ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
ಭಾರತದ ಬಿಲಿಯನೇರ್ ಗೌತಮ್ ಅದಾನಿಯ ಸಂಸ್ಥೆಯು ವಂಚನೆಯನ್ನು ಮಾಡಿದೆ ಎಂಬ ಬಗ್ಗೆ ಹಿಂಡನ್ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಸಂಸ್ಥೆಯಲ್ಲಿ ಹಲವಾರು ಬೆಳವಣಿಗೆಗಳು ಕಂಡು ಬಂದಿದೆ. ಅದಾನಿ ಸಂಸ್ಥೆಯ ಷೇರುಗಳು ನಿರಂತರವಾಗಿ ಕುಸಿಯುತ್ತಿದೆ. ಶುಕ್ರವಾರ ವಹಿವಾಟಿನ ಆರಂಭದಲ್ಲಿ ಅದಾನಿ ಷೇರುಗಳು ಶೇಕಡ 20ರಷ್ಟು ಇಳಿಕೆಯಾಗಿದೆ. ಈ ನಡುವೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ (ಎಸ್ಬಿಐ) ಸಂಸ್ಥೆಯಲ್ಲಿನ ಕೋಟ್ಯಾಂತರ ಜನರ ಉಳಿತಾಯ ರಿಸ್ಕ್ನಲ್ಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.
ಹಿಂಡನ್ಬರ್ಗ್ ಮಾಡಿರುವ ಆರೋಪದ ಮೇಲೆ ತನಿಖೆಯನ್ನು ನಡೆಸಬೇಕು ಎಂದು ಕಾಂಗ್ರೆಸ್ ಹಾಗೂ ಸಿಪಿಐಎಂ ಪಕ್ಷ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಆಗ್ರಹ ಮಾಡುತ್ತಿದೆ. ಈ ವಂಚನೆಯು ಭಾರತದ ಆರ್ಥಿಕ ಸ್ಥಿತಿಗೆಯೇ ಆಪತ್ತು ಉಂಟು ಮಾಡಬಹುದು. ಅದಾನಿ ಗ್ರೂಪ್ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಕಾರಣ ಭಾರತದ ಆರ್ಥಿಕತೆಯೇ ಬುಡಮೇಲಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಅದಾನಿ ಗ್ರೂಪ್ ಮೇಲೆ ಎಲ್ಐಸಿ, ಎಸ್ಬಿಐ ಸೇರಿದಂತೆ ಹಲವಾರು ಸಾರ್ವಜನಿಕ ಬ್ಯಾಂಕ್ಗಳು ಹೂಡಿಕೆಯನ್ನು ಮಾಡಿದೆ. ಅದಾನಿ ಗ್ರೂಪ್ ವಂಚನೆ ಸಾಬೀತಾಗಿ ಸಂಸ್ಥೆಯು ಸಂಪೂರ್ಣ ನಷ್ಟಕ್ಕೆ ಒಳಗಾದರೆ, ಈ ಬ್ಯಾಂಕ್ನಲ್ಲಿನ ಜನರ ಹೂಡಿಕೆಯು ಅಪಾಯದಲ್ಲಿರಬಹುದು ಎಂದು ಹೇಳಿಕೊಂಡಿದೆ. ವಿಪಕ್ಷಗಳ ಆರೋಪವೇನು, ಬ್ಯಾಂಕ್ಗಳು ಏನು ಹೇಳುತ್ತದೆ ತಿಳಿಯೋಣ ಮುಂದೆ ಓದಿ...
ವಿರೋಧ ಪಕ್ಷಗಳ ಆರೋಪ
ಅದಾನಿ ಸಂಸ್ಥೆ ಮಾಡಿದೆ ಎಂದು ಹೇಳಲಾದ ವಂಚನೆಯ ಬಗ್ಗೆ ಮಾಡಲಾಗಿರುವ ಹಿಂಡನ್ಬರ್ಗ್ ವರದಿಯು ಪ್ರಸ್ತುತ ವಿಪಕ್ಷಗಳ ದಾಳವಾಗಿದೆ. "ಮೋದಿ ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗಿನಿಂದ ಅದಾನಿ ಗ್ರೂಪ್ನ ಮುಖ್ಯಸ್ಥರು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆತ್ಮೀಯ ನಂಟನ್ನು ಹೊಂದಿದ್ದಾರೆ. ಎಲ್ಐಸಿ ಹಾಗೂ ಎಸ್ಬಿಐನಲ್ಲಿ ಅದಾನಿ ಹೂಡಿಕೆಗಳಿದೆ, ಇದರಿಂದಾಗಿ ಕೋಟ್ಯಾಂತರ ಜನರ ಉಳಿತಾಯ ಈಗ ಆಪತ್ತಿನಲ್ಲಿರಬಹುದು," ಎಂದು ಕಾಂಗ್ರೆಸ್ನ ವಕ್ತಾರರು ಹೇಳಿಕೊಂಡಿದ್ದಾರೆ.
