಧುವಿನ ಆಭರಣಗಳನ್ನು ಜನರು ಧನತ್ರಯೋದಶಿ ದಿನವೇ ಖರೀದಿ ಮಾಡಿದ್ದಾರೆ. ಇನ್ನು ಆನ್ಲೈನ್ನಲ್ಲಿಯೂ ಚಿನ್ನದ ಖರೀದಿ ಸಾಗಿದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಶೇಕಡ 35-40ರಷ್ಟು ಅಧಿಕ ಚಿನ್ನ ಖರೀದಿಯಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಮದುವೆಗಾಗಿ ಈಗಲೇ ಚಿನ್ನ ಖರೀದಿ
"ಚಿನ್ನದ ಬೆಲೆಯಲ್ಲಿನ ಇತ್ತೀಚಿನ ಬದಲಾವಣೆ ಮತ್ತು ಅನುಕೂಲಕರವಾದ ಖರೀದಿ ದರವು ಜನರು ಚಿನ್ನವನ್ನು ಖರೀದಿ ಮಾಡಲು ಸಹಾಯಕವಾಗಿದೆ," ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ. "ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆಯು ಶೇಕಡ 35ರಷ್ಟು ಅಧಿಕವಾಗಿದೆ. ಮುಂಬೈನಲ್ಲಿ, ಮದುವೆಗಾಗಿ ಸಾಕಷ್ಟು ಚಿನ್ನವನ್ನು ಖರೀದಿ ಮಾಡಲಾಗಿದೆ," ಎಂದು ಕೂಡಾ ಸುರೇಂದ್ರ ಮೆಹ್ತಾ ತಿಳಿಸಿದ್ದಾರೆ.
ದೀಪಾವಳಿ: ಚಿನ್ನದ ಮೇಲೆ ಹೂಡಿಕೆ ಉತ್ತಮ ಸಮಯವೇ, ಮೋತಿಲಾಲ್ ಓಸ್ವಾಲ್ ಹೇಳುವುದೇನು?
ದಕ್ಷಿಣ ಭಾರತದಲ್ಲಿ ಅಧಿಕ ಚಿನ್ನ ಖರೀದಿ
ಆಭರಣಗಳನ್ನು ಹೆಚ್ಚಾಗಿ ತಯಾರಿ ಮಾಡಲಾಗುವ 22 ಕ್ಯಾರೆಟ್ ಚಿನ್ನದ ಬೆಲೆ ಧನತ್ರಯೋದಶಿ ದಿನ ಪ್ರತಿ 10 ಗ್ರಾಂಗೆ 45,857 ರೂಪಾಯಿ ಆಗಿದೆ. ದೇಶದ ಅತಿದೊಡ್ಡ ಚಿನ್ನದ ಗ್ರಾಹಕರು ದಕ್ಷಿಣ ಭಾರತದವರು ಆಗಿದ್ದಾರೆ. ಅಂದರೆ ದಕ್ಷಿಣ ಭಾರತದಲ್ಲಿ ಹೆಚ್ಚು ಚಿನ್ನ ಖರೀದಿಯಾಗಿದೆ. ಆದರೆ ಹಗುರ ಚಿನ್ನದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿತ್ತು.
"ನಮ್ಮ ಎಲ್ಲಾ ಮಳಿಗೆಗಳು ಶೇಕಡ 35ರಷ್ಟು ಹೆಚ್ಚಿನ ಮಾರಾಟವನ್ನು ಕಂಡಿವೆ," ಎಂದು ಆಭರಣ ಮಳಿಗೆ ಜೋಯಾಲುಕ್ಕಾಸ್ನ ಅಧ್ಯಕ್ಷ ಜಾಯ್ ಅಲುಕ್ಕಾಸ್ ಹೇಳಿದ್ದಾರೆ. "ಧನತ್ರಯೋದಶಿ ಶುಭ ಮುಹೂರ್ತ ಆರಂಭವಾದ ಶನಿವಾರ ಸಂಜೆಯಿಂದ ಆಭರಣ ಮಳಿಗೆಗಳು ತುಂಬಿ ಹೋಗಿದೆ. ಸಾದಾ ಚಿನ್ನದ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇದೆ," ಎಂದು ತಿಳಿಸಿದ್ದಾರೆ.
ಪುರುಷರ ಆಭರಣಗಳು ಕೂಡಾ ಖರೀದಿ
ಕಲ್ಯಾಣ್ ಜ್ಯುವೆಲರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್ ಮಾತನಾಡಿ, "ಮುಂಬರುವ ಮದುವೆಯ ಸೀಸನ್ಗೆ ಈಗಲೇ ಖರೀದಿ ನಡೆದಿದೆ. ಜನರು ಹೆಚ್ಚಾಗಿ ಮದುವೆಗೆ ಬೇಕಾಗುವ ಆಭರಣಗಳು ಖರೀದಿ ಮಾಡಿದ್ದಾರೆ. ಅಂತಹ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇದೆ," ಎಂದು ಹೇಳಿದ್ದಾರೆ. ಇನ್ನು ಕೋಲ್ಕತ್ತಾ ಮೂಲದ ಸೆಂಕೋ ಗೋಲ್ಡ್ & ಡೈಮಂಡ್ಸ್ ಪ್ರಕಾರ ಪುರುಷರ ಆಭರಣಗಳು, ವಿಶೇಷವಾಗಿ ಸರಗಳು ಮತ್ತು ಉಂಗುರಗಳ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ.
ಈ ದಿನವೇ ಏಕಾಗಿ ಚಿನ್ನ ಖರೀದಿ
ಧನತ್ರಯೋದಶಿ ಅಥವಾ ಧನ್ತೇರಸ್ ಎಂದು ಕರೆಯಲ್ಪಡುವ ಆಚರಣೆಯನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಣೆ ಮಾಡಲಾಗುತ್ತದೆ. ಈ ದಿನ ಮನೆಗೆ ಯಾವುದೇ ವಸ್ತುಗಳನ್ನು ತರುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ ಹಾಗೂ ಕುಬೇರನನ್ನು ಪೂಜಿಸುವ ಈ ಹಬ್ಬದಲ್ಲಿ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಹಬ್ಬವು ಹಿಂದೂಗಳಲ್ಲಿ ಅತೀ ಪ್ರಮುಖ ಹಬ್ಬವಾಗಿದೆ. ಅದರಲ್ಲೂ ವ್ಯಾಪಾರ ನಡೆಸುವವರು ಈ ಹಬ್ಬದ ವೇಳೆ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ದಿನದಂದು ಜನರು ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಈ ದಿನದಂದೇ ಚಿನ್ನ ಖರೀದಿ ಮಾಡುವುದು ಏಕೆ ಮಂಗಳಕರ ಎಂದು ನಂಬಲಾಗಿದೆ.