ಸಾಮಾನ್ಯವಾಗಿ ಜನರು ಯಾವುದೇ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಿದಾಗ ಅಧಿಕ ಲಾಭ ನಿರೀಕ್ಷಿಸುತ್ತಾರೆ ಅಥವಾ ಡಿವಿಡೆಂಡ್ ಸಿಗುವ ಭರವಸೆ ಇಟ್ಟಿರುತ್ತಾರೆ. ಈಗಷ್ಟೇ ಷೇರುಪೇಟೆಗೆ ಪ್ರವೇಶ ಮಾಡುವ ಭರವಸೆಯ ಕಂಪನಿಯ ಷೇರನ್ನು ಖರೀದಿಸಿದರೆ ಬಹಳ ವೇಗವಾಗಿ ಹಣ ಬೆಳೆದು ಭಾರೀ ಲಾಭ ಪಡೆಯಬಹುದು ಎಂದು ಅನಿಸಬಹುದು. ಅದೇ ವೇಳೆ, ಹಳೆಯ ಕುದುರೆಗಳೆನಿಸಿದ ಮತ್ತು ಸಾಕಷ್ಟು ವರ್ಷಗಳಿಂದ ಲಾಭದಾಯಕ ವ್ಯವಹಾರ ಹೊಂದಿದ್ದು ಷೇರುಪೇಟೆಯಲ್ಲಿ ಸ್ಥಿರವಾಗಿ ಹಾಗು ನಿಧಾನವಾಗಿ ಬೆಳೆಯುತ್ತಿರುವ ಕಂಪನಿಗಳ ಷೇರನ್ನು ಖರೀದಿಸಿದರೆ ಉತ್ತಮ ಲಾಭಾಂಶ ಪಡೆಯಬಹುದಲ್ಲ ಎನಿಸಬಹುದು. ಈ ಎರಡರಲ್ಲಿ ಯಾವ ರೀತಿಯ ಷೇರುಗಳ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂಬ ಗೊಂದಲ ಯಾರಿಗಾದರೂ ಅನಿಸಬಹುದು.
ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಸಿ ಉತ್ತಮ ಲಾಭ ಪಡೆಯುವ ಸಂಸ್ಥೆಗಳು ತನ್ನ ಷೇರುದಾರರಿಗೆ ಲಾಭಾಂಶಗಳನ್ನು ಹಂಚುತ್ತವೆ. ಲಾಭ ಸಿಕ್ಕಾಗ ಅದನ್ನು ಷೇರುದಾರರಿಗೆ ಉಡುಗೊರೆಯಾಗಿ ಡಿವಿಡೆಂಡ್ಗಳನ್ನು ನೀಡಲಾಗುತ್ತದೆ. ಕೆಲ ಸಂಸ್ಥೆಗಳು ಒಂದೇ ವರ್ಷದಲ್ಲಿ ಹಲವು ಬಾರಿ ಲಾಭಾಂಶಗಳನ್ನು ಷೇರುದಾರರಿಗೆ ಕೊಡುತ್ತವೆ. ಷೇರುದಾರರಿಗೆ ಈ ಡಿವಿಡೆಂಡ್ಗಳು ಹೆಚ್ಚುವರಿ ಆದಾಯ ಮೂಲವಾಗಬಹುದು.
ರಿಲಾಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ವೇದಾಂತ ಲಿ, ಸ್ಟೀಲ್ ಅಥಾರಿಟಿ, ಬ್ರಿಟಾನಿಯಾ ಇಂಡಸ್ಟ್ರೀಸ್, ವಿಪ್ರೋ ಮೊದಲಾದ ಹಲವು ಸಂಸ್ಥೆಗಳು ತಮ್ಮ ಶೇರ್ಹೋಲ್ಡರ್ಸ್ಗೆ ಸಾಕಷ್ಟು ಬಾರಿ ದೊಡ್ಡ ಪ್ರಮಾಣದಲ್ಲಿ ಡಿವಿಡೆಂಡ್ಸ್ ನೀಡಿರುವುದು ಇದೆ. ಹೀಗಾಗಿ, ಈ ಸಂಸ್ಥೆಗಳ ಷೇರು ಮೌಲ್ಯ ಹೆಚ್ಚೇ ಇದ್ದರೂ ಬೇಡಿಕೆ ಸಾಮಾನ್ಯವಾಗಿ ಕುಗ್ಗುವುದಿಲ್ಲ.
