ಷೇರುಪೇಟೆ ಬಹಳ ಮಂದಿಗೆ ಒಂದು ರೀತಿಯಲ್ಲಿ ಗ್ಯಾಂಬ್ಲಿಂಗ್ ಇದ್ದಹಾಗೆ. ಬಿಡುಗಡೆಯಾದ ಸಿನಿಮಾ ಬಾಕ್ಸಾಫೀಸ್ನಲ್ಲಿ ಇಷ್ಟೇ ಕಲೆಕ್ಷನ್ ಮಾಡುತ್ತೆ ಎಂದು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲವೋ ಷೇರು ಮಾರುಕಟ್ಟೆಯಲ್ಲೂ ಈ ವರ್ಷ ಈ ಷೇರುಗಳು ಇಷ್ಟೇ ಓಡುತ್ತವೆ ಎಂದು ಹೇಳುವುದು ಅಸಾಧ್ಯ. ಷೇರುಪೇಟೆಯಲ್ಲಿ ಟ್ರೆಂಡಿಂಗ್ ಹೇಗೆ ಸಾಗುತ್ತದೆ ಎಂಬುದನ್ನು ನಾನಾ ಅಂಶಗಳು ಪ್ರಭಾವಿಸುತ್ತವೆ.
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಲ್ಲಿ ಎರಡು ಗುರಿಗಳಿರುತ್ತವೆ. ಕಿರು ಅವಧಿ ಮತ್ತು ದೀರ್ಘಾವಧಿ ಹೂಡಿಕೆ. ಕಿರು ಅವಧಿಗೆ ಹೂಡಿಕೆ ಮಾಡುವವರ ಮಾರುಕಟ್ಟೆ ಲೆಕ್ಕಾಚಾರ ಬೇರೆ ಇರುತ್ತದೆ. ದೀರ್ಘಾವಧಿ ಹೂಡಿಕೆ ಮಾಡುವವರು ಮಾರುಕಟ್ಟೆ ಅಳೆಯುವ ರೀತಿ ಬೇರೆ ಇರುತ್ತದೆ.
ಹೂಡಿಕೆಯ ಕ್ಷೇತ್ರ ಎಷ್ಟು ಮುಖ್ಯ?
ಯಾವುದೇ ಕಂಪನಿಯ ಷೇರು ಮೌಲ್ಯವನ್ನು ಅದರ ಆದಾಯ, ಲಾಭ, ಭವಿಷ್ಯದ ಸ್ಥಿತಿ ಇವು ಪ್ರಮುಖವಾಗಿ ನಿರ್ಧರಿಸುವುದು. ಒಂದು ಕಂಪನಿಯ ಭವಿಷ್ಯ ಹೇಗೆ ಸಾಗುತ್ತದೆ ಎಂಬುದನ್ನು ಅಂದಾಜಿಸಲು ಆ ಕಂಪನಿಯ ಕ್ಷೇತ್ರದ ಸ್ಥಿತಿ ಹೇಗಿದೆ ಎಂಬುದು ಮುಖ್ಯ.
ಉದಾಹರಣೆಗೆ, ಎಚ್ಡಿಎಫ್ಸಿ ಬ್ಯಾಂಕ್ನ ಷೇರಿನ ಮೇಲೆ ಹೂಡಿಕೆ ಮಾಡಬೇಕೆಂದಿರುತ್ತೀರಿ ಎಂದಿಟ್ಟುಕೊಳ್ಳಿ. ಎಚ್ಡಿಎಫ್ಸಿ ಈಗ ಸಾಕಷ್ಟು ಲಾಭ ಮಾಡಿರಬಹುದು. ಆದರೆ, ಮುಂದಿನ ದಿನಗಳಲ್ಲೂ ಎಚ್ಡಿಎಫ್ಸಿ ಆದಾಯದ ಓಟ ಹೀಗೇ ಸಾಗುತ್ತದೆ ಎಂಬುದಕ್ಕೆ ಏನು ಖಾತ್ರಿ? ಈ ಸಂದೇಹ ನಿವಾರಣೆಗೆ ನೀವು ಬ್ಯಾಂಕಿಂಗ್ ವಲಯದ ಸ್ಥಿತಿ ಗತಿ ಹೇಗಿದೆ, ಮುಂದಿನ ದಿನಗಳಲ್ಲಿ ಹೇಗಾಗಬಹುದು ಎಂಬುದನ್ನು ಕಂಡುಕೊಳ್ಳಬೇಕು. ಈ ಕ್ಷೇತ್ರಕ್ಕೆ ಸರಕಾರ ನೀಡುತ್ತಿರುವ ಬೆಂಬಲ, ಜಾಗತಿಕವಾಗಿ ಇದಕ್ಕೆ ಸಂಬಂಧಿಸಿದ ಬೆಳವಣಿಗೆಗಳು, ಸುಸ್ತಿದಾರ ಸಮಸ್ಯೆ ಇತ್ಯಾದಿ ಅನೇಕ ಅಂಶಗಳು ಬ್ಯಾಂಕಿಂಗ್ ವಲಯದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಒಂದು ಕ್ಷೇತ್ರವನ್ನು ಸ್ಥೂಲವಾಗಿ ನೋಡುವ ಸೂಕ್ಷ್ಮತೆ ಇದ್ದರೆ ದೀರ್ಘಾವಧಿ ಹೂಡಿಕೆಯಲ್ಲಿ ನಿರಾತಂಕವಾಗಿ ತೊಡಗಿಸಿಕೊಳ್ಳಬಹುದು.
