ಯಾವುದೇ ವ್ಯಕ್ತಿ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವಾಗ ಬ್ಯಾಂಕ್ ಭದ್ರತೆ ದೃಷ್ಟಿಯಿಂದ ಕೆಲವೊಂದು ಮಾಹಿತಿಯನ್ನು ಕೇಳುತ್ತದೆ. ಜೊತೆಗೆ ನಾಮಿನಿಯ ಹೆಸರನ್ನು ಸೂಚಿಸಲು ಹೇಳುತ್ತದೆ. ಬ್ಯಾಂಕ್ ಇದನ್ನು ಯಾಕೆ ಕೇಳಿದೆ ಮತ್ತು ನಾಮಿನಿಯನ್ನು ಆಯ್ಕೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಯಾವುದೇ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ಉಂಟಾಗಬಹುದಾದ ತೊಂದರೆಯನ್ನು ತಪ್ಪಿಸಲು ಬ್ಯಾಂಕ್ ಖಾತೆಯಲ್ಲಿನ ನಾಮನಿರ್ದೇಶನ (ನಾಮಿನಿ) ಸಹಾಯ ಮಾಡುತ್ತದೆ. ನೀವು ಬ್ಯಾಂಕ್ ಖಾತೆಯ ಜಂಟಿ ಖಾತೆದಾರರಾಗದೆ ಮೃತ ವ್ಯಕ್ತಿಯ ಎಟಿಎಂ ಕಾರ್ಡ್ ಮತ್ತು ಪಿನ್ ಸಂಖ್ಯೆಯನ್ನು ಹೊಂದಿದ್ದು, ಆ ಮೂಲಕ ಹಣವನ್ನು ಹಿಂಪಡೆಯುವ ಆಲೋಚನೆ ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಬಹುತೇಕ ಹಿರಿಯ ನಾಗರಿಕರು ತಮ್ಮ ಚಿಕ್ಕವಯಸ್ಸಿನಲ್ಲಿ ಬ್ಯಾಂಕ್ ಖಾತೆ ತೆರೆದಿರುತ್ತಾರೆ. ಆದರೆ, ನಾಮಿನಿ ಹೆಸರನ್ನು ಸೂಚಿಸಿರುವುದಿಲ್ಲ. ಯಾವುದೇ ವ್ಯಕ್ತಿ ಉಳಿತಾಯ ಖಾತೆ ತೆರೆದು ನಾಮನಿರ್ದೇಶನ ಮಾಡದೆ ಮೃತಪಟ್ಟರೆ ಏನು ಮಾಡಬೇಕು? ಉಳಿತಾಯ ಖಾತೆಯಿಂದ ಹಣವನ್ನು ಪಡೆಯಲು ಇಲ್ಲಿದೆ ನೋಡಿ ಕೆಲವು ಮಾರ್ಗಗಳು.
ಉಳಿತಾಯ ಮೊತ್ತವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ. ಇದರ ವಿವರಗಳು ಕೆಳಕಂಡಂತೆ ವಿವರಿಸಲಾಗಿದೆ.

1. ಮೃತ ವ್ಯಕ್ತಿಯೊಂದಿಗೆ ಜಂಟಿ ಖಾತೆ:
ಬದುಕಿದ್ದಾಗ ವ್ಯಕ್ತಿಯು ಬ್ಯಾಂಕ್ ಖಾತೆಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಜಂಟಿ ಖಾತೆದಾರರಾಗಿ ಹಂಚಿಕೊಂಡಿದ್ದರೆ ವ್ಯಕ್ತಿ ಮೃತಪಟ್ಟಾಗ ಎಲ್ಲ ಹಣವನ್ನು ಜಂಟಿ ಖಾತೆದಾರರಿಗೆ ವರ್ಗಾಯಿಸಲಾಗುತ್ತದೆ. ಅರ್ಜಿಯ ಪ್ರತಿ ಮತ್ತು ಮರಣ ಪ್ರಮಾಣ ಪತ್ರದ ಫೋಟೊಕಾಪಿಯನ್ನು ಬ್ಯಾಂಕ್ ಶಾಖೆಗೆ ಪ್ರಸ್ತುತಪಡಿಸಿದರೆ ಜಂಟಿ ಖಾತೆ ಮತ್ತು ನಾಮನಿರ್ದೇಶನದಿಂದ ಮೃತ ವ್ಯಕ್ತಿಯ ಹೆಸರನ್ನು ತೆಗೆದುಹಾಕಲಾಗುತ್ತದೆ. ಬ್ಯಾಂಕ್ ಖಾತೆಯಿಂದ ಮೃತ ವ್ಯಕ್ತಿಯ ಹೆಸರನ್ನು ತೆಗೆದುಹಾಕಲು ಬ್ಯಾಂಕ್ಗೆ ಈ ದಾಖಲೆ ಅವಶ್ಯಕವಾಗಿ ಬೇಕು.
2. ನಾಮಿನಿ ಇದ್ದರೆ..