ಎಫ್ಡಿಗಿಂತ ಉತ್ತಮ ಲಾಭ
ಸುರಕ್ಷಿತ ಹೂಡಿಕೆ ಆಯ್ಕೆ ಎನಿಸಿದ ನಿಶ್ಚಿತ ಠೇವಣಿಯಿಂದ ಸಿಗುವ ಲಾಭಕ್ಕಿಂತ ಷೇರು ಡಿವಿಡೆಂಡ್ಗಳು ಹೆಚ್ಚು ಲಾಭ ಕೊಡುತ್ತವೆ. ಆಗಲೇ ಹೇಳಿದಂತೆ ಷೇರುದಾರರಿಗೆ ಡಿವಿಡೆಂಡ್ ನೀಡುವ ಸಂಸ್ಥೆಗಳು ಷೇರುಪೇಟೆಯಲ್ಲಿ ಯಾವತ್ತೂ ದೊಡ್ಡ ಕುಸಿತ ಕಾಣುವುದಿಲ್ಲ. ದೀರ್ಘಾವಧಿಯಲ್ಲಿ ಈ ಸಂಸ್ಥೆಗಳ ಷೇರುಗಳು ಮೇಲುಗೈ ಸಾಧಿಸುತ್ತವೆ. ಒಂದು ಸಂಸ್ಥೆ ನೀಡುವ ಲಾಭಾಂಶಗಳು ಷೇರುದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಸಾಮಾನ್ಯವಾಗಿ ಸಂಸ್ಥೆ ತಾನು ಗಳಿಸುವ ಲಾಭಕ್ಕೆ ಅನುಗುಣವಾಗಿ ಡಿವಿಡೆಂಡ್ ನೀಡುತ್ತದೆ. ಲಾಭ ಹೆಚ್ಚಿದಷ್ಟೂ ಲಾಭಾಂಶ ಹೆಚ್ಚುತ್ತದೆ. ಲಾಭ ಕಡಿಮೆ ಆದರೆ ಡಿವಿಡೆಂಡ್ ಕಡಿಮೆ ಇರುತ್ತದೆ.
ಡಿವಿಡೆಂಡ್ ಮೇಲೆ ಎಷ್ಟು ತೆರಿಗೆ?
ಡಿವಿಡೆಂಡ್ ವಿಚಾರದಲ್ಲಿ ಇನ್ನೊಂದು ಅಂಶ ನೆನಪಿಟ್ಟುಕೊಳ್ಳಬೇಕು. ಅದು ತೆರಿಗೆ ವಿಚಾರ. 2020 ಏಪ್ರಿಲ್ 1ಕ್ಕೆ ಮುನ್ನ ಷೇರುದಾರರಿಗೆ ಸಿಗುವ ಡಿವಿಡೆಂಡ್ಗೆ ತೆರಿಗೆ ವಿಧಿಸಲಾಗುತ್ತಿರಲಿಲ್ಲ.. ಷೇರುದಾರರಿಗೆ ಡಿವಿಡೆಂಡ್ ಪಾವತಿ ಮಾಡುವ ಮುನ್ನ ಕಂಪನಿಗಳೇ ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ (ಡಿಡಿಟಿ) ಸರ್ಕಾರಕ್ಕೆ ಪಾವತಿಸುತ್ತಿದ್ದವು. ಅಂದರೆ ಪರೋಕ್ಷವಾಗಿ ಡಿವಿಡೆಂಡ್ಗಳಿಗೆ ತೆರಿಗೆ ಇತ್ತು. ಆದರೆ, ಎಲ್ಲಾ ಹಣಕಾಸು ಸ್ತರದ ಹೂಡಿಕೆದಾರರಿಗೆ ಏಕರೀತಿಯ ತೆರಿಗೆ ನಿಯಮವಿತ್ತು. ಸಣ್ಣ ಹೂಡಿಕೆದಾರರು ವಾಸ್ತವವಾಗಿ ಹೆಚ್ಚು ತೆರಿಗೆ ನೀಡುವಂಥ ವ್ಯವಸ್ಥೆ ಇತ್ತು.
ಆದರೆ, 2020-21ರ ಕೇಂದ್ರ ಬಜೆಟ್ನಲ್ಲಿ ಕೆಲ ನಿಯಮಗಳನ್ನು ಬದಲಿಸಲಾಯಿತು. ಹೂಡಿಕೆದಾರರ ಆದಾಯ ಮಟ್ಟಕ್ಕೆ ತಕ್ಕಂತೆ ಡಿವಿಡೆಂಡ್ಗಳ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಲಾಯಿತು. ಇದರಿಂದ ಕಡಿಮೆ ಆದಾಯ ಗುಂಪಿನ ಹೂಡಿಕೆದಾರರಿಗೆ ಹೆಚ್ಚು ಅನುಕೂಲವಾಯಿತು. ಹೆಚ್ಚು ಆದಾಯ ಗುಂಪಿನ ಹೂಡಿಕೆದಾರರು ತಮಗೆ ಡಿವಿಡೆಂಡ್ಗಳಿಗೆ ಹೆಚ್ಚು ತೆರಿಗೆ ಪಾವತಿಸುವಂತಾಯಿತು.