ತಜ್ಞರು ಹೇಳುವುದೇನು?
ರೀಸರ್ಚ್ ಅಂಡ್ ರ್ಯಾಂಕಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗು ನಿರ್ದೇಶಕ ಮನೀಶ್ ಗೋಯಲ್ ದೀರ್ಘಾವಧಿ ಹೂಡಿಕೆಯ ಬಗ್ಗೆ ಕೆಲ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಮನಿಕಂಟ್ರೋಲ್ ಜಾಲತಾಣಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮುಂದಿನ 5-10 ವರ್ಷಗಳಲ್ಲಿ ಭಾರತದಲ್ಲಿ ಉತ್ತಮ ಪ್ರಗತಿ ಕಾಣಬಹುದಾದ ಐದು ಪ್ರಮುಖ ಥೀಮ್ಗಳನ್ನು ಗುರುತಿಸಿದ್ದಾರೆ. ಒಂದೊಂದು ಥೀಮ್ನಲ್ಲೂ ಹಲವು ಕ್ಷೇತ್ರಗಳಿವೆ. ಈ ಯಾವುದಾದರೂ ಕ್ಷೇತ್ರಗಳ ಕಂಪನಿಗಳಲ್ಲಿ ಹಣ ತೊಡಗಿಸಿಕೊಂಡರೆ ಲಾಭದ ನಿರೀಕ್ಷೆ ಮಾಡಬಹುದು.
ಬೆಳವಣಿಗೆ ಕಾಣುವ ಐದು ಥೀಮ್ಗಳು
ಮನೀಶ್ ಗೋಯಲ್ ಅವರು ಹೇಳಿದ ಐದು ಥೀಮ್ಗಳು ಈ ಕೆಳಕಂಡಂತಿವೆ:
1) ಉಳಿತಾಯದ ಅರ್ಥೀಕರಣ: ಇದರಲ್ಲಿ ಖಾಸಗಿ ಬ್ಯಾಂಕಿಂಗ್, ಇನ್ಷೂರೆನ್ಸ್, ಅಸೆಟ್ ಮ್ಯಾನೇಜ್ಮೆಂಟ್, ಡೆಪಾಸಿಟರಿ ಮತ್ತು ರಿಜಿಸ್ಟ್ರಿ ಏಜೆಂಟ್- ಈ ವಲಯಗಳು ಬೆಳವಣಿಗೆ ಸಾಧಿಸಬಲ್ಲುವು.
2) ಅನುಭೋಗ (ಕನ್ಸಂಪಕ್ಷನ್): ಭಾರತದ ಅಗಾಧ ಜನಸಂಖ್ಯೆ. ಜೊತೆಗೆ ವೇಗವಾಗಿ ನಗರೀಕರಣವಾಗುತ್ತಿರುವುದು ಮತ್ತು ಸಂಪತ್ತು ಹೆಚ್ಚಳದಿಂದಾಗಿ ಜನರ ಅನುಭೋಗ ಹೆಚ್ಚುತ್ತದೆ. ಅನುಭೋಗ ಎಂದರೆ ಜನರ ಖರೀದಿ ಪ್ರಮಾಣ. ಈ ನಿಟ್ಟಿನಲ್ಲಿ ಆಟೊಮೋಟಿವ್ (ವಾಹನ), ಗ್ರಾಹಕ ತಂತ್ರಜ್ಞಾನ (ಕನ್ಸೂಮರ್ ಟೆಕ್), ಲೈಫ್ಸ್ಟೈಲ್, ಕನ್ಸೂಮರ್ ಎಲೆಕ್ಟ್ರಿಕಲ್ಸ್ ಮತ್ತು ಇ-ಕಾಮರ್ಸ್ ಕ್ಷೇತ್ರಗಳು ಒಳ್ಳೆಯ ಬೆಳವಣಿಗೆ ಸಾಧಿಸಬಹುದು.
3) ಡಿಜಿಟೈಸೇಶನ್: ಮೊಬೈಲ್ ಮತ್ತು ಇಂಟರ್ನೆಟ್ ಈಗ ದೇಶವ್ಯಾಪಿ ಎಲ್ಲೆಡೆ ಹೆಚ್ಚೆಚ್ಚು ತಲುಪುತ್ತಿದೆ. ಈ ಕಾರಣದಿಂದ ಇಂಟರ್ನೆಟ್ ಆಧಾರಿತ ಕಂಪನಿಗಳ ಉತ್ಪನ್ನಶೀಲತೆ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದ ಐಟಿ, ಆಟೊಮೇಶನ್ ಕ್ಷೇತ್ರಗಳಿಗೆ ಒಳ್ಳೆಯ ಪುಷ್ಟಿ ಸಿಗುತ್ತದೆ.