ಒಂದು ವೇಳೆ ವ್ಯಕ್ತಿಯು ಖಾತೆ ತೆರೆಯುವಾಗ ನಾಮನಿರ್ದೇಶನ ಮಾಡಿದ್ದರೆ, ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಹಣವನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ. ನಾಮನಿರ್ದೇಶನ ಮತ್ತು ಮರಣ ಪ್ರಮಾಣಪತ್ರದ ಮೂಲ ಪ್ರತಿಯನ್ನು ಮೊದಲು ಬ್ಯಾಂಕ್ ಪರಿಶೀಲಿಸುತ್ತದೆ. ಅದಾಗ್ಯೂ, ನಾಮನಿರ್ದೇಶನದ ಕುರಿತು ಏನಾದರೂ ಅನುಮಾನ ಅಥವಾ ಸಂಶಯವಿದ್ದರೆ ಮೃತ ವ್ಯಕ್ತಿಯ ವಿಲ್ (ಮೃತ ವ್ಯಕ್ತಿಯ ಇಚ್ಛೆಯನ್ನು ವ್ಯಕ್ತಪಡಿಸುವ ಕಾನೂನು ದಾಖಲೆ) ಪ್ರತಿಯೊಂದನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯು ದೀರ್ಘವಾಗಿರುತ್ತದೆ ಮತ್ತು ಅನನುಕೂಲತೆಯನ್ನು ಉಂಟು ಮಾಡಬಹುದು. ನಾಮನಿರ್ದೇಶನದಲ್ಲಿ ನಮೂದಿಸಲಾದ ವ್ಯಕ್ತಿಗೆ ಸರಿಯಾಗಿ ಬ್ಯಾಂಕ್ ಬಾಕಿ ಹಣವನ್ನು ಪಾವತಿಸಿದೆ ಎಂದು ಖಚಿತಪಡಿಸಿಕೊಳ್ಳಲು ಇಬ್ಬರು ಸಾಕ್ಷಿಗಳು ಸಹ ಅಗತ್ಯವಿರುತ್ತಾರೆ.
3. ಯಾವುದೇ ನಾಮಿನಿ ಇಲ್ಲದಿದ್ದರೆ..
ಒಂದು ವೇಳೆ ಮೃತ ವ್ಯಕ್ತಿಯ ಖಾತೆಯು ನಾಮನಿರ್ದೇಶನವನ್ನು ಹೊಂದಿಲ್ಲದಿದ್ದರೆ ಅಥವಾ ಜಂಟಿ ಖಾತೆ ತೆರೆದಿದ್ದರೆ, ನೀವು ಸುದೀರ್ಘ ಕಾನೂನು ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ನೀವು ವಿಲ್ನ ಪ್ರತಿ ಅಥವಾ ಉತ್ತರಾಧಿಕಾರ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.
* ಕ್ಲೈಮ್ ಮಾಡಲು ಯಾರೂ ಮುಂದೆ ಬಾರದಿದ್ದರೆ
ಮೃತ ವ್ಯಕ್ತಿಯ ಬ್ಯಾಂಕ್ ಖಾತೆ ಮತ್ತು ಹಣದ ಮೇಲೆ ಯಾರೂ ಯಾವುದೇ ಕ್ಲೈಮ್ ಮಾಡದಿದ್ದರೆ ಈ ಸಂದರ್ಭದಲ್ಲಿ ಬ್ಯಾಂಕ್ ಆ ಖಾತೆಯನ್ನು ಮುಚ್ಚಬಹುದು ಅಥವಾ ನಿಷ್ಕ್ರಿಯ ಖಾತೆಯಾಗಿ ಪರಿವರ್ತಿಸಬಹುದು. ಒಂದೊಮ್ಮೆ ಯಾರಾದರೂ ''ಈ ಖಾತೆಯ ಹಣದ ಮೇಲೆ ನನಗೆ ಅಧಿಕಾರ ಇದೆ'' ಎಂದು ಕೋರ್ಟ್ ಮೂಲಕ ಸೂಕ್ತ ದಾಖಲೆಯನ್ನು ಬ್ಯಾಂಕಿಗೆ ಸಲ್ಲಿಸಿದರೆ ಮೃತ ವ್ಯಕ್ತಿಯ ಉಳಿಕೆ ಹಣವನ್ನು ಉತ್ತರಾಧಿಕಾರಿಗೆ ವರ್ಗಾಯಿಸಬಹುದು.
* ಉತ್ತರಾಧಿಕಾರ ಪ್ರಮಾಣಪತ್ರ ಎಂದರೇನು?
ವ್ಯಕ್ತಿಯು ಯಾವುದೇ ವಿಲ್ ಬರೆಯದೆ ಮೃತಪಟ್ಟರೆ ಕೋರ್ಟ್ ನೀಡುವ ಉತ್ತರಾಧಿಕಾರ ಪ್ರಮಾಣಪತ್ರ ತುಂಬಾ ಮುಖ್ಯವಾಗುತ್ತದೆ. ಉತ್ತರಾಧಿಕಾರಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ಈ ಪ್ರಮಾಣಪತ್ರವನ್ನು ಬಳಸಲಾಗುತ್ತದೆ. ಮೃತಪಟ್ಟ ವ್ಯಕ್ತಿಯ ಮುಂದಿನ ಉತ್ತರಾಧಿಕಾರಿ ನಾನೇ ಎಂದು ಆ ವ್ಯಕ್ತಿಯು ನ್ಯಾಯಾಲಯದಲ್ಲಿ ನಿರೂಪಿಸಬೇಕಾಗುತ್ತದೆ.


Click it and Unblock the Notifications