ಕೋಟ್ಯಾಂತರ ಜನರ ಉಳಿತಾಯಕ್ಕೆ ಆಪತ್ತು
"ಎಲ್ಐಸಿ ಹಾಗೂ ಎಸ್ಬಿಐನಂತಹ ಸಂಸ್ಥೆಗಳು ಅದಾನಿ ಗ್ರೂಪ್ ಮೇಲೆ ಹೂಡಿಕೆ ಮಾಡಿದೆ. ಬೇರೆ ಬೇರೆ ಸಂಸ್ಥೆಗಳು ಖಾಸಗಿ ವಲಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವಾಗಲೂ ಈ ಸಂಸ್ಥೆಗಳು ಮಾತ್ರ ಅದಾನಿ ಗ್ರೂಪ್ಗೆ ಉದಾರವಾಗಿ ಹಣಕಾಸು ಒದಗಿಸಿದೆ. ಎಲ್ಐಸಿ ಶೇಕಡ 8ರಷ್ಟು ಈಕ್ವಿಟಿಯನ್ನು ಸಂಸ್ಥೆಯು ಹೊಂದಿದೆ," ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. "ಅದಾನಿ ಗ್ರೂಪ್ ವಿರುದ್ಧದ ಈ ಆರೋಪವು ಸಾಬೀತಾದರೆ ಇದು ತಮ್ಮ ಭವಿಷ್ಯಕ್ಕಾಗಿ ಎಲ್ಐಸಿ ಹಾಗೂ ಎಸ್ಬಿಐನಲ್ಲಿ ಉಳಿತಾಯ ಮಾಡಿಕೊಂಡು ಬಂದಿರುವ ಕೋಟ್ಯಾಂತರ ಭಾರತೀಯರ ಜೀವನವನ್ನೇ ನಾಶ ಮಾಡಲಿದೆ," ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಮ್ ಯೆಚ್ಯೂರಿ ಹೇಳಿದ್ದಾರೆ.
ಬ್ಯಾಂಕ್ಗಳು ಹೇಳುವುದು ಏನು?
"ಅದಾನಿ ಸಂಸ್ಥೆಯ ವಂಚನೆ ಬಯಲಾದರೆ ನಮ್ಮ ಸಂಸ್ಥೆಗೆ ಯಾವುದೇ ಪರಿಣಾಮ ಉಂಟಾಗದು. ಈವರೆಗೆ ಯಾವುದೇ ಅಪಾಯ ನಮಗೆ ಕಂಡುಬಂದಿಲ್ಲ. ಇತ್ತೀಚೆಗೆ ಅದಾನಿ ಗ್ರೂಪ್ ಯಾವುದೇ ಫಂಡಿಂಗ್ ಅನ್ನು ಎಸ್ಬಿಐನಿಂದ ಪಡೆದಿಲ್ಲ. ಬ್ಯಾಂಕ್ ಮುಂದಿನ ದಿನಗಳಲ್ಲಿ ಅದಾನಿ ಗ್ರೂಪ್ಗೆ ಫಂಡಿಂಗ್ ನೀಡುವ ವಿಚಾರದಲ್ಲಿ ಕೊಂಚ ಚಿಂತನೆ ನಡೆಸುತ್ತದೆ," ಎಂದು ಎಸ್ಬಿಐ ಚೇರ್ಮನ್ ದಿನೇಶ್ ಕುಮಾರ್ ಖಾರಾ ತಿಳಿಸಿರುವಾಗಿ ವರದಿಯಾಗಿದೆ. "ಕಳೆದ ತಿಂಗಳಿನವರೆಗೂ ಅದಾನಿ ಗ್ರೂಪ್ ಸಂಸ್ಥೆಯಿಂದ ಸಾಲದ ಬಡ್ಡಿ ಮರುಪಾವತಿಯನ್ನು ಸರಿಯಾಗಿ ಮಾಡಿದೆ. ಈವರೆಗೆ ಯಾವುದೇ ಆತಂಕದ ಸ್ಥಿತಿ ಇಲ್ಲ. ಆದರೆ ಸ್ಥಿತಿಯ ಬಗ್ಗೆ ಸರಿಯಾಗಿ ಗಮನ ಹರಿಸಬೇಕು ಎಂದು ವಕ್ತಾರರು ಹೇಳಿದ್ದಾರೆ. ಈ ನಡುವೆ ಎಲ್ಐಸಿಯು ಅದಾನಿ ಮೇಲೆ ಮಾಡಿದ್ದ ಹೂಡಿಕೆಯಿಂದಾಗಿ ನಷ್ಟವನ್ನು ಅನುಭವಿಸಿದೆ.
ಏನಿದು ಹಿಂಡನ್ಬರ್ಗ್ ವರದಿ?
ತನಿಖಾ ಸಂಸ್ಥೆ ಹಿಂಡೆನ್ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.