4) ಮ್ಯಾನುಫ್ಯಾಕ್ಚರಿಂಗ್: ಭಾರತದಲ್ಲಿ ತಯಾರಿಕಾ ಕ್ಷೇತ್ರಕ್ಕೆ ಸರಕಾರ ಅಸ್ಥೆ ವಹಿಸಿದೆ. ಜೊತೆಗೆ, ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಮಾಡುವುದರಿಂದ ಕಡಿಮೆ ವೆಚ್ಚವಾಗುತ್ತದೆ ಎಂಬುದು ಒಂದು ಪ್ರಮುಖ ಅಂಶ. ಅಲ್ಲದೇ, ತಯಾರಿಕೆಯ ವಿಚಾರದಲ್ಲಿ ಚೀನಾ ಮೇಲೆ ಅವಲಂಬಿತವಾಗುವುದು ಅಷ್ಟು ಸುರಕ್ಷಿತವಲ್ಲ, ಚೀನಾಗೆ ಪರ್ಯಾಯಗಳಿರಬೇಕೆಂದು ಜಾಗತಿಕ ಕಂಪನಿಗಳು ಯೋಚಿಸುತ್ತಿದ್ದು, ಅವುಗಳ ಚಿತ್ತ ಭಾರತದತ್ತ ನೆಟ್ಟಿದೆ. ಹೀಗಾಗಿ ಮನೀಶ್ ಗೋಯಲ್ ಅವರು ಭಾರತದಲ್ಲಿ ತಯಾರಿಕಾ ಕ್ಷೇತ್ರಕ್ಕೆ ಉತ್ತಮ ಭವಿಷ್ಯ ಇದೆ ಎಂದಿದ್ದಾರೆ.
ಯಂತ್ರೋಪಕರಣ, ವಿಶೇಷ ರಾಸಾಯನಿಕ, ಫಾರ್ಮಾ ಕ್ಷೇತ್ರಗಳು ಭಾರತದಲ್ಲಿ ಸಮೃದ್ಧವಾಗಿ ಬೆಳೆಯಬಹುದು ಎಂಬುದು ಗೋಯಲ್ ಅವರ ಅನಿಸಿಕೆ.
5) ಕ್ಲೀನ್ ಎನರ್ಜಿ: ವಾಹನಗಳಿಂದ ಹೊರಸೂಸುವ ಹೊಗೆಯ ಹಾನಿಯನ್ನು ತಪ್ಪಿಸಲು ಸರಕಾರ ಸ್ವಚ್ಛ ಇಂಧನಕ್ಕೆ ಒತ್ತು ಕೊಡುತ್ತಿದೆ. ಹೀಗಾಗಿ, ಗ್ರೀನ್ ಎನರ್ಜಿ, ಮರುಬಳಕೆ ಇಂಧನ ಕ್ಷೇತ್ರಗಳಿಗೆ ಉತ್ತಮ ಭವಿಷ್ಯ ಇದೆ. ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದ ಭವಿಷ್ಯ ಚೆನ್ನಾಗಿದೆ.
ಡಿಫೆನ್ಸ್ ಸೆಕ್ಟರ್
ಇದರ ಜೊತೆಗೆ ಭಾರತದಲ್ಲಿ ರಕ್ಷಣಾ ವಲಯದ ಭವಿಷ್ಯದ ನೋಟವೂ ಉತ್ತಮವಾಗಿದೆ. ಭಾರತದ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬನೆ ಮಾಡುವ ಉದ್ದೇಶದಿಂದ ಮುಂದಿನ ಐದು ವರ್ಷಗಳಲ್ಲಿ ಭಾರತದ ಮಿಲಿಟರಿ ಆಧುನೀಕರಣಕ್ಕೆ 130 ಬಿಲಿಯನ್ ಡಾಲರ್ (ಸುಮಾರು 10 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡುವ ನಿರೀಕ್ಷೆ ಇದೆ. ರಕ್ಷಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ಉತ್ಪಾದನೆ ಮಾಡುವ ಟಾಪ್ 5 ದೇಶಗಳಲ್ಲಿ ಭಾರತ ಇರಲಾಗುವಂತೆ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ, ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಸರಕಾರಾತ್ಮಕವಾಗಿ ಫಲ ನಿರೀಕ್ಷಿಸಬಹುದು ಎಂಬುದು ರೀಸರ್ಚ್ ಅಂಡ್ ರ್ಯಾಂಕಿಂಗ್ ಸಂಸ್ಥೆಯ ನಿರ್ದೇಶಕ ಮನೀಶ್ ಗೋಯಲ್ ಹೇಳುತ್ತಾರೆ.


Click it and Unblock the Notifications