ಸರ್ಕಾರ ಇದೀಗ ಟಿಡಿಎಸ್ ಕಡಿತ ಮಾಡುತ್ತದೆ. ಅಂದರೆ ಮೂಲದಲ್ಲೇ ತೆರಿಗೆ ಮುರಿದುಕೊಳ್ಳುತ್ತದೆ. 5 ಸಾವಿರ ರೂಪಾಯಿ ಆದಾಯ ಮೀರುವ ಡಿವಿಡೆಂಡ್ಗೆ ಶೇ. 10ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ.
ಹೂಡಿಕೆ ಹೆಚ್ಚಿಸಿ
ಈ ತೆರಿಗೆ ನಿಯಮ ಹೊರತುಪಡಿಸಿದರೆ ಉಳಿದಂತೆ ಡಿವಿಡೆಂಡ್ ನೀಡುವ ಷೇರುಗಳು ಹೂಡಿಕೆದಾರರಿಗೆ ಉತ್ತಮ ಆದಾಯ ಮೂಲವಂತೂ ಹೌದು. ಈ ಡಿವಿಡೆಂಡ್ ಹಣವನ್ನು ಬಳಸದೇ ಹೆಚ್ಚುವರಿ ಷೇರುಗಳ ಖರೀದಿಗೆ ವಿನಿಯೋಗಿಸಿದರೆ ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದನ್ನೇ ಸ್ಮಾರ್ಟ್ ವೆಲ್ತ್ ಮ್ಯಾನೇಜ್ಮೆಂಟ್ ಎನ್ನುವುದು.
ಕೆಲ ತಜ್ಞರು ಇನ್ನೂ ಒಂದು ಸಲಹೆ ನೀಡುತ್ತಾರೆ. ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತ. ನಿಮ್ಮ ಹೂಡಿಕೆಯಲ್ಲಿ ಹೆಚ್ಚಿನ ಪಾಲು ಇಂಥ ಕಂಪನಿಗಳ ಮೇಲೇ ಇರಲಿ. ಇದರ ಜೊತೆಗೆ ಟ್ರೆಂಡಿಂಗ್ನಲ್ಲಿರುವ ಕಂಪನಿಗಳ ಷೇರುಗಳನ್ನೂ ಖರೀದಿಸಬಹುದು. ಇದು ರಿಸ್ಕ್ ಹೌದು. ಹೀಗಾಗಿ, ಕಡಿಮೆ ಹಣವನ್ನು ಇಂಥ ಕಂಪನಿಯ ಷೇರುಗಳ ಮೇಲೆ ಹೂಡಬಹುದು. ಆಗ ನಿಮ್ಮ ಹೂಡಿಕೆಗೆ ಒಂದು ಸಮತೋಲನ ಸಿಗುತ್ತದೆ. ಸ್ವಲ್ಪ ಅದೃಷ್ಟ ಖುಲಾಯಿಸಿದರೆ ಸಖತ್ ಲಾಭ ಸಿಗುತ್ತದೆ. ಒಂದು ವೇಳೆ ರಿಸ್ಕಿ ಕಂಪನಿಗಳ ಷೇರು ಕುಸಿತವಾದರೂ ನೀವು ಹೆಚ್ಚಿನ ಹೂಡಿಕೆ ಮಾಡಿಲ್ಲದಿರುವುದರಿಂದ ಅಂಥ ದೊಡ್ಡ ನಷ್ಟವೇನೂ ಆಗಲಾರದು. ರಿಸ್ಕ್ ತೆಗೆದುಕೊಳ್ಳುವುದು ಬೇಡವೆನಿಸಿದರೆ ಡಿವಿಡೆಂಡ್ ನೀಡುವ ಷೇರುಗಳ ಮೇಲೆ ಪೂರ್ಣ ಬಂಡವಾಳ ಹಾಕುವುದೇ ಸರಿ. ಅನೇಕ ಮ್ಯುಚುವಲ್ ಫಂಡ್ ಕಂಪನಿಗಳು ಇಂತಹ ತಂತ್ರ ಅನುಸರಿಸುತ್ತವೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications